ದಾಂಡೇಲಿ : ಯುಜಿಡಿ ಅಸಮರ್ಪಕ ಕಾಮಗಾರಿಯಿಂದ ಸಾರ್ವಜನಿಕರು ಹೈರಾಣು
Team Udayavani, Aug 5, 2021, 8:55 PM IST
ದಾಂಡೇಲಿ : ಹಲವಾರು ಸಮಸ್ಯೆಗಳಿಗೆ ಅದ್ವಾನಗಳಿಗೆ ಕಾರಣವಾದ ಯುಜಿಡಿ ಕಾಮಗಾರಿಯಿಂದಾಗಿ ನಗರದ ಸಾರ್ವಜನಿಕರು ಹೈರಾಣವಾಗಿದ್ದಾರೆ.
ನಗರದ ಬಹುತೇಕ ರಸ್ತೆಗಳು ತೀವ್ರ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವೆನಿಸುವಂತಾಗಿದೆ. ಯುಜಿಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಪೈಪ್ ಆಳವಡಿಸಿದ ಬಳಿಕ ಮುಚ್ಚಲಾಗಿದ್ದರೂ ಸಮರ್ಪಕವಾಗಿ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಬಹುತೇಕ ರಸ್ತೆಗಳು ಅಸ್ತವ್ಯಸ್ತಗೊಂಡಿದೆ. ಪರಿಣಾಮವಾಗಿ ಸಂಚಾರ ದುಸ್ತರಗೊಂಡಿದೆ.
ನಗರದ ಮಾರುತಿನಗರ-ಗಾಂಧಿನಗರದ ರಸ್ತೆಯು ಇದೇ ಪರಿಸ್ಥಿತಿಯನ್ನು ಹೊಂದಿದ್ದು, ಗುರುವಾರ ಮಧ್ಯಾಹ್ನ ಮನೆ ಮನೆಗೆ ಅಡುಗೆ ಅನಿಲ ಸಿಲಿಂಡರುಗಳನ್ನು ವಿತರಣೆ ಮಾಡಲು ಹೋಗುತ್ತಿದ್ದ ಗೂಡ್ಸ್ ವಾಹನವೊಂದು ಯುಜಿಡಿ ಪೈಪ್ಲೈನಿಗಾಗಿ ಅಗೆದು ಮುಚ್ಚಿದ ರಸ್ತೆಯ ಮಧ್ಯದಲ್ಲಿ ಹೂತು ಹೋಗಿ ಬಹಳಷ್ಟು ಹೊತ್ತು ಪ್ರಯಾಸ ಪಟ್ಟ ಘಟನೆ ನಡೆದಿದೆ.
ಕೊನೆಗೆ ಏನು ಆಗದೇ ಇದ್ದಾಗ ಹೂತೋದ ವಾಹನದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ಗಳನ್ನು ಕೆಳಗಡೆ ಇಳಿಸಿ, ಆನಂತರ ಸ್ಥಳೀಯರ ಹಾಗೂ ಯುಜಿಡಿ ಕಾರ್ಮಿಕರ ಸಹಾಯದಿಂದ ಹೂತೀದ ವಾಹನವನ್ನು ಮೇಲಕ್ಕೆತ್ತಿ ತಳ್ಳಲಾಯಿತು. ಸುಮಾರು ಒಂದುವರೆ ಗಂಟೆಗಳವರೆಗೆ ಅಡುಗೆ ಅನಿಲ ವಿತರಣಾ ಸಿಬ್ಬಂದಿಗಳ ಒದ್ದಾಟ ಅಯ್ಯೋ ಪಾಪ ಎನ್ನುವಂತಿತ್ತು.