ಜಡ್ಕಲ್, ಮುದೂರಿನಲ್ಲಿ ನೀರಿನ ಕ್ಷಾಮ
Team Udayavani, May 20, 2019, 6:00 AM IST
ನೀರಿಲ್ಲದೆ ಬರಿದಾಗಿರುವ ಬೆಳ್ಕಲ್ತೀರ್ಥ.
ಕೊಲ್ಲೂರು: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಕಡೆ ನೀರಿನ ಕ್ಷಾಮ ಎದುರಾಗಿದ್ದು ಮನೆಮನೆಗೆ ನೀರು ಒದಗಿಸುವಲ್ಲಿ ಗ್ರಾ.ಪಂ. ಹರಸಾಹಸ ಪಡ ಬೇಕಾಗಿದೆ.
ನೀರಿನ ಬವಣೆ
ಕನಗಲಾಡಿ, ಮದುಗುಮ್ಮಿ, ಉದಯ ಪುರ, ಹಾಲ್ಕಲ್ ಪರಿಸರದಲ್ಲಿ ಕೆರೆ, ಬಾವಿ ಸಂಪೂರ್ಣವಾಗಿ ಬತ್ತಿದೆ. ಈ ಭಾಗದ ಮಂದಿ ನೀರಿಗಾಗಿ ಬವಣೆ ಪಡುತ್ತಿದ್ದಾರೆ.
2 ದಿನಕ್ಕೊಮ್ಮೆ ನೀರು
ಇಲ್ಲಿನ ನಿವಾಸಿಗಳಿಗೆ 2 ದಿನಕ್ಕೊಮ್ಮೆ 200 ಲೀ. ನೀರನ್ನು ನೀಡಲಾಗುತ್ತಿದೆ. ಈ ಬಾರಿ ಹಿಂದೆಂದೂ ಕಂಡರಿಯದಷ್ಟು ಎದುರಾದ ಜಲ ಕ್ಷಾಮದಿಂದ ನಿವಾಸಿಗಳು ಆತಂಕಗೊಂಡಿದ್ದಾರೆ.
ಬತ್ತಿದ ಹೊಳೆ
12,000ದಷ್ಟು ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಡ್ಕಲ್ ಗ್ರಾ.ಪಂ. ವ್ಯಾಪ್ತಿ ಯಲ್ಲಿ ಕಾನ್ಕಿ, ಮುದೂರು, ಉದಯ ನಗರ ಸಹಿತ ಅನೇಕ ಗ್ರಾಮಗಳಿವೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕೊಡಚಾದ್ರಿಯ ಸನಿಹದ ಈ ಭಾಗದಲ್ಲಿ ಬೆಳ್ಕಲ್, ಸೌಪರ್ಣಿಕ ಹೊಳೆಯ ನೀರು ಹೆಚ್ಚಿನ ಉಪಯೋಗಕಾರಿಯಾಗಿತ್ತು. ಆದರೆ ಈ ಬಾರಿ ನದಿ, ಹೊಳೆಗಳು ಪೂರ್ಣವಾಗಿ ಬತ್ತಿದ್ದರಿಂದ ಕೃಷಿಕರು ಮತ್ತುಗ್ರಾಮಸ್ಥರು ಬರದಿಂದಾಗಿ ಆತಂಕಕ್ಕೆ ಒಳ ಗಾಗಿದ್ದಾರೆ.
ಕೃಷಿ ನಾಶದ ಭೀತಿ
ಜಡ್ಕಲ್, ಮುದೂರು ವ್ಯಾಪ್ತಿಯಲ್ಲಿ ರಬ್ಬರ್, ತೆಂಗು, ಅಡಿಕೆ, ಭತ್ತ, ಬಾಳೆ, ಕಾಳುಮೆಣಸು, ಸುವರ್ಣ ಗಡ್ಡೆ ಇನ್ನಿತರ ಕೃಷಿ ಇದೆ. ಕ್ಷಾಮದಿಂದ ಕೃಷಿ ಭೂಮಿ ನಾಶ ವಾಗುತ್ತಿರುವ ಹಿನ್ನೆಲೆಯಲ್ಲಿ ನೀರಿಗಾಗಿ ವರುಣನಿಗೆ ಮೊರೆ ಹೋಗಿದ್ದಾರೆ.