ಬಿಎಸ್ವೈ-ಶೋಭಾ ಹೇಳಿಕೆಗೆ ಸಚಿವ ದೇಶಪಾಂಡೆ ತರಾಟೆ
Team Udayavani, Dec 9, 2017, 4:05 PM IST
ಹೊನ್ನಾವರ: ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದವರು. ಆದರೂ ಅವರು ನಾಲಿಗೆ ಮೇಲೆ ನಿಯಂತ್ರಣ ಇಲ್ಲದವರಂತೆ ಮಾತನಾಡುತ್ತಾರೆ. ಶೋಭಾ ಕರಂದ್ಲಾಜೆಯವರಿಗೂ ನಾಲಿಗೆ ಮೇಲೆ ನಿಯಂತ್ರಣವಿಲ್ಲ. ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರು ಕ್ಷಮೆ ಕೋರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತರಾಟೆ ತೆಗೆದುಕೊಂಡರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಹೊನ್ನಾವರಕ್ಕೆ ಬರಲಿಲ್ಲ. ಪರಿಸ್ಥಿತಿ ತಿಳಿಗೊಳಿಸುವ ಬದಲು ಉದ್ರಿಕ್ತಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಸಹಕರಿಸುವುದನ್ನು ಬಿಟ್ಟು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಬಡ ಯುವಕನ ಹತ್ಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ. ಶವ ಪರೀಕ್ಷೆ ವರದಿ ಬರುವವರೆಗೆ ಕಾಯೋಣ ಎಂದರು.