ಸುವರ್ಣ ತ್ರಿಭುಜ ಬೋಟ್ ಮೇಲೆತ್ತಿ
ನಾಪತ್ತೆಯಾದ ಮೀನುಗಾರರ ಪತ್ತೆಗೆ ಒತ್ತಾಯ•ನೌಕಾಪಡೆ ನಡೆಯತ್ತ ವ್ಯಕ್ತವಾದ ಸಂಶಯ
Team Udayavani, May 22, 2019, 1:32 PM IST
ಕುಮಟಾ: ಮೀನುಗಾರರ ಚಿಂತನಾ ಸಭೆಯಲ್ಲಿ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಮಾತನಾಡಿದರು.
ಕುಮಟಾ: ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಸಮುದ್ರದಾಳದಲ್ಲಿ ಕಾಣಿಸಿದೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದು, ತಕ್ಷಣ ಬೋಟನ್ನು ಮೇಲಕ್ಕೆತ್ತುವ ಕಾರ್ಯ ನಡೆಸಬೇಕೆಂದು ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಆಗ್ರಹಿಸಿದರು.
ಮೀನುಗಾರರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬೋಟ್ ಅವಘಡದಲ್ಲಿ ನಾಪತ್ತೆಯಾದ 7 ಮೀನುಗಾರರಲ್ಲಿ ಐವರು ಉತ್ತರ ಕನ್ನಡದವರಾಗಿದ್ದಾರೆ. ಘಟನೆ ನಡೆದು 5 ತಿಂಗಳಾದರೂ ಈ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ ಈಗ ನೌಕಾಪಡೆ ವಿಷಯ ಪ್ರಸ್ತಾಪಿಸಿದ್ದರೂ ಬೋಟ್ ಮೇಲಕ್ಕೆತ್ತಿಲ್ಲ. 7 ಮೀನುಗಾರರು ಏನಾದರು ಎಂಬ ಸುಳಿವು ದೊರೆತಿಲ್ಲ. ಹೀಗಾಗಿ ಬೋಟ್ ಹಾಗೂ ಮೀನುಗಾರರ ಪತ್ತೆಗೆ ನಾವೆಲ್ಲ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, 7 ಮೀನುಗಾರರು ನಾಪತ್ತೆಯಾಗಿರುವುದು ಮೀನುಗಾರ ಸಮಾಜವನ್ನು ಆತಂಕಕ್ಕೆ ಈಡು ಮಾಡಿದೆ. ಕಳೆದ ಮೇ 1 ರಂದು ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಮಾಲ್ವಾಣ ಸಮುದ್ರದ 33 ನಾಟಿಕಲ್ ಮೈಲ್ ದೂರದಲ್ಲಿ ಸುಮಾರು 60 ಮೀ. ಆಳದಲ್ಲಿ ಸುವರ್ಣ ತ್ರಿಭುಜ ಬೋಟ್ ಮುಳುಗಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದು, ಅವರೇ ಮೀನುಗಾರಿಕೆ ಬೋಟ್ಗೆ ಡಿಕ್ಕಿ ಹೊಡೆದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಬೋಟ್ ನಾಪತ್ತೆಯಾದ 4-5 ದಿನದಲ್ಲೇ ತನಿಖಾಧಿಕಾರಿಗಳು ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ನೌಕಾಪಡೆಯ ಐಎನ್ಎಸ್ ಕೊಚ್ಚಿ ಹಡಗಿನ ತಳಭಾಗಕ್ಕೆ ಹಾನಿಯಾಗಿರುವುದು ಅಂದೇ ಕಂಡು ಬಂದಿತ್ತು. ಆದರೆ ಅಂದು ಸಮುದ್ರದಾಳದಲ್ಲಿ ಮುಳುಗಿದ ಹಡಗು 15 ದಿನ ಹುಡುಕಿದರೂ ಸಿಕ್ಕಿರಲಿಲ್ಲ. ಆದರೆ ಈಗ ಹುಡುಕಿದ 4 ದಿನದಲ್ಲಿ ಬೋಟ್ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದಾರೆ. ಬೋಟ್ನ್ನು ಹುಡುಕಿದ ನೌಕಾಪಡೆಯವರು ಬೋಟ್ ಮೇಲಕ್ಕೆತ್ತುವ ಕಾರ್ಯ ಮಾಡದಿರುವುದು ಯಾಕೆ? ಅದರಲ್ಲಿದ್ದ ಮೀನುಗಾರರ ಪತ್ತೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದು ಪ್ರಶ್ನೆಯಾಗಿದೆ. ತಕ್ಷಣ ಬೋಟ್ ಮೇಲಕ್ಕೆತ್ತಬೇಕು ಹಾಗೂ ಮೀನುಗಾರರ ಸುಳಿವು ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಮೀನುಗಾರರ ಸಂಘದ ಮುಖಂಡ ಟಿ.ಬಿ. ಹರಿಕಾಂತ ಪ್ರಾಸ್ತಾವಿಕ ಮಾತನಾಡಿ, ಎಲ್ಲಾ ಮೀನುಗಾರ ಮುಖಂಡರೂ ಸಹಿತ ಪಕ್ಷಬೇಧ ಮರೆತು ಒಗ್ಗಟ್ಟಾಗಬೇಕಿದೆ. ಸಮಾಜದ ವಿಷಯ ಬಂದಾಗ ತಮ್ಮ ತಮ್ಮ ಪಕ್ಷವನ್ನು ಬದಿಗಿಟ್ಟು ಮೀನುಗಾರರಿಗೆ ನ್ಯಾಯ ಕೊಡಿಸುವುದು ತಮ್ಮೆಲ್ಲರ ಕರ್ತವ್ಯ. ಮೀನುಗಾರರ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಈ ಚಿಂತನಾ ಸಭೆ ಹಮ್ಮಿಕೊಂಡಿದ್ದು, ಇದರ ನಿರ್ಣಯದಂತೆ ಮುನ್ನೆಡೆಯಲಾಗುವುದು ಎಂದರು.
ಮುಖಂಡರಾದ ಸದಾನಂದ ಹರಿಕಂತ್ರ, ಗಣೇಶ ಅಂಬಿಗ, ಬಾಬು ಕುಬಾಲ, ಉಮೇಶ ಖಾರ್ವಿ, ಜಗದೀಶ ಹರಿಕಂತ್ರ, ನಾಗರಾಜ ಹರಿಕಂತ್ರ, ಅಶೋಕ ಕಾಸರಕೋಡ, ಸುಧಾಕರ ತಾರಿ, ಶಾಂತಾರಾಮ ಹರಿಕಂತ್ರ ಹಾಗೂ ಇತರರು ಮಾತನಾಡಿದರು. ಅನಿತಾ ಮಾಪಾರಿ, ಶಿವರಾಮ ಹರಿಕಾಂತ ಸೇರಿದಂತೆ ಹಲವಾರು ಮೀನುಗಾರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