ಕೃಷಿಯನ್ನೂ ಉದ್ದಿಮೆಯೆಂದು ಪರಿಗಣಿಸಿ
Team Udayavani, Sep 11, 2019, 11:14 AM IST
ಶಿರಸಿ: ಶಶಿಕಲಾ ಮತ್ತು ಶಾಂತಾರಾಮ ಹೆಗಡೆ ತಟ್ಟೀಕೈ ಅವರನ್ನು ಶ್ರೀಗಳ ಸಮ್ಮಾನಿಸಿದರು.
ಶಿರಸಿ: ಸ್ವ ಸಹಾಯ ಸಂಘಗಳು ಉತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಸಂಘಗಳನ್ನು ಕ್ರಿಯಾಶೀಲಗೊಳಿಸಬೇಕು. ಪ್ರಯತ್ನಶೀಲನಿಗೆ ಸಂಪತ್ತು ಒಲಿಯುತ್ತವೆ ಎಂದು ಸೊಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಮಂಗಳವಾರ ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆದ ಗ್ರಾಮಾಭ್ಯುದಯದ ಸಂಘಗಳ ಸ್ವಾವಲಂಬಿ ಸಮಾವೇಶದಲ್ಲಿ ಸಾನ್ನಿಧ್ಯ ನೀಡಿ ಅವರು ಆಶೀರ್ವಚನ ನೀಡಿದರು.
ಸ್ವಸಹಾಯ ಸಂಘಗಳ ಮೂಲಕ ಕುಟುಂಬದ ಅಭಿವೃದ್ದಿ ಆಗಬೇಕು. ಕೃಷಿ ಕೆಲಸ ಮಾಡಿಕೊಳ್ಳಬೇಕು. ಕೃಷಿ, ತೋಟಗಾರಿಕೆ ಒಂದು ಉದ್ದಿಮೆ. ಕೃಷಿಯನ್ನೂ ಉದ್ದಿಮೆ ಎಂದು ಸರಕಾರ ಪರಿಗಣಿಸಬೇಕು ಎಂದರು.
ಕೃಷಿಗೆ ಬ್ಯಾಂಕ್ ಕೂಡ ಸಾಲದ ವ್ಯವಸ್ಥೆ ಮಾಡಬೇಕು. ಉದ್ದಿಮೆಗಳಿಗಿಂತ ಕೃಷಿ ಹೊರತಾಗಿಲ್ಲ, ಭಿನ್ನವಾಗಿಲ್ಲ ಎಂದರು.
ಸಂಘಗಳು ಕೃಷಿ, ತೋಟಗಾರಿಕಾ, ಅರಣ್ಯ ಅವಲಂಬಿತ ಕೆಲಸ ಮಾಡಬೇಕಿದೆ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ಪ್ರತಿಯೊಂದು ಸ್ವ ಸಹಾಯ ಸಂಘಗಳೂ ಒಂದೊಂದು ಕ್ಷೇತ್ರದ ಅವಕಾಶ ಸೃಷ್ಟಿಸಿಕೊಳ್ಳಬೇಕು. ಆರ್ಥಿಕ ಬಲವರ್ಧನೆ ಮಾಡಿಕೊಳ್ಳಬೇಕಾಗಿದೆ ಎಂದರು.
ತೋಟಗಾರಿಕಾ ಅಧಿಕಾರಿ ಸತೀಶ ಹೆಗಡೆ, ಸ್ವಸಹಾಯ ಸಂಘಗಳು ಜೇನು ಕೃಷಿ ಮಾಡಬಹುದು. ಸ್ವಾವಲಂಬಿಯಾಗಿ ಸಂಘಗಳು ಜೇನು ವ್ಯವಸಾಯದಿಂದ ಬದುಕು ನಡೆಸಬಹುದು. ಜೇನು ವ್ಯವಸಹಾಯಕ್ಕೆ ನೆರವಿದೆ ಎಂದರು.
ಅಧ್ಯಕ್ಷತೆಯನ್ನು ಗ್ರಾಮಾಭ್ಯುದಯದ ಅಧ್ಯಕ್ಷ ಶಿವಾನಂದ ದೀಕ್ಷಿತ ವಹಿಸಿದ್ದರು.
ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕ್ಯಾಂಮ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ನಿಡಗೋಡ, ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಲ್.ಎಂ. ಹೆಗಡೆ, ವಿಜ್ಞಾನಿ ಡಾ| ಶಿವಶಂಕರಮೂರ್ತಿ ಇದ್ದರು.
ಎಂ.ಕೆ. ಹೆಗಡೆ ಗೋಳಿಕೊಪ್ಪ ಫಲ ಸಮರ್ಪಿಸಿದರು. ಗಣಪತಿ ಭಟ್ಟ ಹರಿಮನೆ ಸ್ವಾಗತಿಸಿದರು. ವಿ. ಶಂಕರ ಭಟ್ಟ ಸಮ್ಮಾನ ಪತ್ರ ವಾಚಿಸಿದರು. ಸಂತೋಷ ಭಟ್ಟ ಕೋಡಿಗಾರ ವಂದಿಸಿದರು. ರಮೇಶ ಹೆಗಡೆ ದೊಡ್ನಳ್ಳಿ ನಿರ್ವಹಿಸಿದರು. ಇದೇ ವೇಳೆ ಶಶಿಕಲಾ ಮತ್ತು ಶಾಂತಾರಾಮ ಹೆಗಡೆ ತಟ್ಟೀಕೈ ಅವರನ್ನು ಶ್ರೀಗಳ ಸಮ್ಮಾನಿಸಿದರು.