ಶುಚಿಯಾಗಿಡಲು ಇರಬೇಕು ಪ್ರವಾಸಿಗರ ಬದ್ಧತೆ
Team Udayavani, Jun 5, 2019, 6:10 AM IST
ಬೈಂದೂರು: ನೈಸರ್ಗಿಕ ಸೌಂದರ್ಯದ ಸೋಮೇಶ್ವರ ಕಡಲ ಕಿನಾರೆ ಕಳೆದೊಂದು ವರ್ಷದಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಪ್ರವಾಸಿಗರ ನಿರ್ಲಕ್ಷ ಮತ್ತು ಸ್ವಚ್ಛತೆಯ ಬಗೆಗಿನ ನಿಷ್ಕಾಳಜಿಯಿಂದಾಗಿ ಸುಂದರ ತಾಣವೊಂದು ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ.
ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಕಸದ ರಾಶಿಗಳು
ಮೊದಲು ರಜಾ ದಿನಗಳಲ್ಲಿ ಮಾತ್ರ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಈಗ ಪ್ರತಿದಿನ ಪ್ರವಾಸಿಗರು ಕ್ಕಿಕ್ಕಿರಿದು ಸೇರುತ್ತಾರೆ. ಬೈಂದೂರಿನ ಅನತಿ ದೂರದಲ್ಲಿರುವ ಈ ಕಡಲ ಕಿನಾರೆ ಕಣ್ಮನ ಸೆಳೆಯುವಂತಿದ್ದು ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಸ್ಥಳೀಯ ಗ್ರಾ. ಪಂ. ಹಾಗೂ ಪ್ರವಾಸೋಧ್ಯಮ ಇಲಾಖೆ ಈಗಾಗಲೇ ಕಸ ನಿರ್ವಹಣೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಹಲವು ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿದೆ. ಆದರೆ ಪ್ರವಾಸಿಗರ ಬದ್ದತೆಯ ಕೊರತೆಯಿಂದ ಕಲ್ಲು ಹಾಸಿನ ಸುತ್ತ ತಿಂಡಿ ಪೊಟ್ಟಣ, ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ರಾಶಿ ಬಿದ್ದಿದೆ.
ಪ್ರತಿ ವರ್ಷ ವಿವಿಧ ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಸೋಮೇಶ್ವರ ಕಡಲ ಕಿನಾರೆ ಸ್ವಚ್ಛತೆ ಅಭಿಯಾನದ ಮೂಲಕ ಕಸ ತೆಗೆಯಲಾಗುತ್ತಿದೆ.
ಆದರೆ ಪ್ರತಿ ತಿಂಗಳು ಇದೇ ರೀತಿ ಮರುಕಳಿಸುತ್ತಿರುವುದು ಸ್ಥಳೀಯರಿಗೆ ಬೇಸರ ತಂದಿದೆ.ತಾತ್ಕಾಲಿಕವಾಗಿ ಕಸ ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ದೂರದಿಂದ ಬರುವ ಪ್ರವಾಸಿಗರಿಗೂ ಕೂಡ ಈ ಪ್ರದೇಶದ ಬಗ್ಗೆ ಅಸಹ್ಯ ಮೂಡುವ ಸಾಧ್ಯತೆ ಇದೆ.
ಹೀಗಾಗಿ ಗ್ರಾ.ಪಂ., ಪ್ರವಾಸೋಧ್ಯಮ ಇಲಾಖೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಕಿನಾರೆ ಸ್ವಚ್ಛತೆ ಬಗ್ಗೆ ವಿಶೇಷ ಆಸಕ್ತಿ ವಹಿಸುವ ಮೂಲಕ ಬೈಂದೂರಿನ ಮುಕುಟಪ್ರಾಯವಾದ ನೈಸರ್ಗಿಕ ಪ್ರವಾಸಿ ಸ್ಥಳವನ್ನು ಉಳಿಸಬೇಕಾಗಿದೆ.
ಒತ್ತುವರಿ ಜಾಗ ತೆರವುಗೊಳಿಸಬೇಕು
ಈ ಕಡಲ ಕಿನಾರೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ವಾಹನಗಳ ಸಂಖ್ಯೆ ಹೆಚ್ಚಿದೆ. ಇಲ್ಲಿನ ಸ್ಥಳೀಯರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಿದರೆ ಪಾರ್ಕಿಂಗ್ಗೆ ಸಾಕಷ್ಟು ಸ್ಥಳವಕಾಶ ದೊರೆಯುತ್ತದೆ. ಈ ಕುರಿತು ಉದಯವಾಣಿ ಈ ಹಿಂದೆ ಲೇಖನವನ್ನೂ ಪ್ರಕಟಿಸಿತ್ತು. ಆದ್ದರಿಂದ ಶೀಘ್ರ ಸರ್ವೆ ಕಾರ್ಯ ನಡೆಸಬೇಕೆನ್ನುವುದು ಸಹ ಪ್ರವಾಸಿಗರ ಆಶಯವಾಗಿದೆ.
– ಅರುಣ ಕುಮಾರ್ ಶಿರೂರು