ಕೋವಿಡ್ ಕರ್ಫ್ಯೂ : ರೆಕ್ಕೆಪುಕ್ಕ ಕತ್ತರಿಸಿದ ಹಕ್ಕಿಯನ್ನಾಗಿಸಿ ನಮ್ಮನ್ನು ಹಾರಿಸಿದ್ದೇಕೆ ?
ಕೋವಿಡ್ ಕರ್ಫ್ಯೂ ಕಟ್ಟುನಿಟ್ಟು; ಜನ ಕಂಗಾಲು
Team Udayavani, May 11, 2021, 11:28 AM IST
ಹೊನ್ನಾವರ: ನಿರ್ಮಾಣ ಕಾಮಗಾರಿಗೆ ಪರವಾನಗಿ ಕೊಟ್ಟಿದ್ದೀರಿ, ಕಾರ್ಮಿಕರಿಗೆ ಹೋಗಿ ಬರಲು ವಾಹನವಿಲ್ಲ. ಪೊಲೀಸರು ಪರವಾನಗಿಯನ್ನೂ ಕೊಡುವುದಿಲ್ಲ. ಇನ್ನೆರಡು ವಾರದಲ್ಲಿ ಮಳೆಗಾಲ ಬರುವುದರಿಂದ ಎಲ್ಲ ಕಾಮಗಾರಿ ಸ್ಥಗಿತವಾಗುತ್ತದೆ ಏನು ಮಾಡುವುದು ಎಂದು ಕಾರ್ಮಿಕ ಧುರೀಣ ಹರಿಶ್ಚಂದ್ರ ನಾಯ್ಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
4ಕಿಮೀ ದೂರವಿರುವ ಕರ್ಕಿಯ ನನ್ನ ಮನೆಯಿಂದ ಬಂದು ಎರಡು ತಾಸು ತಿಂಡಿ ಸಿದ್ಧತೆ ಮಾಡಿ ನಾಲ್ಕು ತಾಸು ವ್ಯಾಪಾರ ಮಾಡಿ ಸ್ವತ್ಛಮಾಡಲು ಇನ್ನೆರಡು ತಾಸು ಬೇಕು. 10ಗಂಟೆಗೆ ಬಂದ್ ಮಾಡುವುದು ಹೇಗೆ, ಮನೆಗೆ ಹೋಗುವುದು ಹೇಗೆ, ನಾಲ್ಕು ತಾಸು ವ್ಯಾಪಾರಕ್ಕೆ ಅವಕಾಶಮಾಡಿ ಕೊಟ್ಟು ಆಸೆ ಹುಟ್ಟಿಸಿ ವ್ಯಾಪಾರ ಮಾಡದಂಥ ಪರಿಸ್ಥಿತಿ ತಂದಿರುವುದಕ್ಕೆ ಯಾರನ್ನು ಕೇಳ್ಳೋಣ ಎಂದು ಸಣ್ಣ ಹೊಟೆಲ್ ಮಾಲೀಕ ಗೌರೀಶ ನಾಯ್ಕ ಕರ್ಕಿ ಕೇಳಿದ್ದಾರೆ.
ನಾಲ್ಕು ತಾಸು ಪಾರ್ಸಲ್ ಮಾರಾಟ ಮಾಡುವ ಅವಕಾಶ ನೀಡಿ ಜನ ಬರಲೂ ಆಗದೆ, ಹೋಗಲೂ ಆಗದಂತೆ ವಾಹನ ಓಡಾಟ ನಿರ್ಬಂಧಿ ಸಿ, ಕಾರ್ಮಿಕರೂ ಹಳ್ಳಯಿಂದ ಕೆಲಸಕ್ಕೆ ಬರದಂತೆ, ಹೋಗದಂತೆ ಮಾಡಿ ಯಾಕೆ ಆಸೆ ತೋರಿಸಿದ್ದೀರಿ, ಪೂರಾ ಬಂದ್ ಮಾಡಬಹುದಿತ್ತು ಎಂದು ಸಾಗರ ಹೋಟೆಲ್ ಮಾಲಕ ಕಾಶಿನಾಥ ಪ್ರಭು ಹೇಳುತ್ತಾರೆ. ಕಾಸರಕೋಡ ಗುಣವಂತೆಯಲ್ಲಿ ನಾವು, ನಮ್ಮ ಮನೆಯವರು ಎಲ್ಲ ಸೇರಿ ಹಗಲೆಲ್ಲಾ ದುಡಿದು ತರಕಾರಿ ಬೆಳೆದು ಬೆಳಗ್ಗೆ 4ಗಂಟೆಗೆ ಎದ್ದು ತಾಜಾ ತರಕಾರಿಯನ್ನು ಕೊಯ್ದು, ಕಿತ್ತು ಬುಟ್ಟಿ ತುಂಬಿಸಿಕೊಂಡು ರಸ್ತೆಗೆ ಬಂದರೆ ವಾಹನವಿಲ್ಲ.
