ಹೆದ್ದಾರಿಯಲ್ಲಿ ಹೆಜಮಾಡಿ ಗ್ರಾಮಕ್ಕೆ “ರಾಂಗ್ ಸೈಡ್’ ಸವಾರಿ!
Team Udayavani, Jan 25, 2019, 12:50 AM IST
ಪಡುಬಿದ್ರಿ: ಹೆದ್ದಾರಿ ಚತುಃಷ್ಪಥ ಕಾಮಗಾರಿ ಬಳಿಕ ಹೆಜಮಾಡಿ ಗ್ರಾಮಕ್ಕೆ ಉಡುಪಿ ಭಾಗದಿಂದ ಒಳ ಪ್ರವೇಶಿಸಲು ಯಾವುದೇ ಅನುಕೂಲವಿಲ್ಲದ್ದರಿಂದ ರಾಂಗ್ ಸೈಡ್ ಸವಾರಿ ಅನಿವಾರ್ಯವೆಂಬಂತಾಗಿದೆ.
ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಮಟ್ಟದ ಸಭೆ ಹೆಜಮಾಡಿ ಗ್ರಾ. ಪಂ. ನಲ್ಲಿ ವರ್ಷಗಳ ಹಿಂದೆ ನಡೆದಿದ್ದರೂ ಇದಕ್ಕೆ ಯಾವುದೇ ಪರಿಹಾರ ಇದುವರೆಗೂ ಲಭ್ಯವಾಗಿಲ್ಲ.
ಬಸ್ಸು ಲಾರಿ ಮುಂತಾದ ಘನ ವಾಹನಗಳೂ, ಪ್ರಯಾಣಿಕರನ್ನು ಹೊತ್ತ ರಿಕ್ಷಾ, ಕಾರು, ಸ್ಕೂಟರ್ ಮುಂತಾದ ದ್ವಿಚಕ್ರ ವಾಹನಗಳು ಪಡುಬಿದ್ರಿ- ಉಡುಪಿ ಕಡೆಯಿಂದ ಹೆಜಮಾಡಿಗೆ ಸಂಚರಿಸುವ ವೇಳೆ ಮಂಗಳೂರಿಂದ ಬರುವ
ರಸ್ತೆಯಲ್ಲೇ ಎದುರು ಬದುರಾಗಿ ಸಾಗ ಬೇಕಾಗಿದೆ. ಇದು ತೀರ ಅಪಾಯ ಕಾರಿಯೂ ಹೌದು.
ಡಿವೈಡರ್ ಮಧ್ಯೆ ಅವಕಾಶವಿಲ್ಲ
ಸುಜ್ಲಾನ್ ಯೋಜನಾ ಪ್ರದೇಶದೊಳಕ್ಕೆ ಟ್ರೈಲರ್ಗಳು ಸಂಚರಿಸಲು ಜಾಗ ಬೇಕಾದ್ದರಿಂದ ಪಡುಬಿದ್ರಿಯ ವೀರಭದ್ರ ದೇಗುಲದ ಸಮೀಪದಲ್ಲಿ ಡಿವೈಡರ್ ಮಧ್ಯೆ ಜಾಗ ಬಿಡಲಾಗಿದೆ. ಹಾಗಾಗಿ ಗ್ರಾಮದ ರಸ್ತೆಗಿಂತ ಸುಮಾರು 1 ಕಿ. ಮೀ.
ಗಳಷ್ಟು ಹಿಂದೆ ಎಲ್ಲÉ ವಾಹನಗಳು ರಾಂಗ್ ಸೈಡ್ನಲ್ಲಿ ಸಂಚರಿಸಿ ಗ್ರಾಮ ಪ್ರವೇಶಿಸುತ್ತಿವೆ. ಈ ಭಾಗದಲ್ಲಿ ಸರ್ವಿಸ್ ರಸ್ತೆಯೂ ಇಲ್ಲದಿರುವುದರಿಂದ ಪರಿಸ್ಥಿತಿ ಶೋಚನೀಯವಾಗಿದೆ.
ಆರಂಭವಾಗಿದ್ದ ಕಾರ್ಯ ಮುಂದೆ ಸಾಗಲಿಲ್ಲ!
ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಟೋಲ್ ಸಂಬಂಧಿ ಮಾತುಕತೆಗಳ ವೇಳೆ ಹೆಜಮಾಡಿ ಗ್ರಾಮಸ್ಥರಿಗೆ ಅನುಕೂಲ ವಾಗುವಂತೆ ಸ್ಕೈ ವಾಕ್ ಅನ್ನು ನವಯುಗ ಟೋಲ್ ಪ್ಲಾಝಾ ಸಮೀಪ ನಿರ್ಮಿಸಲು ಮತ್ತು ಹೆಜಮಾಡಿಗೆ ಸಂಪರ್ಕ ನೀಡಲು ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಬಳಿಕ ಜಿಲ್ಲಾಧಿಕಾರಿ ಆದೇಶದಂತೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ನವಯುಗ ನಿರ್ಮಾಣ ಸಂಸ್ಥೆ ಮತ್ತು ಹೆಜಮಾಡಿ ನಾಗರಿಕರ ಸಭೆಯನ್ನು ಹೆಜಮಾಡಿ ಗ್ರಾ.ಪಂ.ನಲ್ಲಿ ವರ್ಷಗಳ ಹಿಂದೆ ಎರಡೆರಡು ಬಾರಿ ಕರೆಯಲಾಗಿತ್ತು. ಬಳಿಕ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಒಂದೆರಡು ಕೆಲಸಗಳು ನಡೆದಿದ್ದರೂ ಮುಂದೆ ಸಾಗಲಿಲ್ಲ.
ತಿಂಗಳ ಹಿಂದೆ ಸರ್ವೆ
ತಿಂಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆಜಮಾಡಿಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ನಡೆಸಿದ್ದಾರೆ. ಇದರ ವರದಿ ಕೇಂದ್ರಕ್ಕೆ ರವಾನಿಸಿ ಅನುಮೋದನೆ ಸಿಕ್ಕಿದ ಕೂಡಲೇ ನಿರ್ಮಾಣ ಕಾಮಗಾರಿ ನಡೆಯಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಸುಧಾಕರ ಕರ್ಕೇರ, ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