ಉತ್ತರ ಕರ್ನಾಟಕ ಮಟ್ಟದ ಬಾಲಕರ ಶಟಲ್ ಬ್ಯಾಡ್ಮಿಂಟನ್: ಗಮನ ಸೆಳೆದ ಯುವರಾಜ & ನವನೀತ್
Team Udayavani, Dec 22, 2021, 1:25 PM IST
ದಾಂಡೇಲಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಜನ್ಮದಿನದ ನಿಮಿತ್ತ ಹುಬ್ಬಳ್ಳಿಯ ಚೈತನ್ಯ ಸ್ಪೋರ್ಟ್ಸ್ ಫೌಂಡೇಶನ್ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಉತ್ತರ ಕರ್ನಾಟಕ ಮಟ್ಟದ ಬಾಲಕ, ಬಾಲಕಿಯರ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಕ್ರೀಡಾ ಪ್ರತಿಭೆಗಳಾದ ಯುವರಾಜ ಹೊಸಮಠ ಹಾಗೂ ನವನೀತ್ ಕಾಮತ್ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಗಮನ ಸೆಳೆದಿದ್ದಾರೆ.
13 ವರ್ಷದ ಬಾಲಕರ ವಿಭಾಗದಲ್ಲಿ ಯುವರಾಜ ಹೊಸಮಠ ಪ್ರಥಮ ಸ್ಥಾನವನ್ನು ಪಡೆದರೇ, 15 ವರ್ಷ ಒಳಗಿನ ಬಾಲಕರ ವಿಭಾಗದಲ್ಲಿ ನವನೀತ್ ಕಾಮತ್ ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾನೆ. ಇನ್ನೂ 15 ವರ್ಷದ ಬಾಲಕರ ಡಬಲ್ಸ್ ಪಂದ್ಯಾವಳಿಯಲ್ಲಿ ನವನೀತ್ ಕಾಮತ್ ಮತ್ತು ಯುವರಾಜ ಹೊಸಮಠ ಅವರ ತಂಡ ದ್ವಿತೀಯ ಸ್ಥಾನವನ್ನು ಪಡೆದು ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನಗರದ ಉದ್ಯಮಿ ನವೀನ್ ಕಾಮತ್ ಹಾಗೂ ನಿವೇದಿತಾ ಕಾಮತ್ ದಂಪತಿಗಳ ಸುಪುತ್ರನಾಗಿರುವ ನವನೀತ್ ಕಾಮತ್ ನಗರದ ಜೆವಿಡಿ ಆಂಗ್ಲ ಮಾದ್ಯಮ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ವರ್ತಕರಾದ ಬಸವರಾಜ ಹೊಸಮಠ ಮತ್ತು ರೋಹಿನಿ ದಂಪತಿಗಳ ಸುಪುತ್ರನಾಗಿರುವ ಯುವರಾಜ ಹೊಸಮಠ ಈತನು ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನಿನ ಕೋಚಿಂಗ್ ತರಗತಿಯ ವಿದ್ಯಾರ್ಥಿಗಳಾಗಿದ್ದು, ವಿವೇಕ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರುಗಳ ಸಾಧನೆಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನಿನ ಪದಾಧಿಕಾರಿಗಳು ಮತ್ತು ತರಬೇತಿದಾರರಾದ ವಿವೇಕ್ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.