ಶರಾವತಿ ಬ್ರಿಡ್ಜ್ ದಾಟಿ ತಲೆ ಮೇಲೆ ಬುಟ್ಟಿ, ಚೂಳಿ ಹೊತ್ತು ಕತ್ತಲಲ್ಲೇ ಕಾಸರಕೋಡಿನಿಂದ ಸೇತುವೆ ದಾಟಿ ಹೊನ್ನಾವರಕ್ಕೆ ನಡೆದು ಬಂದು 7 ಗಂಟೆಗೆ ರಸ್ತೆ ಬದಿಗೆ ವ್ಯಾಪಾರಕ್ಕೆ ಕೂತರೆ ಜನರೇ ಬರದಂತೆ, ನಾವೂ ಬರದಂತೆ ಮಾಡಿದ್ದೀರಿ. 10 ಗಂಟೆಗೆ ಪೊಲೀಸ್ ಸೈರನ್ ಕೇಳುತ್ತದೆ, ಹೋಗಿಹೋಗಿ ಅನ್ನುತ್ತಾರೆ, ತರಕಾರಿಗಳನ್ನು ದನದ ಮುಂದೆ ಚೆಲ್ಲಿ ಖಾಲಿ ಬುಟ್ಟಿಯನ್ನು ತಲೆ ಮೇಲಿಟ್ಟು ಮತ್ತು 4 ಕಿಮೀ ಮನೆಗೆ ನಡೆದು ಹೋಗುತ್ತಿದ್ದೇವೆ. ತರಕಾರಿ ಮಾರಾಟಗಾರರಿಗೆ ಇದೆಂತ ಅವಕಾಶ ಎಂದು ಕಾಸರಕೋಡಿನಿಂದ ತರಕಾರಿ ಹೊತ್ತು ತಂದ ಗಣಪಿ, ನಾಗವೇಣಿ, ಲಕೀÒ$¾ ಮೊದಲಾದ ತರಕಾರಿ ವ್ಯಾಪಾರ ಮಾಡುವ ರೈತ ಮಹಿಳೆಯರು ತಾವು ಬೆಳೆದದ್ದನ್ನು ಮಾರಲಾಗದೆ ಹಳಹಳಿಸುತ್ತ ಮನೆ ಹಾದಿಹಿಡಿದರು.
ನಾವು ವೀಳ್ಯದೆಲೆ ಹೊಸಾಕುಳಿಯಲ್ಲಿ ಕೊಯ್ದು ಒಟ್ಟಾಗಿಸಿ ಅದನ್ನು ಹೊನ್ನಾವರಕ್ಕೆ ತಂದು ವಿಶೇಷ ವಾಹನದಲ್ಲಿ ರಾಣಿಬೆನ್ನೂರಿಗೆ ಕಳಿಸಿಕೊಡಬೇಕು. ಅಲ್ಲಿಂದ ಭೂಪಾಲ್ಗೆ ಹೋಗಿ ಪಾಕಿಸ್ತಾನಕ್ಕೆ ರಫ್ತಾಗಬೇಕು ಅಥವಾ ರೇಲ್ವೆಯಲ್ಲಿ ಭೂಪಾಲ್ಗೆ ಹೋಗಬೇಕು. ವಾಹನಗಳೆಲ್ಲಾ ಬಂದ್ ಆಗಿವೆ. ಎಲೆ ಪೊಟ್ಟಲೆಯನ್ನು ಹೊತ್ತು ಬೆವರಿಳಿಸುತ್ತ ಗುಡ್ಡ ಏರಿ 5 ಕಿಮೀ ದೂರ ಭಾಸ್ಕೇರಿಯಿಂದ ಹೊನ್ನಾವರಕ್ಕೆ ಬಂದರೆ ವಾಹನವೇ ಇಲ್ಲ. ವೀಳ್ಯದೆಲೆಯನ್ನು ತೋಟದಲ್ಲಿ ಬಿಟ್ಟರೆ ಬೆಳೆದು ಹೋಗುತ್ತದೆ, ಕೊಯ್ದು ತಂದರೆ ಈ ಗತಿ.
