ಮುಂದುವರಿದ ನಾಮಫಲಕ ಗೊಂದಲ
ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸದಸ್ಯರ ನಿರ್ಧಾರ
Team Udayavani, Jun 29, 2022, 5:49 PM IST
ಭಟ್ಕಳ: ಭಟ್ಕಳ ಪುರಸಭೆಗೆ ನಾಮಫಲಕ ಅಳವಡಿಕೆಗೆ ಸಂಬಂಧಪಟ್ಟಂತೆ ಉಂಟಾಗಿರುವ ಗೊಂದಲ ಮುಂದುವರಿದಿದ್ದು ಮಂಗಳವಾರ ಸಂಜೆ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಶೀಲ್ದಾರ್ ಡಾ| ಸುಮಂತ್ ಬಿ.ಇ., ಭೇಟಿ ನೀಡಿ ಪುರಸಭಾ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ಕೆಲಕಾಲ ಚರ್ಚಿಸಿದರು.
ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಪುರಸಭೆ ನಾಮಫಲಕದಲ್ಲಿ ಉರ್ದು ಭಾಷೆ ಕಳೆದ ಹಲವಾರು ವರ್ಷಗಳಿಂದ ಹಾಕಿಕೊಂಡು ಬರಲಾಗಿದೆ. ಉರ್ದು ಬಾಷೆಯಲ್ಲಿ ನಾಮಫಲಕ ಬರೆಸುವಂತೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿದ್ದು ಅದರಂತೆ ಬರೆಸಲಾಗಿದೆ. ಸರಕಾರದ ನಿಯಮಾವಳಿಯಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕನ್ನಡ ಪರ ಸಂಘಟನೆಗಳು ವಿವಾದ ಉಂಟು ಮಾಡಿದ್ದರಿಂದ ಇನ್ನೊಮ್ಮೆ ಸಾಮಾನ್ಯ ಸಭೆ ಕರೆದು ನಡೆದುಕೊಳ್ಳಲು ಪುರಸಭಾ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಹೇಳಿದರೆನ್ನಲಾಗಿದೆ. ಒಂದಾನುವೇಳೆ ನಿಯಮಾವಳಿಯಂತೆ ಪುರಸಭಾ ಆಡಳಿತ ಮಂಡಳಿ ನಡೆದುಕೊಳ್ಳದೇ ಇದ್ದಲ್ಲಿ ಜಿಲ್ಲಾಡಳಿತ ಮುಂದಿನ ಕ್ರಮ ಜರುಗಿಸಲು ಬರುವುದು ಎಂತಲೂ ಕೂಡಾ ಒಪ್ಪಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪುರಸಭೆಯಲ್ಲಿ ಅಳವಡಿಸಲಾಗಿರುವ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ನಾಮಫಲಕ ಹಾಗೆಯೇ ಮುಂದುವರಿಯಲಿದ್ದು ಮುಂದಿನ ಸಾಮಾನ್ಯ ಸಭೆಯ ನಂತರವೇ ನಿರ್ಣಯವಾಗಬೇಕಿದೆ ಎನ್ನಲಾಗಿದೆ.
ಪುರಸಭಾ ನಾಮಫಲಕಕ್ಕೆ ಸಂಬಂಧಪಟ್ಟಂತೆ ಕನ್ನಡ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಪುರಸಭಾ ಆಡಳಿತದೊಂದಿಗೆ ಸೂಕ್ತ ಚರ್ಚೆ ನಡೆಸಿದ್ದೇನೆ. ಸಾಮಾನ್ಯ ಸಭೆಯ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಅಲ್ಲಿಯ ತನಕ ಯಥಾ ಸ್ಥಿತಿ ಕಾಪಾಡಲು ಸೂಚನೆ ನೀಡಲಾಗಿದ್ದು ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ತಿಳಿಸಿದರು.