ಕೋವಿಡ್: ಉದಾರ ದಾನಿಗಳಿಗೆ ಕೃತಜ್ಞತೆ
ಲೆಕ್ಕಪತ್ರ ಸಲ್ಲಿಕೆ-ಖರೀದಿ ಸಾಮಗ್ರಿ ಪಟ್ಟಿ ಬಹಿರಂಗ ಪಡಿಸಲು ಸಾರ್ವಜನಿಕರ ಒತ್ತಾಯ
Team Udayavani, Jun 1, 2021, 9:37 PM IST
ಜೀಯು, ಹೊನ್ನಾವರ
ಹೊನ್ನಾವರ: ಕೋವಿಡ್ ನಿವಾರಣೆಗೆ ಜಿಲ್ಲೆಗೆ ಸರ್ಕಾರದ ಹಣ ಧಾರಾಳವಾಗಿ ಹರಿದು ಬಂದಿದೆ. ಜೊತೆಯಲ್ಲಿ ಕಳಕಳಿವುಳ್ಳ ದಾನಿಗಳು ಕೈತುಂಬ ದಾನ ಮಾಡಿದ್ದಾರೆ. ದಾನ ಸಣ್ಣದಿರಲಿ, ದೊಡ್ಡದಿರಲಿ ಕೊಟ್ಟವರಿಗೆ ಕೃತಜ್ಞತೆ ಸಲ್ಲಬೇಕು, ಲೆಕ್ಕಪತ್ರ ಸಾರ್ವಜನಿಕವಾಗಬೇಕು ಎಂಬುದು ಕೆಲವು ದಾನಿಗಳ ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಸರ್ವೋತ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ದೇವದತ್ತ ಕಾಮತ್ ಮತ್ತು ಬೆಂಗಳೂರಿನಲ್ಲಿ ನೆಲೆಸಿದ ಹಲವರು ಮತ್ತು ಸಂಘಸಂಸ್ಥೆಗಳು ಕೊಡುಗೆಗಳನ್ನು ನೀಡಿದ್ದಾರೆ. ಕಡಿಮೆ ಬೀಳಬಹುದಾದ ಹಾಸಿಗೆಗಳ ವಿಸ್ತರಣೆ, ವೆಂಟಿಲೇಟರ್, ಔಷಧಗಳು ಸರ್ಕಾರದಿಂದ ಸಾಕಷ್ಟು ಬಂದಿದೆ. ಆಕ್ಸಿಜನ್ ವ್ಯವಸ್ಥೆಯಾಗಿದೆ.
ದಾನಿಗಳಿಂದ ಆಕ್ಸಿಜನ್ನಿಂದ ಆರಂಭಿಸಿ ಆಕ್ಸಿಮೀಟರ್ವರೆಗೆ ಮಾಸ್ಕ್ನಿಂದ ಆರಂಭಿಸಿ ವಿವಿಧ ಬಗೆಯ ಸ್ನಾನಿಟೈಸರ್ ಗಳು, ಔಷಧಗಳು, ಔಷಧದ ಕಿಟ್ ಗಳು ಬಂದಿವೆ. ಸಚಿವ ಹೆಬ್ಟಾರ ಸರ್ಕಾರದ ಸಹಾಯದ ಜೊತೆ ಸಾಕಷ್ಟು ಸ್ವಂತ ಹಣದಿಂದಲೂ ಉಪಕರಣಗಳನ್ನು ನೀಡಿದ್ದಾರೆ. ಇವರ ಪ್ರೇರಣೆ ಉಳಿದ ದಾನಿಗಳಿಗೆ ಮಾದರಿಯಾಗಿ ಬಂತು. ತಾಲೂಕಾಡಳಿತಕ್ಕೆ, ತಾಲೂಕಾಸ್ಪತ್ರೆಗೆ, ತಾಲೂಕು ವೈದ್ಯಾಧಿ ಕಾರಿಗಳ ಕಾರ್ಯಾಲಯಕ್ಕೆ ಹೀಗೆ ಪ್ರತ್ಯೇಕವಾಗಿ ಎಲ್ಲ ಬಗೆಯ ಉಪಕರಣಗಳು ಸಾಮಗ್ರಿಗಳೂ ಪೂರೈಕೆಯಾಗಿವೆ.
ಮಾಜಿ ಶಾಸಕರು, ಹಾಲಿ ಶಾಸಕರೂ ಸಹ ವಸ್ತುರೂಪದಲ್ಲಿ ಜಿಲ್ಲೆಯಾದ್ಯಂತ ಮತ್ತು ತಮ್ಮತಮ್ಮ ಕ್ಷೇತ್ರಗಳಲ್ಲಿ ನೆರವಾಗಿದ್ದಾರೆ. ಕೋವಿಡ್ ಸೆಂಟರ್ ಸಜ್ಜುಗೊಳಿಸಲು ತಾಲೂಕಾಡಳಿತ ಹಣ ಖರ್ಚು ಮಾಡಿದೆ. ಸರ್ಕಾರದ ಹಣ ತಾಲೂಕಾಡಳಿತಕ್ಕೆ ಮತ್ತು ಆಸ್ಪತ್ರೆಗಳಿಗೆ, ಆರೋಗ್ಯ ಇಲಾಖೆಗೆ ಬಂದಿದೆ. ಬಹಳಷ್ಟು ಸಾಮಗ್ರಿಗಳನ್ನು ಸ್ಥಳೀಯವಾಗಿ ಖರೀದಿ ಮಾಡಿದ್ದಾರೆ. ಕೆಲವುಗಳ ಗುಣಮಟ್ಟ ಚೆನ್ನಾಗಿಲ್ಲ, ಧಾರಣೆ ಹೆಚ್ಚಾಗಿದೆ ಎಂಬ ಗುಸುಗುಸು ಅಲ್ಲಿಲ್ಲಿ ಕೇಳುತ್ತಿದೆ.
