44,815 ರೈತರ ಖಾತೆಗೆ 71.90ಕೋಟಿ ರೂ.
Team Udayavani, Sep 18, 2019, 12:10 PM IST
ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಅಧ್ಯಕ್ಷ ಎಸ್.ಎಲ್. ಘೋಟ್ನೆಕರ್ ಮಾತನಾಡಿದರು.
ಶಿರಸಿ: ಹವಾಮಾನ ಆಧಾರಿತ ಬೆಳೆವಿಮೆ ಹಾಗೂ ಫಸಲ್ ಬಿಮಾ ಯೋಜನೆಯಡಿ ಭತ್ತ ಮತ್ತು ಅಡಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 71.90ಕೋಟಿ ರೂ. ವಿಮಾ ಹಣ 44,815 ರೈತರ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಅಧ್ಯಕ್ಷ ಎಸ್.ಎಲ್. ಘೋಟ್ನೆಕರ್ ತಿಳಿಸಿದರು.
ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಕಾರ್ಯಚಟುವಟಿಕೆಗಳು, ಪ್ರಗತಿ ವಿವರ ನೀಡಿದರು. 2018ನೇ ಮುಂಗಾರು ಅಂಗಾಮಿನ ಫಸಲ್ ಬಿಮಾ ಯೋಜನೆಗೆ ಭತ್ತದ ಬೆಳೆಗೆ ಸಂಬಂಧಿಸಿ 13,780ಮಂದಿ ರೈತರಿಗೆ 19.30 ಕೋಟಿ ರೂ. ಜಮಾ ಆಗಿದೆ. ಇನ್ನು ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಯಡಿ ಅಡಕೆ ಕ್ಷೇತ್ರಕ್ಕೆ ಸಂಬಂಧಿಸಿ ಮೊದಲ ಹಂತದಲ್ಲಿ 16.26 ಕೋಟಿ ಜಮಾ ಆಗಿತ್ತು. ಇದೀಗ ಕಳೆದ ಎರಡು ದಿನಗಳಲ್ಲಿ ಮತ್ತೆ 25,519 ರೈತರ ಖಾತೆಗಳಿಗೆ ಒಟ್ಟು 36.31 ಕೋಟಿ ರೂ.ಜಮಾ ಆಗಿದೆ. ಈ ಮೂಲಕ ಅಡಕೆ ಕ್ಷೇತ್ರಕ್ಕೆ ಒಟ್ಟು 52.57 ಕೋಟಿ ರೂ. ವಿಮೆ ದೊರೆತಂತಾಗಿದೆ ಎಂದರು.
ರಾಜ್ಯ ಸರಕಾರ ಬೆಳೆಸಾಲ ಯೋಜನೆಯಡಿ ಜಿಲ್ಲೆಗೆ 86815 ರೈತರ 521 ಕೋಟಿ ರೂ.ಮನ್ನಾ ಆಗಬೇಕಿತ್ತು. ಅದರಲ್ಲಿ ಕಳೆದ ಮೇ ತಿಂಗಳಲ್ಲಿ 40 ಸಾವಿರ ರೈತರ 176.78 ಕೋಟಿ ಸಾಲಮನ್ನಾ ಹಣ ಬಿಡುಗಡೆಯಾಗಿದೆ. ಜುಲೈ ತಿಂಗಳಲ್ಲಿ 17,684 ರೈತರ 129.94 ರೂ ಮನ್ನಾ ರಖಂ ಬಂದಿದ್ದು ಈವರೆಗೆ ಜಿಲ್ಲೆಗೆ 57,003 ರೈತರ 306.72 ಕೋಟಿ ರೂ. ಮನ್ನಾ ಬಂದಂತಾಗಿದೆ. ಇನ್ನೂ 29,112 ರೈತರ 214 ಕೋಟಿ ರೂ. ಬರಬೇಕಿದೆ. ಸಾಲಮನ್ನಾ ರಖಂ ಬಿಡುಗಡೆ ವಿಳಂಬ ಆಗಿರುವುದರಿಂದ ಕೆಡಿಸಿಸಿ ಬ್ಯಾಂಕ್ಗೆ 7.85 ಕೋಟಿ ರೂ. ಬಡ್ಡಿ ಹಾನಿಯಾಗಿದೆ. ಇನ್ನುಳಿದ ಸಾಲಮನ್ನಾ ಹಣ ಬಿಡುಗಡೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿರುವುದಾಗಿ ಘೋಟ್ನೆಕರ್ ತಿಳಿಸಿದರು.
ಬ್ಯಾಂಕಿನ ಶೇರು ಬಂಡವಾಳ 58.57 ಕೋಟಿ ರೂ. ಗಳಿಂದ 69.87 ಕೋಟಿ ರೂ.ಗೆ ಏರಿಕೆಯಾಗಿದೆ. ನಿಧಿಗಳು 116.35 ಕೋಟಿ ರೂ.ಗಳಿಂದ 122.06 ಕೋಟಿಗೆ, ಠೇವು 1826.75 ಕೋಟಿಯಿಂದ 2021.41 ಕೋಟಿಗೆ ಏರಿಕೆಯಾಗಿ ಒಟ್ಟೂ ಆದಾಯ 194.79 ಕೋಟಿ ಆಗಿದೆ ಎಂದರು.