ಪತ್ರಕರ್ತರಿಗೆ ಸುದ್ದಿಯ ವಿಶ್ಲೇಷಣೆ ಅಗತ್ಯ: ಜೋಗಿ
Team Udayavani, Aug 6, 2018, 12:43 PM IST
ಬ್ರಹ್ಮಾವರ: ಪತ್ರಕರ್ತರು ಮುಖ್ಯವಾಗಿ ಸುದ್ದಿಯ ಅವಸರ, ಅಳತೆ, ಅಜ್ಞಾನ ಮತ್ತು ಸಕಾಲಿಕತೆ ಈ ಅಂಶಗಳ ವಿಶ್ಲೇಷಣೆ ಮಾಡಿಕೊಳ್ಳಬೇಕು ಎಂದು ಸಾಹಿತಿ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.
ಅವರು ಇಲ್ಲಿನ ಬಂಟರ ಭವನದಲ್ಲಿ ರವಿವಾರ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೀಡಿದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವೃತ್ತಿ ಬದುಕಿನ ಅಪಾಯಗಳನ್ನು ಅರ್ಥ ಮಾಡಿಕೊಂಡು ಹೊರಬರುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು. ಪತ್ರಿಕೋದ್ಯಮ ಹೆಚ್ಚು ಮೌಲ್ಯವಾಗಿಸುವತ್ತ ಪ್ರಯತ್ನಿಸಬೇಕು ಎಂದರು.
ಉತ್ತಮ ಪತ್ರಕರ್ತ
ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಹಿತ್ಯಾಸಕ್ತಿ ಮತ್ತು ಜೀವನಾಸಕ್ತಿ ಬೆಳೆಸಿಕೊಂಡಲ್ಲಿ ಉತ್ತಮ ಪತ್ರಕರ್ತನಾಗಿ ಮೂಡಿಬರಲು ಸಾಧ್ಯ ಎಂದರು. ಪತ್ರಿಕೋದ್ಯಮ ಪದವು ಇಂದು ಮಾಧ್ಯಮವನ್ನು ಉದ್ಯಮವಾಗಿ ಬಿಂಬಿಸುತ್ತಿದೆ, ಇದಕ್ಕೆ ಪರ್ಯಾಯ ಪದ ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ, ಸಾಮಾನ್ಯ ಜನರು ನಂಬುವ ಮಾಧ್ಯಮ ಪತ್ರಿಕೆಯಾಗಿದ್ದು, ಇಂದಿನ ಮಾಧ್ಯಮಗಳಲ್ಲಿ ಸಾಮಾಜಿಕ ಬದ್ಧತೆ ಕಳಕಳಿಯ ತುರ್ತು ಅಗತ್ಯವಿದೆ ಎಂದರು.
ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಜಲಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರು, ಹೈದರಾಬಾದ್ ಸುಪ್ರಭಾತ್ ಗ್ರೂಪ್ ಆಫ್ ಹೊಟೇಲ್ಸ್ನ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಸಂಚಾಲಕ ಸುದರ್ಶನ ಹೆಗ್ಡೆ ಉಪಸ್ಥಿತರಿದ್ದರು. ಸಂಚಾಲಕ ವಸಂತ ಗಿಳಿಯಾರು ಪ್ರಸ್ತಾವನೆಗೈದರು. ಪತ್ರಕರ್ತರಾದ ಚಂದ್ರಶೇಖರ್ ಬೀಜಾಡಿ ನಿರೂಪಿಸಿ, ಮೋಹನ್ ಉಡುಪ ವಂದಿಸಿದರು.