ಉತ್ತರದಲ್ಲಿ ಬೆಂಕಿ; ಕುಮಟಾದಲ್ಲಿ ಐಜಿಪಿ ನಿಂಬಾಳ್ಕರ ಕಾರು ಭಸ್ಮ
Team Udayavani, Dec 12, 2017, 6:00 AM IST
ಕುಮಟಾ: ಕೋಮು ದಳ್ಳುರಿಗೆ ತತ್ತರಿಸಿದ್ದ ಹೊನ್ನಾವರದ ಕಿಡಿ ಈಗ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಅನುಮಾನಾಸ್ಪದವಾಗಿ ಬಲಿಯಾದ ಪರೇಶ್ ಮೇಸ್ತ ಸಾವು ಖಂಡಿಸಿ ಸೋಮವಾರ ನಡೆದ ಕುಮಟಾ ಬಂದ್ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೇ, ಉತ್ತರ ವಲಯದ ಐಜಿಪಿ ಹೇಮಂತ ನಿಂಬಾಳ್ಕರ ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮಂಗಳವಾರ ಶಿರಸಿ ಬಂದ್ ಕರೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಕನ್ನಡ ಜಿಲ್ಲಾದ್ಯಂತ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶಾಂತವಾಗಿದ್ದ ಕುಮಟಾದಲ್ಲಿ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪತ್ತೆಯಾದ ಪರೇಶ್ ಮೇಸ್ತ ಎಂಬ ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣ ಕೋಮು ಸೌಹಾರ್ದತೆ ಕದಡಿದೆ. ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಕುಮಟಾ ಬಂದ್ನಲ್ಲಿ ನಡೆದ ಘಟನಾವಳಿಗಳು ಕರಾವಳಿಯನ್ನು ಇನ್ನಷ್ಟು ಉದ್ವಿಗ್ನ ಸ್ಥಿತಿಗೆ ತಂದು ನಿಲ್ಲಿಸಿದೆ.
ಪಟ್ಟಣದ ದೇವರಹಕ್ಕಲ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಬಿಜೆಪಿ ಜತೆಗೆ ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಮುಂತಾದ ಹಿಂದುತ್ವ ನಿಷ್ಠ ಸಂಘಟನೆಗಳ ಐದು ಸಾವಿರಕ್ಕೂ ಹೆಚ್ಚು ಜನ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಕೆಲ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಪೊಲೀಸ್ ಬಂದೋಬಸ್ತ್ ಇದ್ದರೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.
