ಸೋದೆ ಮಠದಿಂದ ಕುಂಬ್ರಿ ದತ್ತು ಸ್ವೀಕಾರ
•ಕುಣಬಿಗಳಿಗೆ ನೆರವಿನ ಹಸ್ತ ಚಾಚಿದ ಮಠ•ಬೇಡ್ತಿ ನೆರೆ ನಿರಾಶ್ರಿತರಿಗೆ ಅಭಯ
Team Udayavani, Aug 16, 2019, 1:20 PM IST
ಶಿರಸಿ: ತುಂಬ್ರಿ ಗ್ರಾಮದಲ್ಲಿ ಕಂಡು ಬಂದ ದೃಶ್ಯ.
ಶಿರಸಿ: ಕಳೆದ ವಾರ ಅತಿಯಾದ ಮಳೆಗೆ ಉಕ್ಕಿದ ಬೇಡ್ತಿ ನದಿಯ ಪರಿಣಾಮ ಸಂಪೂರ್ಣ ಮನೆ ಕಳೆದುಕೊಂಡು ಬೀದಿಯಲ್ಲಿದ್ದ ಗ್ರಾಮವೊಂದನ್ನು ದತ್ತು ಪಡೆದು ಕಳೆದು ಹೋದದ್ದನ್ನು ಪುನಃ ಕಟ್ಟಿಕೊಡುವಲ್ಲಿ ಸೋದೆ ವಾದಿರಾಜ ಮಠ ಮುಂದಾಗಿದೆ.
ಸೋದೆ ಮಠದ ಯತಿಗಳಾದ ವಿಶ್ವವಲ್ಲಭ ಶ್ರೀಪಾದರ ಆಶಯದಂತೆ ಮನೆ, ಮನೆಯೊಳಗಿನ ವಸ್ತುಗಳನ್ನೂ ಅಕ್ಷರಶಃ ಕಳೆದುಕೊಂಡ ಅನಾಥ ಭಾವದಲ್ಲಿರುವ ಯಲ್ಲಾಪುರ ತಾಲೂಕು ಕಂಪ್ಲಿ ಗ್ರಾಪಂ ವ್ಯಾಪ್ತಿಯ ಸೋಮನಳ್ಳಿ ಬಳಿಯ ಕುಂಬ್ರಿ ಊರಿನ ಆರು ಕುಣಬಿ ಕುಟುಂಬಕ್ಕೆ ಮಠ ಆಸರೆಯಾಗಿ ನಿಲ್ಲಲು ತೀರ್ಮಾನಿಸಿದೆ.
ಪವಿತ್ರ ಚಾತರ್ಮಾಸ್ಯ ವ್ತತದಲ್ಲಿರುವ ಶ್ರೀಗಳು ಆರೂ ಕುಟುಂಬವನ್ನು ದತ್ತು ಪಡೆದು ಅವರು ಕಳೆದುಕೊಂಡ ಬದುಕನ್ನು ಪುನಃ ಕಟ್ಟಿಕೊಡಲು ಸೂಚಿಸಿದ್ದಾರೆ ಎಂದು ಮಠದ ಪರವಾಗಿ ಆಡಳಿತಾಧಿಕಾರಿ ಮಾಣಿಕ್ಯ (ರಾಧಾರಮಣ) ಉಪಾಧ್ಯಾಯ ತಿಳಿಸಿದ್ದಾರೆ.
ಮಠದ ಪ್ರತಿನಿಧಿಯಾಗಿ ಯಲ್ಲಾಪುರ ತಹಶೀಲ್ದಾರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ತುಂಬ್ರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀಗಳಿಗೆ ಚಿತ್ರಣ ನೀಡಿದ ಬಳಿಕ ಈ ಸಂಕಲ್ಪ ಮಾಡಿದ್ದಾರೆ ಎಂದೂ ವಿವರಿಸಿದ್ದಾರೆ.
ಪುರುಷ ಕುಣಬಿ, ಗಣಪತಿ ಕುಣಬಿ, ಗೋಪಾಲ ಕುಣಬಿ, ನಾಗೇಶ ಕುಣಬಿ, ಶಿವು ಕುಣಬಿ, ಕೇಶವ ಕುಣಬಿ ಕುಟುಂಬಗಳಿಗೆ ತೀವ್ರ ತೊಂದರೆ ಆಗಿದೆ.
ಇದೇ ಊರಿನ ಭುವನೇಶ್ವರಿ ಜೋಶಿಗೆ ಸಂಬಂಧಿತ ಮನೆ ಕೂಡ ಬಿದ್ದಿದೆ. ಈ ಕುಟುಂಬಗಳಿಗೆ ನೆರವಾಗಲು ಮಠ ಮುಂದಾಗಿದೆ. ತಕ್ಷಣಕ್ಕೆ ಮಳೆ ಕೂಡ ಇರುವುದರಿಂದ ಸ್ಥಳೀಯ ಮಂಚಿಕೇರಿ ಸೇವಾ ಸಹಕಾರಿ ಸಂಘದ ಮೂಲಕ ದಿನಸಿ ಹಾಗೂ ತಾತ್ಕಾಲಿಕ ನೆಲ ಹಾಸಲಿಗೆ ಕಲ್ಲು ಒದಗಿಸಲು ಮಠ ಚಿಂತಿಸಿದೆ. ದೀಪಾವಳಿ ಬಳಿಕ ಇನ್ನೊಮ್ಮೆ ನೆರೆ ಬಂದರೂ ಸಮಸ್ಯೆ ಆಗದಂತೆ ಸ್ಥಳ ನೋಡಿ ತಾಲೂಕು ಆಡಳಿತದ ಜೊತೆ ಸಮಾಲೋಚನೆ ನಡೆಸಿ ಶಾಶ್ವತ ಮನೆ ನಿರ್ಮಾಣ ಕೂಡ ಮಠ ಮಾಡಿಕೊಡಲು ಸಿದ್ಧವಿದೆ ಎಂದೂ ಮಾಣಿಕ್ಯ ಉಪಾಧ್ಯಾಯ ತಿಳಿಸಿದ್ದಾರೆ.