ಪೊಲೀಸ್ ಕ್ವಾರ್ಟರ್ಸ್ ಗೆ ನುಗ್ಗಿದ ಮುಸುಕುಧಾರಿಗಳು : 2 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ
Team Udayavani, Jun 4, 2022, 8:20 PM IST
ಭಟ್ಕಳ: ಇಲ್ಲಿನ ಸಾಗರ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿ ರಾತ್ರಿ 12.45ರ ಸುಮಾರಿಗೆ ಸಂಗಮೇಶ ಧರಿಗೊಂಡ ಎನ್ನುವವರ ಮನೆಗೆ ಇಬ್ಬರು ಮುಸುಕು ಧಾರಿಗಳು ನುಗ್ಗಿ ಚಾಕುವನ್ನು ತೋರಿಸಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ನಾಗರತ್ನಾ ಸಂಗಮೇಶ ಧರಿಗೊಂಡ ನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ 12.45ರ ಸುಮಾರಿಗೆ ಮನೆಯೊಳಕ್ಕೆ ನುಗ್ಗಿದ ದರೋಡೆಕೋರರು ಮುಸುಕು ಹಾಕಿಕೊಂಡಿದ್ದು ಚಾಕುವನ್ನು ತೋರಿಸಿ ಬೆದರಿಸಿ ಮನೆಯಲ್ಲಿದ್ದ ಬೀರುವನ್ನು ಜಾಲಾಡಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬಂಗಾರದ ಮಂಗಳಸೂತ್ರ, ಉಂಗುರ, ಕಿವಿಯೋಲೆ ಇತ್ಯಾದಿ ಒಟ್ಟೂ 2 ಲಕ್ಷ ಮೌಲ್ಯದ ಆಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ಇದನ್ನೂ ಓದಿ : ಸಿಧು ಮೂಸೆವಾಲಾ ಕುಟುಂಬ ಸದಸ್ಯರನ್ನು ಭೇಟಿಯಾದ ಅಮಿತ್ ಶಾ
ದೂರನ್ನು ದಾಖಲಿಸಿಕೊಂಡ ಸಬ್ ಇನ್ಸಪೆಕ್ಟರ್ ಎಚ್.ಬಿ. ಕುಡಗುಂಟಿ ಅವರು ಇನ್ಸಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದಾರೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ದರೋಡೆಕೋರರ ಪತ್ತೆಗೆ ವಿಶೇಷ ಕಾರ್ಯಾಚರಣೆಗೆ ಇಲಾಖೆ ಕ್ರಮ ಕೈಗೊಂಡಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾಗರ ರಸ್ತೆಯಲ್ಲಿ ಪೊಲೀಸ್ ಕ್ವಾರ್ಟರ್ಸ್ ಇದ್ದು ಪೊಲೀಸರೇ ವಾಸ ಮಾಡುತ್ತಾರೆ. ಆದರೆ ಹೆಚ್ಚಿನ ಪೊಲೀಸರು ರಾತ್ರಿ ಪಾಳಿ, ಇಲ್ಲವೇ ಹೊರಗಿನ ಡ್ಯೂಟಿ ಇತ್ಯಾದಿಗಳಿಗೆ ಹೋಗುತ್ತಿರುವುದರಿಂದ ಪೊಲೀಸ್ ಕ್ವಾರ್ಟರ್ಸ್ನಲ್ಲಿಯೇ ಭದ್ರತೆ ಇಲ್ಲ ಎನ್ನವಂತಾಗಿದೆ. ಸರಕಾರ, ಜನ ಪ್ರತಿನಿದಿಗಳು ಇನ್ನಾದರೂ ಪೊಲೀಸ್ ಕ್ವಾರ್ಟರ್ಸ್ಗೆ ಸೂಕ್ತ ಕಂಪೌಂಡ್ ನಿರ್ಮಿಸಿ, ಸುತ್ತಲೂ ಸಿ.ಸಿ. ಟಿ.ವಿ. ಅಳವಡಿಕೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿಂದಿನಿಂದಲೂ ಪೊಲೀಸ್ ವಸತಿಗ್ರಹದಲ್ಲಿರುವವರು ತಮಗೆ ಭದ್ರತೆ ಇಲ್ಲಾ ಎನ್ನುವ ಮಾತುಗಳನ್ನಾಡುತ್ತಿದ್ದು ಸೂಕ್ತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.