ಮಾಸ್ತಿಕಟ್ಟೆ ವೃತ್ತ ಬಳಸಿ ಸಾಗಿದ ಮೆರವಣಿಗೆ ಮಣಕಿ ಮಹಾತ್ಮ ಗಾಂಧಿ ಮೈದಾನದೆದುರಿನ ಹೋಟೆಲೊಂದರ ಎದುರು ನಿಂತಿದ್ದ ಹೊರ ರಾಜ್ಯದ ಹಾಗೂ ಅನ್ಯಕೋಮಿಗೆ ಸೇರಿದ್ದೆನ್ನಲಾದ ಕಾರಿಗೆ ಕಲ್ಲು ತೂರಾಟ ನಡೆಯಿತು. ಈ ಸಂದರ್ಭದಲ್ಲಿ ತಡೆಯಲು ಯತ್ನಿಸಿದ ಪೊಲೀಸರಿಗೆ ಹಾಗೂ ಪೊಲೀಸ್ ವಾಹನಕ್ಕೂ ಕಲ್ಲೇಟುಗಳು ಬಿದ್ದವು. ಸಂಖ್ಯಾಬಲದಲ್ಲಿ ಕಡಿಮೆಯಿದ್ದ ಪೊಲೀಸರಿಗೆ ಕೆಲಕ್ಷಣ ಹಿನ್ನಡೆಯಾಗಿದ್ದ ಸಂದರ್ಭದಲ್ಲೇ ಮಾಸ್ತಿಕಟ್ಟೆ ಬಳಿ ಹೆದ್ದಾರಿಯಂಚಿಗೆ ನಿಲ್ಲಿಸಿದ್ದ ಐಜಿಪಿ ಹೇಮಂತ ನಿಂಬಾಳ್ಕರ ಅವರ ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಯಿತು. ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿ, ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಬೆಂಕಿಗಾಹುತಿಯಾದ ಐಜಿಪಿಯವರ ಕಾರು ಸೇರಿದಂತೆ ಝೈಲೋ ಕಾರು, ಪೊಲೀಸರ ಎರಡು ಜೀಪು, ಎರಡು ಬಸ್ಗಳು ಕಲ್ಲೇಟಿಗೆ ತುತ್ತಾಗಿವೆ. ಪಿಎಸೈ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿ, 30ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಗಾಯಗಳಾಗಿವೆ. ಘಟನೆಗೆ ಕಾರಣರಾದವರನ್ನು ಗುರುತಿಸಿ ಬಂಧಿಸುವ ಯತ್ನ ನಡೆದಿದೆ. ಐಜಿಪಿ ನಿಂಬಾಳ್ಕರ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇತರ ಹಿರಿಯ ಅಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್ ಘಟನಾ ಸ್ಥಳದಲ್ಲಿದ್ದು ಪರಿಸ್ಥಿತಿ ತಹಬಂದಿಗೆ ಕ್ರಮ ಕೈಗೊಂಡಿದ್ದಾರೆ.
ಐದನೇ ದಿನವೂ ಹೊನ್ನಾವರ ಬಂದ್
ಐದನೇ ದಿನವೂ ತಾಲೂಕಿನಲ್ಲಿ ಅಘೋಷಿತ ಬಂದ್ ನಡೆದಿದೆ. ಹಳ್ಳಿಗಳಲ್ಲಿ ಚಿಕ್ಕಪುಟ್ಟ ಘರ್ಷಣೆ ಹೊರತುಪಡಿಸಿ ಪರಿಸ್ಥಿತಿ ಶಾಂತವಾಗಿದೆ. ಜಿಲ್ಲಾಧಿಕಾರಿ ಆದೇಶದ ಪ್ರಕಾರ ಸೋಮವಾರ ಬೆಳಗ್ಗೆ ಬಸ್ಗೆ ಬಂದ ಜನ ಏಕಾಏಕಿ ಬಸ್ ಸಂಚಾರ ನಿಲ್ಲಿಸಿದ್ದರಿಂದ ಮನೆಗೆ ಹೋಗಲು ಪರದಾಡಿದರು. ಭದ್ರತೆ ನೀಡುವುದಾಗಿ ಪೊಲೀಸರು ಹೇಳಿದ್ದರಿಂದ ಬಾಗಿಲು ತೆಗೆದ ಅಂಗಡಿಕಾರರನ್ನು ಬೆದರಿಸಿ, ಮುಚ್ಚಿಸಲಾಯಿತು. ಕುಮಟಾದಲ್ಲಿ ಬಂದ್ ನಡೆದ ಕಾರಣ ಪೊಲೀಸ್ ಅಧಿ ಕಾರಿಗಳು ಮತ್ತು ಮೀಸಲು ಪಡೆ ಅತ್ತ ತೆರಳಿದೆ. ಜನರಲ್ಲಿ ವಾಟ್ಸಆ್ಯಪ್, ಫೇಸ್ಬುಕ್ ಮುಖಾಂತರ ಬೆದರಿಕೆ ಹಾಕಲಾಗುತ್ತಿದೆ. ಮೀನುಗಾರಿಕೆ ಸಹಿತ ಎಲ್ಲ ವ್ಯವಹಾರ ಸ್ಥಗಿತಗೊಂಡಿದ್ದರಿಂದ ಅಪಾರ ನಷ್ಟವಾಗಿದೆ.
