ಹನುಮಂತ ದೇಗುಲ ಲೋಕಾರ್ಪಣೆ ಇಂದು
ತಾಲೂಕು ನಾಮಧಾರಿ ಸಮಾಜ ಸಂಘದಿಂದ ಸಂಪೂರ್ಣ ಶಿಲಾಮಯ ಗರ್ಭಗುಡಿ ನಿರ್ಮಾಣ
Team Udayavani, Apr 14, 2022, 5:34 PM IST
ಭಟ್ಕಳ: ಶಿರಾಲಿಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಜ್ಜುಗೊಂಡಿದ್ದು ಭಟ್ಕಳ ತಾಲೂಕಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಭಟ್ಕಳದಲ್ಲಿ ಪುರಾತನ ಆಂಜನೇಯನ ದೇವಾಸ್ಥಾನಗಳಿದ್ದು ಅವುಗಳಲ್ಲಿ ಶಿರಾಲಿಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನವೂ ಒಂದು. ಇದು ಸುಮಾರು 500 ವರ್ಷಗಳ ಇತಿಹಾಸ ಹೊಂದಿದ್ದು ರಾಜರ ಕಾಲದಲ್ಲಿ ಉಚ್ಛಾಟನೆಯ ಸ್ಥಿತಿಯಲ್ಲಿದ್ದ ದೇವಾಲಯವಾಗಿದೆ.
ಗೇರುಸೊಪ್ಪ ಸೀಮೆಯ ಅರಸ ಸಾಳುವ ಕೃಷ್ಣದೇವನ ಆಳ್ವಿಕೆಯಲ್ಲಿ ಹಳೇಕೋಟೆ ಪ್ರದೇಶವು ಉಗ್ರಾಣ ವಾಗಿತ್ತು. ನಂತರ ಕೋಟೆಯ ಉಸ್ತುವಾರಿಯನ್ನು ಅವರ ಶಿಷ್ಯರಾದ ಸಂಗೀತ ರಾಯನಿಗೆ ವಹಿಸಿಕೊಟ್ಟಿದ್ದು ಸಂಗೀತ ರಾಯರು ತಮ್ಮ ಸೇನಾ ನಾಯಕ ತಿಮ್ಮ ನಾಯಕನನ್ನು ಕೋಟೆಯ ರಕ್ಷಣೆಗೆ ನೇಮಿಸಿದ್ದನು ಎನ್ನುವುದು ದೇವಾಲಯದ ಆವರಣದಲ್ಲಿರುವ 1530ನೇ ಸಾಲಿನ ವೀರಗಲ್ಲು ಶಾಸನ ಹೇಳುತ್ತದೆ.
ಶಾಸನದಲ್ಲಿರುವ ಒಕ್ಕಣೆಯಂತೆ ಮಹಾಮಂಡಲಾಧೀಶ್ವರ ಒಡೆಯ ದೇವರಾಯನು ಕೋಟೆಯ ಮೇಲೆ ದಾಳಿ ಮಾಡಿ ಒಳಾಂಗಣದಲ್ಲಿರುವ ರಾಜ ಮನೆತನದವರಿಂದ ಪೂಜಿಸಲ್ಪಡುತ್ತಿದ್ದ ಹನುಮಂತ ದೇವರ ದೇವಸ್ಥಾನವೂ ಕೂಡಾ ಅವಸಾನವಾಗಿ ಶ್ರೀದೇವರ ವಿಗ್ರಹ ಮಣ್ಣಿನಲ್ಲಿ ಹೂತು ಹೋಗಿತ್ತು. ದೈವ ಪ್ರೇರಣೆಯಂತೆ ಮೇಲುಕೋಟೆಯ ಮಠಾಧೀಶರಾದ ಶ್ರೀಮದ್ ರಾಮಾನುಜಾಚಾರ್ಯರ ಶಿಷ್ಯವರ್ಗದ ಇಕ್ಕೇರಿಯ ಶ್ರೀಮದ್ ತಿರುಮಲ ತಾತಾಚಾರ್ಯರು ಈ ಮಾರ್ಗದ ಮೂಲಕ ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಿರುವಾಗ ಕೋಟೆಯ ಭಾಗದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ಶ್ರೀ ಹನುಮಂತ ದೇವರ ವಿಗ್ರಹವನ್ನು ತಮ್ಮ ದಿವ್ಯ ದೃಷ್ಟಿಯಲ್ಲಿ ನೋಡಿ ಮೇಲಕ್ಕೆತ್ತಿ ಸಾರದ ಹೊಳೆಯ ತಟದಲ್ಲಿ ವರ್ತುಲಾಕಾರವಾಗಿ ಹರಿಯುವ ಪ್ರಶಸ್ಥವಾದ ಇಂದಿನ ದೇವಾಲಯವಿರುವ ಸ್ಥಳದಲ್ಲಿ ವೈಭವೋಪೇತವಾಗಿ ಸ್ಥಾಪನೆ ಮಾಡಿದರು.
