ಸಮಯದ ಮಿತಿಯಲ್ಲಿ ತುರ್ತು ದುರಸ್ತಿಗೆ ಶ್ರಮ: ಗ್ಯಾರೇಜುಗಳಲ್ಲಿ ವಾಹನಗಳ ದಂಡು
Team Udayavani, Jun 25, 2021, 5:20 AM IST
ಉಡುಪಿ: ಉಡುಪಿ ಜಿಲ್ಲೆ ಅನ್ಲಾಕ್ ಆದ ಬಳಿಕ ಗ್ಯಾರೇಜುಗಳ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಸುಮಾರು ಒಂದೂವರೆ ತಿಂಗಳ ಲಾಕ್ಡೌನ್ನಿಂದ ದುರಸ್ತಿಗೆ ಒಳಗಾಗದ ದ್ವಿಚಕ್ರ, ತ್ರಿಚಕ್ರ, ಚತುಶ್ಚಕ್ರ ವಾಹನಗಳು ಈಗ ಒಮ್ಮೆಲೆ ಗ್ಯಾರೇಜುಗಳತ್ತ ಮುಖಮಾಡಿವೆ.
ಆಯಿಲ್ ಬದಲಾವಣೆ, ಸರ್ವಿಸ್, ವಾಹನಗಳ ಸ್ಟಾರ್ಟಿಂಗ್ ಟ್ರಬಲ್ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವಾಹನಗಳು ಗ್ಯಾರೇಜುಗಳತ್ತ ಬರುತ್ತಿವೆ. ಆದರೆ ಸಮಯದ ಮಿತಿ ಮತ್ತು ನೌಕರರ ಅಲಭ್ಯತೆಯಿಂದ ವಾಹನಗಳ ದುರಸ್ತಿ ಮಾಡಲು ಗ್ಯಾರೇಜು ಮಾಲಕರು ಒದ್ದಾಡುತ್ತಿದ್ದು ಇದ್ದ ನೌಕರರ ನೆರವಿನಿಂದ ತುರ್ತು ದುರಸ್ತಿ ಮುಗಿಸಲು ಶ್ರಮಿಸುತ್ತಿದ್ದಾರೆ.
500 ಗ್ಯಾರೇಜುಗಳು:
ಜಿಲ್ಲೆಯಲ್ಲಿ ಸುಮಾರು 500 ಗ್ಯಾರೇಜುಗಳಿದ್ದು ಮಾಲಕರು- ನೌಕರರು ಸೇರಿ ಸುಮಾರು 3,000 ಜನರಿದ್ದಾರೆ. ಆದರೆ ಪ್ರಸ್ತುತ ಬಸ್ ಸೌಕರ್ಯವಿಲ್ಲದ ಕಾರಣ ಹೆಚ್ಚಿನ ನೌಕರರು ಗ್ಯಾರೇಜು ಕೆಲಸಕ್ಕೆ ಬರುತ್ತಿಲ್ಲ. ಇದ್ದ ನೌಕರರನ್ನು ಸೇರಿಸಿಕೊಂಡು ತುರ್ತು ದುರಸ್ತಿ ಕಾರ್ಯ ನೆರವೇರಿಸಲಾಗುತ್ತಿದೆ.
ಅನ್ಲಾಕ್ ನಿಯಮಾನುಸಾರ ಸಂಜೆ 5ಕ್ಕೆ ವ್ಯವಹಾರ ಸ್ಥಗಿತಗೊಳಿಸಬೇಕಾದ ಕಾರಣ ಅಷ್ಟರೊಳಗೆ ಕೆಲಸಗಳನ್ನು ಮುಗಿಸುತ್ತಿದ್ದಾರೆ. ವಾಹನ ಮಾಲಕರು ವಾಹನಗಳನ್ನು ನಿಲ್ಲಿಸಿ ಹೋಗಿ ದುರಸ್ತಿಯಾದ ಬಳಿಕ ಬರುತ್ತಿರುವುದರಿಂದ ಗ್ಯಾರೇಜು ಗಳಲ್ಲಿ ಜನಸಂದಣಿ ಅಷ್ಟಾಗಿ ಕಂಡುಬಂದಿಲ್ಲ.
ಗ್ಯಾರೇಜ್ಗಳು ತೆರೆದುಕೊಂಡಿದ್ದರೂ ಬಸ್ ಸಂಚಾರ ಇಲ್ಲದ ಕಾರಣ ಎಲ್ಲ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. ವಾಹನ ಮಾಲಕರಿಗೆ ನಿಗದಿತ ಸಮಯಕ್ಕೆ ಮಿತಿಯಲ್ಲಿ ದುರಸ್ತಿ ಮಾಡಿಕೊಡಲಾಗುತ್ತಿದೆ. –ರೋಶನ್ ಕರ್ಕಡ ಕಾಪು, ಮಂಜುನಾಥ ಮಣಿಪಾಲ ಅಧ್ಯಕ್ಷರು, ಪ್ರ.ಕಾರ್ಯದರ್ಶಿಗಳು, -ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ, ಉಡುಪಿ.