ಸಚಿವ ಹೆಬ್ಬಾರ್ ಕಾರ್ಯಕ್ಕೆ ಶ್ಲಾಘನೆ: ಭರವಸೆಕೊಟ್ಟ 16 ಗಂಟೆಯೊಳಗೇ ಚೆಕ್ ವಿತರಣೆ!
Team Udayavani, Jul 14, 2021, 12:58 PM IST
ಶಿರಸಿ : ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಆಕಸ್ಮಿಕವಾಗಿ ಮನೆ ಗೋಡೆ ಕುಸಿದ್ದು ಯಶೋದಾ ಬಂಗಾರಿ ಗೌಡ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ 48 ಗಂಟೆಯೊಳಗೆ 5 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ವಿತರಿಸುವದಾಗಿ ಭರವಸೆ ನೀಡಿದ್ದರು. ಆದರೆ, ಕೇವಲ 16 ಗಂಟೆಯೊಳಗೆ ಸರಕಾರದ 5 ಲ.ರೂ.ಚೆಕ್ ನೀಡುವ ಮೂಲಕ ಮಾತು ಉಳಿಸಿಕೊಂಡಿದ್ದಾರೆ. ಸರಕಾರದ ಇಲಾಖೆ ಕ್ರಿಯಾಶೀಲವಾಗಿದ್ದರೆ ಹೀಗೂ ಸಾಧ್ಯ ಎಂಬುದನ್ನು ಸಚಿವ ಹೆಬ್ಬಾರ್ ತೋರಿಸಿದ್ದಾರೆ.
ಇದನ್ನೂ ಓದಿ: ಸ್ಥಳೀಯ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸವಿದೆ: ನಳಿನ್ ಕುಮಾರ್
ಸ್ವತಃ ಮಂಗಳವಾರ ಮೃತರ ಮನೆಗೆ ಭೇಟಿ ನೀಡಿದ ಹೆಬ್ಬಾರರರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಅಂತ್ಯ ಸಂಸ್ಕಾರಕ್ಕೆ ವೈಯಕ್ತಿಕ ಧನಸಹಾಯವನ್ನು ನೀಡಿದರು. ಹಾಗೂ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿ ಮುಂದಿನ 48 ಗಂಟೆಗಳ ಒಳಗಾಗಿ ಪರಿಹಾರಧನವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಬುಧವಾರ ಮೃತರ ಕುಟುಂಬದ ಮನೆಗೆ ಮರಳಿ ತೆರಳಿ ಕೇವಲ 16 ತಾಸಿನಲ್ಲಿ ಚೆಕ್ ತರಿಸಿ ವಿತರಿಸಿದ್ದಾರೆ.
ಇನ್ನೂ ಸರಕಾರದಿಂದ ಎರಡು ಲ.ರೂ.ನೀಡುತ್ತೇವೆ ಹಾಗೂ ಮನೆ ಕೂಡ ಮಂಜೂರಾತಿ ಮಾಡಿಸುತ್ತೇವೆ ಎಂದುನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸ್ಥಳದಲ್ಲೇ ಇದ್ದ ಅಧಿಕಾರಿ ಬಳಿ ಅವರ ಎಕೌಂಟ್ ಗೆ ಚೆಕ್ ಹಾಕಿ, ಪಾಸ್ ಬುಕ್ ಎಂಟ್ರಿಮಾಡಿಸಿ ತಂದು ಕೊಡುವಂತೆ ಕೂಡ ಸೂಚಿಸಿದ್ದಾರೆ.
ಈ ವೇಳೆ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಗ್ರಾ.ಪಂನ ಪ್ರಕಾಶ ಇತರರು ಇದ್ದರು.