ಬಟ್ಟೆ ಕೈಚೀಲದಲ್ಲಿ ಮದುವೆ ಆಮಂತ್ರಣ ಮುದ್ರಣ!
ಎಂಜಿನಿಯರ್ ವರನ ಪರಿಸರ ಸಂದೇಶ
Team Udayavani, Jan 24, 2020, 5:23 AM IST
ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು ಅತೀ ವಿರಳವಾಗಿ ಕಾಣಸಿಗುತ್ತಾರೆ. ಆದರೆ ಎಂಜಿನಿಯರ್ ರಾಕೇಶ್ ಅವರ ಪರಿಸರಕಾಳಜಿ ನಿಜಕ್ಕೂ ಶ್ಲಾಘನೀಯ
ಉಡುಪಿ: ಪ್ಲಾಸ್ಟಿಕ್ ನಿಷೇಧದ ಬಳಿಕ ಅನೇಕ ಮಂದಿ ಪರಿಸರ ಕಾಳಜಿಯನ್ನು ವಿಭಿನ್ನವಾಗಿ ತೋರ್ಪಡಿಸಿ ಜವಾಬ್ದಾರಿ ಮೆರೆದಿದ್ದಾರೆ. ಸದ್ಯ ನಿಟ್ಟೂರಿನ ನಿವಾಸಿ ರಾಕೇಶ್ ಜೋಗಿ ಅವರೂ ತಮ್ಮ ಮದುವೆ ಆಮಂತ್ರಣವನ್ನೇ ಬಟ್ಟೆ ಕೈಚೀಲದಲ್ಲಿ ಮುದ್ರಿಸಿ ವಿಭಿನ್ನ ಆಮಂತ್ರಣ ನೀಡಿ, ಪರಿಸರ ಜಾಗೃತಿಗೂ ಕಾರಣವಾಗುತ್ತಿದ್ದಾರೆ.
ಹೊಸ ಆಲೋಚನೆ
ರಾಕೇಶ್ ಅವರು ಸ್ವಾತಿ ಅವರನ್ನು ಕೈಹಿಡಿಯುತ್ತಿದ್ದು, ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಏನಾದರೂ ಪರಿಸರ ಕಾಳಜಿ ತರಬೇಕೆಂದು ಯೋಚಿಸುತ್ತಿರುವಾಗ ಅವರಿಗೆ ಹೊಳೆದದ್ದು ಬಟ್ಟೆ ಕೈ ಚೀಲದಲ್ಲಿ ಮುದ್ರಣ.
ಕೈ ಚೀಲವೇ
ಆಮಂತ್ರಣ ಪತ್ರಿಕೆ!
ಬಟ್ಟೆಯ ಕೈ ಚೀಲದ ಮುಂಭಾಗದಲ್ಲಿ ಆಮಂತ್ರಣವಿದೆ. ರಾಕೇಶ್ ಅವರು ಹೇಳುವಂತೆ ಈ ಚೀಲವನ್ನು ಜನರು ಬಳಸಬಹುದು. ಕಾಗದವಾದರೆ ಅದನ್ನು ನೋಡಿ ಬಿಸಾಡುವುದೇ ಹೆಚ್ಚು. ಇದಕ್ಕಾಗಿ ಮತ್ತು ಪ್ಲಾಸ್ಟಿಕ್ಮುಕ್ತ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟು ಬಟ್ಟೆ ಚೀಲದಲ್ಲಿ ಆಮಂತ್ರಣ ಮುದ್ರಿಸಲಾಗಿದೆ. ಆಮಂತ್ರಣ ಪತ್ರದ ಕೊನೆಯಲ್ಲಿ ಪರಿಸರ ಸಂರಕ್ಷಣೆ ಕೈಗೊಳ್ಳುವುದೇ ನಮಗೇ ಕೊಡುವ ದೊಡ್ಡ ಗಿಫ್ಟ್ ಎಂಬ ಸಂದೇಶವನ್ನೂ ನೀಡಿದ್ದಾರೆ.
ರಾಕೇಶ್ ಅವರು ಈಗಾಗಲೇ ಅನೇಕ ಪರಿಸರ ಜಾಗೃತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದು , ಪ್ರವಾಸಕ್ಕೆ ತೆರಳುವ ಸಂದರ್ಭ ಅಲ್ಲಿನ ಪರಿಸರದಲ್ಲಿರುವ ಪ್ಲಾಸ್ಟಿಕ್ ಹೆಕ್ಕಿ ಜಾಗೃತಿ ಮೆರೆಯುತ್ತಿದ್ದಾರೆ.
ಮೆಚ್ಚುಗೆ
ಬಂಧು- ಮಿತ್ರರಿಗೆ ಈ ಆಮಂತ್ರಣ ಬಟ್ಟೆ ಕೈಚೀಲ ಹಂಚಿದಾಗ ಮೊದಲಿಗೆಲ್ಲರೂ ಚೀಲದ ಒಳಗೆ ಆಮಂತ್ರಣ ಪತ್ರ ಇದೆಯೇ ಎಂದು ಚೀಲದೊಳಗೆ ಕೈ ಹಾಕಿ ತಡಕಾಡಿದರು. ಬಳಿಕ ಚೀಲದ ಹೊರಗೆ ಗಮನಿಸಲು ತಿಳಿಸಿದಾಗ ಅಚ್ಚರಿ ಪಟ್ಟಿದ್ದಾರಂತೆ. ರಾಕೇಶ್ ಅವರ ತಾಯಿ ಕೂಡ ಇವರ ಹೊಸ ಚಿಂತನೆಗೆ ಬೆಂಬಲ ನೀಡಿದ್ದರು.
ಖುಷಿ ಅನಿಸಿತು
ಮಗ ಹಿಂದಿನಿಂದಲೂ ಪರಿಸರ ಕಾಳಜಿ ಬೆಳೆಸಿಕೊಂಡು ಬಂದಿದ್ದಾನೆ. ಬಟ್ಟೆ ಆಮಂತ್ರಣ ಪತ್ರಿಕೆಯ ಬಗ್ಗೆ ತಿಳಿಸಿದಾಗ ತುಂಬ ಖುಷಿ ಅನಿಸಿತು. ಇಂತಹ ಪರಿಸರ ಕಾಳಜಿಯನ್ನು ಇತರರೂ ಪಾಲಿಸುವಂತಾಗಬೇಕು. ಸ್ವತ್ಛತೆಗೆ ಗರಿಷ್ಠ ಆದ್ಯತೆ ಸಿಗಬೇಕು.
-ಪದ್ಮಾವತಿ, ರಾಕೇಶ್ ತಾಯಿ