ಗದ್ದೆ ಕೆಲಸಕ್ಕೂ ಬಂದರು ಒಡಿಶಾದ ಮಹಿಳೆಯರು
Team Udayavani, Jul 28, 2018, 6:15 AM IST
ಮಲ್ಪೆ: ಕಟ್ಟಡ ಕೆಲಸ, ಫ್ಯಾಕ್ಟರಿ ಇತ್ಯಾದಿಗಳಲ್ಲಿ ಬಿಹಾರ, ಒಡಿಶಾ ಜಾಖಂìಡ್ನ ಕೆಲಸಗಾರ ಇರುವುದು ಮತ್ತು ಕೆಲಸಮಾಡುತ್ತಿರುವುದು ಸಾಮಾನ್ಯ. ಈಗ ಕೃಷಿ ಕೆಲಸಕ್ಕೂ ಇವರು ದೊರಕುತ್ತಿದ್ದಾರೆ. ಕೃಷಿ ಕಾರ್ಮಿಕರ ಕೊರತೆಯಿಂದ ಕರಾವಳಿಯಾದ್ಯಂತ ರೈತರು ಕಂಗೆಟ್ಟಿದ್ದು, ಈ ಬಾರಿ ಉತ್ತರ ಭಾರತದ ಕಾರ್ಮಿಕರಿಂದಾಗಿ ತುಸು ಪರಿಹಾರ ಕಂಡುಕೊಂಡಿದ್ದಾರೆ. ಕೆಲವೆಡೆಗಳಲ್ಲಿ ಒಡಿಶಾ, ಜಾರ್ಖಂಡ್ಗಳ ಕಾರ್ಮಿಕರನ್ನು ಕರೆತಂದು ಕೃಷಿ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಕೃಷಿ ಕಾರ್ಯ ಸುಗಮವಾಗಿ ನಡೆಯುವಂತಾಗಿದೆ.
ಕೂಲಿ ದರವೂ ಕಡಿಮೆ
ಕೃಷಿ ಕಾರ್ಮಿಕರ ಕೊರತೆ ಪರಿಣಾಮ ಸ್ಥಳೀಯ ಕಾರ್ಮಿಕರ ದಿನದ ದರ ಹೆಚ್ಚಿತ್ತು. ಇದರಿಂದ ಸಣ್ಣ ಹಿಡುವಳಿದಾರರಿಗೆ ಆದಾಯಕ್ಕಿಂತ ಖರ್ಚೇ ಹೆಚ್ಚಾಗುತ್ತಿತ್ತು. ಸ್ಥಳೀಯ ಕಾರ್ಮಿಕರಿಗೆ ದಿನದ ವೇತನ 600 ರೂ.ರಿಂದ 800 ರೂ.ವರೆಗೆ ಇದ್ದರೆ, ಒಡಿಶಾದ ಕಾರ್ಮಿಕರಿಗೆ ಊಟ, ತಿಂಡಿ ಕೊಟ್ಟು 400 ರೂ. ನೀಡಿದರೆ ಸಾಕು.
ಕೆಲಸವೂ ವೇಗ
ಇವರು ಸ್ಥಳೀಯ ಕಾರ್ಮಿಕರಂತೆ ಅಲ್ಲ. ನಿತ್ಯ 7 ಗಂಟೆಗೆ ಕೆಲಸಕ್ಕೆ ತೊಡಗುವ ಅವರು ಸಂಜೆ 5 ಗಂಟೆ ವರೆಗೆ ಜಮೀನಿನಲ್ಲಿ ದುಡಿಯುತ್ತಾರೆ. ಕೆಲಸವೂ ವೇಗ. ಸುಮಾರು 14 ಮಂದಿಯ ಒಂದು ತಂಡ 8 ಗಂಟೆಯಲ್ಲಿ 2 ಎಕರೆ ಗದ್ದೆ ನಾಟಿ ಕಾರ್ಯ ಮಾಡಿಕೊಡುತ್ತಾರೆ. ಸ್ಥಳೀಯ ಕ್ರಮದಂತೆ ಇವರ ಕೆಲಸವೂ ಇದ್ದು ಕೃಷಿಕರಿಗೆ ಬಹಳಷ್ಟು ಉಪಯೋಗವಾಗಿದೆ.
ಬೇಸಗೆಯಲ್ಲಿ ಮೀನಿನ ಕೆಲಸ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಹೋರುವ, ಮೀನು ಕಟ್ಟಿಂಗ್ ಶೆಡ್ಗಳಲ್ಲಿ ಮೀನು ಕಟ್ಟಿಂಗ್ ಕೆಲಸಕ್ಕೆ ಹೋಗುವ ಒಡಿಶಾ, ಜಾರ್ಖಂಡ್ನ ಈ ಮಹಿಳೆಯರು ಕರಾವಳಿ ತೀರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಮಳೆಗಾಲದ ಎರಡು ತಿಂಗಳು ಮಾತ್ರ ಕೃಷಿ ಚಟುವಟಿಕೆಯಲ್ಲಿ ತೊಡಗುತಿದ್ದು, ಆಗಸ್ಟ್ ನಂತರ ಮೀನುಗಾರಿಕೆ ಆರಂಭಗೊಳ್ಳುವುದರಿಂದ ಮತ್ತೆ ಬರುವುದು ಮುಂದಿನ ಮಳೆಗಾಲಕ್ಕೆ.
ಚುರುಕಿನ ಕೆಲಸ
ಕೃಷಿಯಲ್ಲಿ ಯಾಂತ್ರೀಕರಣ ಬಂದರೂ ಕಾರ್ಮಿಕರ ಕೊರತೆ ಹೆಚ್ಚಾಗಿತ್ತು. ಸ್ಥಳೀಯ ಮಹಿಳೆಯರು ಈಗ ನಾಟಿ ಕಾರ್ಯಕ್ಕೆ ಬರುವುದಿಲ್ಲ. ಒರಿಸ್ಸಾ, ಜಾರ್ಖಂಡ್ ರಾಜ್ಯದ ಕೆಲಸಗಾರರು ಬಂದಿರುವುದು ಸಮಾಧಾನಕರ. ಚಹಾ ಮತ್ತು ಊಟಕ್ಕೆ ಸ್ವಲ್ಪ ಹೊತ್ತು ಬಿಟ್ಟರೆ, ದಿನವಿಡೀ ಕೆಲಸದಲ್ಲಿ ನಿರತರಾಗಿರುತ್ತಾರೆ.
– ಸುರೇಶ್ ಕಿದಿಯೂರು, ಕೃಷಿಕ
– ನಟರಾಜ್ ಮಲ್ಪೆ