ಆಂಬ್ಯುಲೆನ್ಸ್ ಚಾಲಕರ ಅಳಲು
Team Udayavani, Apr 17, 2020, 6:52 PM IST
ಸಾಂದರ್ಭಿಕ ಚಿತ್ರ
ಭಟ್ಕಳ: ಜಿಲ್ಲೆಯಿಂದ ತುರ್ತು ಸಂದರ್ಭದಲ್ಲಿಯೂ ಸಹ ಆಂಬ್ಯುಲೆನ್ಸ್ಗಳನ್ನು ಉಡುಪಿ ಜಿಲ್ಲೆಗೆ ಬಿಡುತ್ತಿಲ್ಲ. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿದ್ದು, ಇನ್ನು ಮುಂದೆ ರೋಗಿಗಳನ್ನು ಕರೆದುಕೊಂಡು ಹೋಗುವುದಿಲ್ಲ ಎಂದು ತಾಲೂಕಿನ ಆಂಬ್ಯುಲೆನ್ಸ್ ಚಾಲಕರು ಹೇಳಿದ್ದಾರೆ.
ಸುದ್ದಿಗಾರರಿಗೆ ವಿಷಯ ತಿಳಿಸಿದ ಅವರು, ಜಿಲ್ಲಾಧಿಕಾರಿಗಳ ಪಾಸ್ ತೋರಿಸಿದರೂ ಅದಕ್ಕೆ ಕಿಮ್ಮತ್ತು ಕೊಡದೇ ಉಡುಪಿ ಜಿಲ್ಲಾಧಿಕಾರಿಗಳ ಪಾಸ್ ತೋರಿಸಿ ಎನ್ನುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ನಾವು ಉತ್ತರಕೊಡುವುದು ಕಷ್ಟಕರವಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು. ಜಿಲ್ಲೆಯಿಂದ ರೋಗಿಗಳನ್ನು ಹೊತ್ತ ಆಂಬ್ಯುಲೆನ್ಸ್ ಅನ್ನು ಗಂಟೆಗಟ್ಟಲೆ ಕಾಯಿಸುವುದು,ವಾಪಸ್ ಕಳುಹಿಸುವುದರಿಂದ ತೀವ್ರ ತೊಂದರೆಯಾಗಿದೆ. ತುರ್ತು ಸಂದರ್ಭದಲ್ಲಿ ಭಟ್ಕಳದಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದು ಆಸ್ಪತ್ರೆಗೆತೆರಳುವುದರಲ್ಲಿ ರೋಗಿಗೆ ಏನಾದರೂ ವ್ಯತ್ಯಯವಾದರೆ ಅದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.
ಸರ್ಕಾರವೇ ಹೊಣೆ: ಆಂಬ್ಯುಲೆನ್ಸ್ ಚಾಲಕರೂ ಜಿಲ್ಲಾಡಳಿತದ ಕ್ರಮಗಳ ಪರಿಣಾಮ ಉಡುಪಿ ಪ್ರವೇಶಿಸುವುದಿಲ್ಲ ಎಂದಿದ್ದಾರೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸಹ ದೊರೆಯದೆ ಜನರು ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ಸ್ಥಿತಿಗೆ ತಲುಪುವ ಲಕ್ಷಣ ಕಾಣುತ್ತಿದೆ. ತಕ್ಷಣ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಠಿಣ ನಿಲುವಿನ ಕ್ರಮ ಸಡಿಲಿಸಿ ರೋಗಿಗಳಿಗೆ ಪ್ರವೇಶ ಕಲ್ಪಿಸಬೇಕಿದೆ.