ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ
Team Udayavani, Dec 7, 2019, 4:51 PM IST
ಸಿದ್ದಾಪುರ: ಜಮ್ಮು, ಕಾಶ್ಮೀರದಿಂದದಿಂದ ಕನ್ಯಾಕುಮಾರಿವರೆಗೆ ಬೈಸಿಕಲ್ ಮೂಲಕ 19 ದಿನ 5 ತಾಸುಗಳಲ್ಲಿ ಕ್ರಮಿಸಿ ಬಂದ ವಿಶಿಷ್ಟ ಸಾಧನೆಯನ್ನು ತಾಲೂಕಿನ ಹೆಗ್ಗರಣಿ(ಹೊಸ್ತೋಟ) ಸಮೀಪದ ಅತ್ತಿಗರಿಜಡ್ಡಿಯ ಡಾ| ಹರ್ಷವರ್ಧನ ನಾರಾಯಣ ನಾಯ್ಕ ಮಾಡಿದ್ದಾರೆ.
“ಸೆಲ್ಯೂಟ್ ಫಾರ್ ಅವರ್ ಸೋಲ್ಜರ್‘ ಘೋಷ ವ್ಯಾಕ್ಯವನ್ನಿಟ್ಟುಕೊಂಡು ನ.14ರಂದು ಬೆಳಗ್ಗೆ 7:30ಕ್ಕೆ ಜಮ್ಮು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ದಿಂದ ಬೈಸಿಕಲ್ ಏರಿ ಹೊರಟ ಡಾ| ಹರ್ಷವರ್ಧನ್, ಕನ್ಯಾಕುಮಾರಿಗೆ ಡಿ.3ರ ರಾತ್ರಿ 12ಕ್ಕೆ ತಲುಪುವ ಮೂಲಕ ಅಭೂತಪೂರ್ವ ಸಾಹಸಕ್ಕೆ ಸಾಕ್ಷಿಯಾದರು.
ಶ್ರೀನಗರದಿಂದ ಕನ್ಯಾಕುಮಾರಿವರೆಗಿನ 3751 ಕಿಮೀ ದೂರವನ್ನು ಈ ಅವಧಿಯಲ್ಲಿ ಕ್ರಮಿಸಿರುವ ಅವರು, ಜಮ್ಮು–ಕಾಶ್ಮೀರ್, ಪಂಜಾಬ್, ಹರಿಯಾಣ, ರಾಜಸ್ತಾನ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಸೇರಿದಂತೆ 8 ರಾಜ್ಯಗಳನ್ನು ಹಾದು ಬಂದು ಕನ್ಯಾಕುಮಾರಿ ಗಮ್ಯವನ್ನು ತಲುಪಿದ್ದಾರೆ. ಈ ಯಾನ ಆರಂಭಿಸುವ ಮುನ್ನ 20 ದಿನ ಲಡಾಕ್ನಲ್ಲಿ ಉಳಿದು ಬಾಡಿಗೆ ಸೈಕಲ್ನಲ್ಲಿ ಪ್ರಪಂಚದ ಅತಿ ಎತ್ತರದ ರಸ್ತೆ ಎಂದು ಪ್ರಸಿದ್ಧಿಯಾದಕರದುಂಗ್ಲಾ ರಸ್ತೆಯಲ್ಲಿ, ಲೆಹುಂಗ್ಲಾದಲ್ಲಿ ಅಭ್ಯಾಸ ನಡೆಸಿ, ನಂತರ ವಿಶ್ವದ 2ನೇ ಅತಿ ಶೀತ ಪ್ರದೇಶ ಎಂದು ಹೆಸರಾದ ಲೇಹ್–ಶ್ರೀನಗರದ ನಡುವಿನ 400 ಕಿಮೀ ರಸ್ತೆಯಲ್ಲಿ ಸಾಗಿ ಬಂದರು.