ಬೆಳೆದ ರೈತನಿಗೂ ಇಲ್ಲ, ನಮ್ಮಂಥ ಸಣ್ಣಪುಟ್ಟ ವ್ಯಾಪಾರಿಗಳಿಗೂ ಇಲ್ಲ, ಹೊಟ್ಟೆತುಂಬಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಎಲೆ ವ್ಯಾಪಾರಿಗಳಾದ ನಾಗೇಂದ್ರ, ಸುಬ್ರಹ್ಮಣ್ಯ, ತಿಮ್ಮಪ್ಪ ಗೌಡ ಮೊದಲಾದವರು. ಕಲ್ಯಾಣ ಮಂಟಪದಲ್ಲಿ ಮದುವೆ ಬೇಡ, 40ಜನ ಕರೆದು ಮನೆಯಲ್ಲಿ ಮಾಡ್ಕೊಳ್ಳಿ ಅಂತೀರಿ. ಜವಳಿ ಅಂಗಡಿ, ಬಂಗಾರದ ಅಂಗಡಿ ಬಾಗಿಲು ಬಂದ್, ವಾದ್ಯದವರು ಬರುವಂತಿಲ್ಲ, ನೆಂಟರು ಬರಲು ಬಸ್ ಇಲ್ಲ, ಎಲ್ಲ ರದ್ದು ಮಾಡಬಹುದಿತ್ತಲ್ಲ ಅಂದ್ರು ಮಾಗೋಡ ಶಿವರಾಮ ಹೆಗಡೆ. 10 ಗಂಟೆಗೆ ವ್ಯವಹಾರ ಬಂದ್ ಹೇಳಿ ಓಡಿಸ್ತೀರಿ, ಬ್ಯಾಂಕ್ 10 ಗಂಟೆ ನಂತರ ತೆರೆಯುತ್ತದೆ, ಸಿಬ್ಬಂದಿಗಳು ನೊಣ ಹೊಡೆಯುತ್ತಾರೆ, ನಾವು ಹೋಗುವಂತಿಲ್ಲ, ಇದೆಂತ ನಮೂನೆ ಎಂಬುದು ಸುಬ್ರಹ್ಮಣ್ಯ ಶೆಟ್ಟಯವರ ಪ್ರಶ್ನೆ. ಇವತ್ತು ಪೌರೋಹಿತ್ಯಕ್ಕೆ ಹೋಗುವುದು ಹೇಗೆ. 15 ಕಿಮೀ ದೂರ, ಹೋಗುವುದು-ಬರುವುದು ಸೇರಿ 30 ಆಯಿತು. ಬೈಕ್ ತಗೊಂಡು ಹೋಗೋಹಾಗಿಲ್ಲ, ಹೋದ್ರೂ ಭಯ. ಏನು ಮಾಡಲಿ ಎಂದು ಕಟ್ಟೆ ಶಂಕರ ಭಟ್ಟರು ಫೇಸ್ ಬುಕ್ನಲ್ಲೇ ಉಪಾಯ ಕೇಳಿದ್ದರು. ಬೆನ್ನಿಗೆ ಅಡಿಕೆಹಾಳೆ ಕಟ್ಟಿಕೊಂಡು ಹೋಗಿ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಹೀಗೆ ಉತ್ತರ ಸಿಗದ ಪ್ರಶ್ನೆಗಳ ಸರಣಿಯೇ ಇದೆ.
ಸೋಮವಾರ ಶಾಸಕ ದಿನಕರ ಶೆಟ್ಟಿ ಹೊನ್ನಾವರ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಬಂದಾಗ ಜೊತೆಯಲ್ಲಿ ತಹಶೀಲ್ದಾರ, ಸಿಪಿಐ ಮೊದಲಾದವರಿದ್ದರು. ಅವರಿಗೂ ಈ ಪ್ರಶ್ನೆ ಎದುರಾಯಿತು, ಉತ್ತರ ಯಾರ ಕೈಲೂ ಇರಲಿಲ್ಲ. ಬೆಳಗ್ಗೆ 4ತಾಸು ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿ ವ್ಯಾಪಾರ ನಡೆಸಲು ಅಂಗಡಿಗಳಿಗೆ ಬರಲಾಗದಂತೆ ಜನವೂ ಬಂದು ಹೋಗಲು ಅನುಕೂಲವಾಗದಂತೆ ರೆಕ್ಕೆಪುಕ್ಕ ಕತ್ತರಿಸಿದ ಹಕ್ಕಿಯನ್ನಾಗಿಸಿ ನಮ್ಮನ್ನು ಹಾರಿಸಿದ್ದೇಕೆ ಎಂದು ಕೇಳುವ ಪ್ರಶ್ನೆಗೆ ಬಹುಶಃ ಸರ್ಕಾರದ ಕೈಲೂ ಉತ್ತರವಿಲ್ಲ. ಅದಕ್ಕಾಗಿ ಕೋವಿಡ್ ಭೂತವನ್ನು ತೋರಿಸಲಾಗುತ್ತಿದೆ ಅಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