ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸಿಗೆ ಅಭಿನಂದನೆ
Team Udayavani, Jul 5, 2020, 2:53 PM IST
ಭಟ್ಕಳ: ತಾಲೂಕಿನಲ್ಲಿ ಬಿಇಒ ಹಾಗೂ ಎಲ್ಲ ಶಿಕ್ಷಕರು, ಅಧಿಕಾರಿಗಳ ಸಹಕಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಉತ್ತಮ ರೀತಿಯಲ್ಲಿ ನಡೆದಿದ್ದು ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ. ಪಾಲಕರು ಬಹಳ
ಆತಂಕದಲ್ಲಿರುವಾಗ ಸರಕಾರ ಉತ್ತಮ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಯಾವುದೇ ಅಡ್ಡಿ ಆತಂಕವಿಲ್ಲದೆ ಪರೀಕ್ಷೆ ನಡೆಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳೀಯವಾಗಿ ಶಿಕ್ಷಣ ಅಧಿಕಾರಿಗಳು, ತಾಲೂಕು ಆಡಳಿತ, ವೈದ್ಯಕೀಯ ಸಿಬ್ಬಂದಿ ಹಾಗೂ ವಿಶೇಷವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಕಾರ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಿತ್ತು. ಈ ಕುರಿತು ಮಾತನಾಡಿದ ಬಿಇಒ ಎಂ.ಆರ್. ಮುಂಜಿ, ಜವಾಬ್ದಾರಿಯುತವಾಗಿ ಪರೀಕ್ಷೆ ನಡೆಸಲು ಸಹಕರಿಸಿದ ತಾಲೂಕಿನ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಪರೀಕ್ಷಾ ಮಾರ್ಗಾಧಿಕಾರಿಗಳು, ಪ್ರಶ್ನೆ ಪತ್ರಿಕೆ ಪಾಲಕರು, ಕೊಠಡಿ ಮೇಲ್ವಿಚಾರಕರು, ಮೊಬೆ„ಲ್ ಸ್ವಾಧೀನಾಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಸ್ವಯಂ ಸೇವಕರಾದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರುಗಳಿಗೆ ಹಾಗೂ ವಿವಿಧ ಇಲಾಖೆಗಳು, ಪೊಲೀಸ್ ಸಿಬ್ಬಂದಿಗಳು, ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಪರೀಕ್ಷೆಯ ಆರಂಭದಿಂದ ಕೊನೆಯ ತನಕವೂ ಪ್ರತಿ ಹಂತದಲ್ಲಿಯೂ ಉಪ ನಿರ್ದೇಶಕ ಹರೀಶ್ ಗಾಂವ್ಕರ್ ಮಾರ್ಗದರ್ಶನ, ಜಿಲ್ಲಾ ನೋಡಲ್ ಅಧಿಕಾರಿ ಶ್ರೀಕಾಂತ ಹೆಗಡೆ, ಎನ್.ಜಿ.ನಾಯಕ, ಲತಾ, ತಾಲೂಕು ನೋಡಲ್ ಅಧಿಕಾರಿ ಪ್ರಕಾಶ ಶಿರಾಲಿ ಹಾಗೂ ಇತರರ ಸಹಕಾರ ಸ್ಮರಿಸಿದರು. ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ತಾಲೂಕಿಗೆ ಉತ್ತಮ ಹೆಸರು ತರಲೆಂದೂ ಹಾರೈಸಿದರು. ತಾಲೂಕು ನೋಡಲ್ ಅಧಿಕಾರಿ ಪ್ರಕಾಶ ಶಿರಾಲಿ ಉಪಸ್ಥಿತರಿದ್ದರು.