ಅಲ್ಲಿ ಸೈಕಲ್ ಸಂಚಾರಕ್ಕೆ ನಿರ್ಬಂಧವಿರುವ ಕಾರಣ ಮಧ್ಯೆ ಮಧ್ಯೆ ಮಿಲಿಟರಿಯವರು ಅವರ ವಾಹನದಲ್ಲಿ ಸುಮಾರು 100 ಕಿಮೀ ದೂರ ಕರೆ ತಂದರು. ಆ ರಸ್ತೆಯಲ್ಲಿ ಕೇವಲ 300 ಕಿಮೀ ಅಷ್ಟೇ ಬೈಸಿಕಲ್ನಲ್ಲಿ ಪಯಣಿಸಿದ ಕಾರಣ ಹರ್ಷವರ್ಧನ್ ಶ್ರೀನಗರದಿಂದ ಅಧಿಕೃತವಾಗಿ ತಮ್ಮ ಯಾನವನ್ನು ಆರಂಭಿಸಿದರು. ಕನ್ಯಾಕುಮಾರಿಯಿಂದ ದೂರವಾಣಿಯಲ್ಲಿ “ಉದಯವಾಣಿ‘ಯೊಂದಿಗೆ ಅನುಭವವನ್ನುಹಂಚಿಕೊಂಡ ಹರ್ಷವರ್ಧನ್, ನನಗೆ ಈ ಸಾಹಸಕ್ಕೆ ಪ್ರೇರಣೆ ನೀಡಿದ್ದು ಚಕ್ರವರ್ತಿ ಸೂಲಿಬೆಲೆ. ಜಾಗೋ ಭಾರತ್ ದೃಶ್ಯ–ಧ್ವನಿ ಮಾಲಿಕೆಯಲ್ಲಿ ಅವರ ಮಾತು ಹಾಗೂ ಚಿತ್ರಗಳನ್ನು ನೋಡಿ ಸ್ಫೂರ್ತಿಗೊಂಡೆ ಎಂದು ನೆನಪಿಸಿಕೊಂಡರು.
ಈ ಯಾನಕ್ಕೆ ಯಾರಿಂದಲೂ ಆರ್ಥಿಕ ನೆರವು ಪಡೆದಿಲ್ಲ. ನನ್ನ ಮನೆಯವರಿಂದ ಸಂಪೂರ್ಣ ಸಹಕಾರ ದೊರಕಿದೆ. ಈ ಯಾನದಲ್ಲಿ ಹಲವು ಅನುಭವಗಳು ದೊರಕಿವೆ. ನ.15ರಂದು ಶ್ರೀನಗರದ ಸಮೀಪ ಸಂಭವಿಸಿದ ಭೂ ಕುಸಿತದ ಕಾರಣ ಸುಮಾರು 30 ಕೀಮಿವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಆಗ ಅಲ್ಲಿನಸ್ಥಳೀಯರ ಸಹಕಾರದೊಂದಿಗೆ ಹಳ್ಳಿ ದಾರಿಯಲ್ಲಿ ದಾಟಿಕೊಂಡು ಮುಖ್ಯ ರಸ್ತೆಗೆ ಬಂದು ಸೇರಿದ ಘಟನೆಅವೀಸ್ಮರಣೀಯ. ಪಂಜಾಬ್ನ ಗುರುದ್ವಾರದಲ್ಲಿ ಉಳಿದುಕೊಂಡದ್ದು, ರಾಜಸ್ತಾನದ ಜನರ ಅತಿಥಿ ಸತ್ಕಾರ ಮರೆಯುವಂತಿಲ್ಲ ಎಂದರು.
ರಾಜಸ್ತಾನದ ಮುಸ್ಲಿಂ ಕುಟುಂಬದ ನಸೀಬ್ ಅನ್ನುವವರು ಮನೆಗೆ ಕರೆದುಕೊಂಡು ಹೋಗಿ ಊಟ ನೀಡಿ ಸತ್ಕರಿಸಿದ್ದು, ಮಧ್ಯಪ್ರದೇಶದಲ್ಲಿ ಮನೆಯಿಲ್ಲದ, ತೊಡಲು ಬಟ್ಟೆಯಿಲ್ಲದ ಓರ್ವ ಮಹಿಳೆಯನ್ನು ರಸ್ತೆ ಮಧ್ಯೆ ಕಂಡು ಆಕೆಗೆ ಒಂದಿಷ್ಟು ಬಾಳೆಹಣ್ಣು, ಹಣ ಕೊಡಲು ಹೋದಾಗ ಆಕೆ ಕೇವಲ ಬಾಳೆಹಣ್ಣು ತೆಗೆದುಕೊಂಡು ಹಣ ತೆಗೆದುಕೊಳ್ಳದೇ ಹೋದದ್ದನ್ನು ಸ್ಮರಿಸಿಕೊಂಡ ಹರ್ಷವರ್ಧನ್, ಈಗಲೂ ಬಡವರಾದರೂ ಜನ ಹಣಕ್ಕೆ ಆಸೆ ಪಡುವುದಿಲ್ಲ. ಸ್ವಾಭಿಮಾನವನ್ನು ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಅನುಭವ ಸಾಕ್ಷಿ. ಈ ಘಟನೆ ನನ್ನನ್ನು ತೀವ್ರವಾಗಿ ಕಾಡಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
-ಗಂಗಾಧರ ಕೊಳಗಿ