ಅಂದಿನಿಂದ ಈ ಸ್ಥಳದಲ್ಲಿ ನಾಮಧಾರಿ ಸಮಾಜ ಬಾಂಧವರು ತಮ್ಮ ಭಾಗದ ಕುಲದೇವರಾಗಿ ಪೂಜಿಸಿಕೊಂಡು ಬಂದಿದ್ದು ಇಂದಿಗೂ ಆ ಪರಂಪರ ಮುಂದುವರಿದಿದೆ. ಮಾವಳ್ಳಿ ಹೋಬಳಿ ವ್ಯಾಪ್ತಿಯ ಹಿಂದೂ ನಾಮಧಾರಿ ಸಮಾಜ ಬಾಂಧವರು ತಮ್ಮ ಸಮಾಜದ ಪೂಜೆ ವಗೈರೆಗಳನ್ನು ಹಾಗೂ ಆಡಳಿತವನ್ನು ನೋಡಿಕೊಂಡು ಬಂದಿರುತ್ತಾರೆ. ನಂತರ 1983ರಿಂದ ಮುರುಡೇಶ್ವರ ಮತ್ತು ಶಿರಾಲಿ ಸೀಮೆಯ ಸಮಾಜದ ಅಭಿವೃದ್ಧಿ ಸಂಘ ನಿರ್ಮಿಸಿಕೊಂಡು ದೇವಸ್ಥಾನದ ಮೊಕ್ತೇಸರ ಮಂಡಳಿ ರಚಿಸಿ ದೇವಸ್ಥಾನದ ಸಂಪೂರ್ಣ ಆಡಳಿತ, ಆಚಾರ-ವಿಚಾರಗಳನ್ನು ನೋಡಿಕೊಂಡು ಬಂದಿದೆ.
ಅಷ್ಟಮಂಗಲ ಪ್ರಶ್ನೆ: ಸಮಾಜದ ಒಟ್ಟಾಭಿಪ್ರಾಯದಂತೆ ವಿಧ್ವಾಂಸ ಕೇರಳದ ವಿಷ್ಣುಮೂರ್ತಿ ನಂಬೂದರಿಯವರ ಮುಖೇನ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ದೇವರ ಗರ್ಭಗ್ರಹವನ್ನು ಶಿಲಾಮಯವಾಗಿಸಬೇಕು ಎನ್ನುವ ಉತ್ತರ ದೊರೆತಿತ್ತು. ಅದರಂತೆ ಕುಲಗುರು ಶ್ರೀ ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ 2017ರಲ್ಲಿ ನೂತನ ಶಿಲಾಮಯ ದೇವಾಲಯದ ನಿರ್ಮಾಣಕ್ಕೆ ಅಡಿಗಲ್ಲನ್ನಿಡಲಾಯಿತು.