ಸರ್ಕಾರ ಹಾಗೂ ದಾನಿಗಳಿಂದ ಬಂದದ್ದು ಬಹುಕೋಟಿ ರೂಪಾಯಿಗಳಾಗುತ್ತವೆ. ಸರ್ಕಾರದ ಹಣದಿಂದ ಖರೀದಿಸಲಾದ ಸಾಮಗ್ರಿಗಳಿಗೆ ಕೊಟೇಶನ್ ಕರೆಯಬೇಕಾಗುತ್ತದೆ. ಕರೆದಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸರ್ಕಾರಮಟ್ಟದಿಂದ ಪೂರೈಯಾಗಿದ್ದರ ಹೊರತಾಗಿ ಸ್ಥಳೀಯವಾಗಿ ಖರೀದಿ ಮಾಡಿದ ಸಾಮಗ್ರಿಗಳ ದರಪಟ್ಟಿ ಬಹಿರಂಗವಾಗಬೇಕಿದೆ. ಇನ್ನು ದಾನಿಗಳಿಂದ ಪಡೆದ ವಸ್ತುಗಳಿಗಾಗಿ ಅವರಿಗೊಂದು ಕೃತಜ್ಞತಾ ಪತ್ರ ತಾಲೂಕು ಮತ್ತು ಜಿಲ್ಲೆ ಕೋವಿಡ್ ನಿರ್ವಹಣಾ ಸಮಿತಿಯಿಂದ ಹೋಗಬೇಕು. ದಾನಿಗಳಿಂದ ಪಡೆದ ಸಾಮಗ್ರಿಗಳು ಅರ್ಹರಿಗೆ ಸಲ್ಲಿಕೆಯಾಗಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಅದೇಅದೇ ವಸ್ತುಗಳು ಪುನಃ ಪುನಃ ಸಲ್ಲಿಕೆಯಾಗಿದೆ. ಆದ್ದರಿಂದ ಜಿಲ್ಲೆಯ ಉಸ್ತುವಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿರುವ ಸಚಿವ ಶಿವರಾಮ ಹೆಬ್ಟಾರ ಅವರು ಕೋವಿಡ್ ಎರಡನೇ ಅಲೆ ಬಂದಾಗ ಸರ್ಕಾರ ಮತ್ತು ಸಾರ್ವಜನಿಕರ ಕೊಡುಗೆಯನ್ನು ಜಿಲ್ಲೆಯ ಜನರ ಮುಂದಿಡುವುದು ಅವಶ್ಯವಾಗಿದೆ.
ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ, ಜಿಲ್ಲೆಯ ಹಿರಿಯ ರಾಜಕಾರಣಿ, ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಸರ್ಕಾರದ ಕೋವಿಡ್ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ 2 ವರ್ಷದಿಂದ ನಯಾಪೈಸೆ ಕೊಟ್ಟಿಲ್ಲ, ಕೋವಿಡ್ ನಿರ್ವಹಣೆ ಸರಿಯಾಗಿಲ್ಲ ಎಂಬ ಆಪಾದನೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 43,912 ಆಗಿದ್ದು 37,632 ಜನ ಗುಣಮುಖರಾಗಿದ್ದಾರೆ. 580 ಜನ ಮೃತಪಟ್ಟಿದ್ದಾರೆ. ಸೋಂಕಿನ ಪ್ರಮಾಣ ಶೇ. 1.87ಕ್ಕೆ ಇಳಿಕೆಯಾಗಿದೆ. ಇನ್ನೆರಡು ವಾರದಲ್ಲಿ ಕೋವಿಡ್ ಎರಡನೇ ಅಲೆ ಬಹುಪಾಲು ಮುಕ್ತಾಯವಾಗಲಿದೆ. ಅದಕ್ಕೂ ಮುನ್ನ ಕೋವಿಡ್ ಕುರಿತು ಪ್ರತಿಷ್ಠಿತ ರಾಜಕಾರಣಿಗಳ ಪ್ರಶ್ನೆಗೆ ಆಡಳಿತ ಉತ್ತರಿಸಬೇಕಿದೆ. ಕೋವಿಡ್ ನಿವಾರಣೆಗೆ ವಿವಿಧ ರೀತಿಯಲ್ಲಿ ದುಡಿದವರಿಗೆ, ಕೊಡುಗೆ ನೀಡಿದವರಿಗೆ ಕೃತಜ್ಞತಾ ಪತ್ರ ಸಲ್ಲಬೇಕಾಗಿದೆ.