ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ: ಮೊದಲ ಹಂತದಲ್ಲಿ 45 ಫಲಾನುಭವಿಗಳು
Team Udayavani, Dec 21, 2021, 12:58 PM IST
ದಾಂಡೇಲಿ: ನಗರದ ಲಯನ್ಸ್ ಕ್ಲಬ್, ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಸಾರ್ವಜನಿಕ ಆಸ್ಪತ್ರೆ ದಾಂಡೇಲಿ ಮತ್ತು ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಆಶ್ರಯದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಟ್ಟು 115 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.
ಆಯ್ಕೆ ಮಾಡಲಾದ ಫಲಾನುಭವಿಗಳ ಪೈಕಿ ಮೊದಲ ಹಂತದಲ್ಲಿ ಸೋಮವಾರ ಬೆಳಿಗ್ಗೆ 45 ಫಲಾನುಭವಿಗಳನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಿಂದ ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ಸಂಸ್ಥೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬಿನ ಪ್ರಮುಖರುಗಳಾದ ಪಿ.ಕೆ.ಜೋಶಿ, ಉದಯ ಶೆಟ್ಟಿ, ಅನಿಲ್ ದಂಡಗಲ್, ಚೇತನ ಕುಮಾರಮಠ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಹಲವಾರು ವರ್ಷಗಳಿಂದ ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆ ಹಲವಾರು ಶಿಬಿರಗಳನ್ನು ಸಂಘಟಿಸಿ, ಸಾಕಷ್ಟು ಸಂಖ್ಯೆಯಲ್ಲಿ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಉಚಿವಾಗಿ ಮಾಡಿ ಗಮನಾರ್ಹ ಆರೋಗ್ಯ ಸೇವೆ ಮಾಡುತ್ತಿರುವುದುನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.