ಅಂದಿನಿಂದ ನಿರಂತರವಾಗಿ ದೇವಾಲಯದ ನಿರ್ಮಾಣ ಕಾರ್ಯ ಆಡಳಿತ ಹಾಗೂ ಜೀರ್ಣೋದ್ಧಾರ ಕಮಿಟಿ ಉಸ್ತುವಾರಿಯಲ್ಲಿ ನಡೆಯುತ್ತಾ ಬಂದಿದ್ದು, ಇದೀಗ ಮುಕ್ತಾಯಗೊಂಡು ದೇವಾಲಯದ ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜುಗೊಂಡಿದೆ.
ಶಿಲಾಮಯ ದೇವಾಲಯದ ಶೈಲಿ: ದೇವಸ್ಥಾನವನ್ನು ಪ್ರಾಚೀನ ಹಿಂದೂ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು ಸುಪ್ರಸಿದ್ಧ ವಾಸ್ತುಶಾಸ್ತ್ರ ತಜ್ಞ ಪ್ರಸಾದ ಮುನಿಯಂಗಳ ಕುಕ್ಕೆಸುಬ್ರಹ್ಮಣ್ಯ ಅವರ ಮಾರ್ಗದರ್ಶ ನದಲ್ಲಿಯೇ ನಿರ್ಮಾಣವಾಗಿದೆ. ಸುಂದರವಾದ ಕೆತ್ತನೆ, ಕುಸುರಿ ಕೆಲಸ ಎಲ್ಲವೂ ಸುಂದರವಾಗಿ ಮೂಡಿ ಬಂದಿದೆ. ಈ ಭಾಗದ ಪುಣ್ಯ ಕ್ಷೇತ್ರವಾಗಿ ಪ್ರವಾಸೀ ತಾಣವಾಗುವುದಕ್ಕೆ ಸಜ್ಜಾಗಿ ನಿಂತಿದೆ.
ಪರಿವಾರ ದೇವರು: ದೇವಾಲಯದ ಎದುರುಗಡೆ ಇರುವ ಸುಮಾರು 350 ವರ್ಷಗಳ ಹಳೆಯ ಅರಳೀ ಮರವನ್ನು ಹಾಗೆಯೇ ಇಟ್ಟುಕೊಳ್ಳಲಾಗಿದ್ದು ದೇವಾಲಯಕ್ಕೆ ಇದುವೇ ಮೆರಗು ನೀಡುತ್ತಿದೆ. ದೇವಾಲಯದ ಆವರಣದಲ್ಲಿರುವ ಸನ್ಯಾಸಿ ತುಳಸಿಯು ಅತ್ಯಂತ ಪವಿತ್ರವಾಗಿದ್ದು ಅನಾ ಕಾಲದಿಂದಲೂ ದೈವಿಕ ಶಕ್ತಿ ಹೊಂದಿದೆ. ವಿವಿಧ ಸಮಾಜದವರು ತಾವು ಮಾಡುವ ಹರಿಸೇವಾ ಕಾರ್ಯದ ಕಳಸ ಪ್ರತಿಷ್ಠಾಪನೆಯನ್ನು ಇದೇ ತುಳಸಿಯ ಮುಂಭಾಗದಲ್ಲಿ ಮಾಡುವುದು ತುಳಸಿಯ ದೈವಿಕ ಶಕ್ತಿಯ ಪ್ರತೀಕವಾಗಿದೆ. ಭಕ್ತಾದಿಗಳು ಬಲಿ ಪೂಜೆ ನೆರವೇರಿಸಲು ಕ್ಷೇತ್ರ ದೇವತೆ ಮಾರಿ ಬೊಮ್ಮನ ಸ್ಥಳವಿದ್ದು ಇದೂ ಕೂಡಾ ಆಸ್ತಿಕರ ಶಕ್ತಿ ಸ್ಥಳವಾಗಿದೆ.
-ಆರ್.ಕೆ. ಭಟ್