ಜಿಲ್ಲಾದ್ಯಂತ ಮೂರು ದಿನ ನಿಷೇಧಾಜ್ಞೆ
ಕಾನೂನು ಸುವ್ಯವಸ್ಥೆ ತಹಬದಿಗೆ ತರಲು ಉತ್ತರ ಕನ್ನಡ ಜಿಲ್ಲಾದ್ಯಂತ ಡಿ.12ರಿಂದ 14ರವರೆಗೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ ಹೊರತುಪಡಿಸಿ ಜಿಲ್ಲಾದ್ಯಂತ 11 ತಾಲೂಕುಗಳಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆ, ಬೈಕ್ ರ್ಯಾಲಿ ನಿಷೇಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1953 ಕಲಂ 35ರಡಿಯಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರ ಬಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.
15 ಮಂದಿ ವಶಕ್ಕೆ
ಕುಮಟಾದಲ್ಲಿ ಪ್ರತಿಭಟನೆ ವೇಳೆ ಪಶ್ಚಿಮ ವಲಯ ಐಜಿಪಿ ಹೇಮಂತ ನಿಂಬಾಳ್ಕರ್ ಅವರ ಇನ್ನೋವಾ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ 15 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಆದರೆ, ವಿಚಾರಣೆಗಾಗಿ ಹತ್ತು ಜನರನ್ನು ಮಾತ್ರ ವಶಕ್ಕೆ ಪಡೆಯಲಾಗಿದ್ದು, ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು
ಸ್ಪಷ್ಟಪಡಿಸಿವೆ.
ಐಜಿಪಿ ಕಾರು ಚಾಲಕ ಕಲ್ಲು ತೂರಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೆಲ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿವಿಧೆಡೆ ಪ್ರತಿಭಟನೆ
ಕಾರವಾರ: ಹತ್ಯೆ ಖಂಡಿಸಿ ಹೊನ್ನಾವರ, ಕುಮಟಾದಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹಳಿಯಾಳ, ಮುಂಡಗೋಡದಲ್ಲೂ ಸೋಮವಾರ ಬಂದ್ ಕರೆ ನೀಡಲಾಗಿತ್ತು.
ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅರ್ಧಗಂಟೆಗೂ ಹೆಚ್ಚು ಸಮಯ ಹೆದ್ದಾರಿ ಬಂದ್ ಮಾಡಿ, ರಸ್ತೆಯಲ್ಲೇ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶಾಸಕಿ ಶಾರದಾ ಶೆಟ್ಟಿ ಅವರ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ಶಿರಸಿ ಬಂದ್ಗೆ ಕರೆ ನೀಡಿವೆ.
ರಾಜ್ಯ ಸರ್ಕಾರದಿಂದ ಹೋರಾಟ ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುವ ಅವಶ್ಯಕತೆ ಏನಿತ್ತು? ಇದನ್ನು ಖಂಡಿಸಿ ಮಂಗಳವಾರ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕುಮಟಾದಲ್ಲಿ ಪ್ರತಿಭಟನೆ ಮಾಡುತ್ತೇವೆ. ರಾಜ್ಯಪಾಲರು ಮತ್ತು ಕೇಂದ್ರ ಗೃಹ ಖಾತೆ ಸಚಿವರನ್ನು ಭೇಟಿ ಮಾಡುತ್ತೇವೆ.
– ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿ ಸತ್ತ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ ಅವರಿಗೆ ರಾಜಕೀಯ ಸಂಸ್ಕೃತಿ ಇಲ್ಲ. ಪರೇಶ್ ಸಾವಿನ ಪೋಸ್ಟ್ ಮಾರ್ಟಂ ವರದಿ ಬರುವ ಮೊದಲೇ ಬಿಜೆಪಿಯವರು ಅವನ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಿಜೆಪಿಯವರು ಡಾಕ್ಟರ್ಗಳಿದ್ದಂತೆ. ಅವರು ಹೆಣದ ಬಾಡಿ ನೋಡಿದ ತಕ್ಷಣ ಎಲ್ಲವೂ ಗೊತ್ತಾಗಿ ಬಿಡುತ್ತದೆ. ಐಜಿಪಿ ಹೇಮಂತ ನಿಂಬಾಳ್ಕರ್ ನಾಲ್ಕು ದಿನದಿಂದ ಅಲ್ಲಿಯೇ ಇದ್ದಾರೆ.
– ರಾಮಲಿಂಗಾರೆಡ್ಡಿ,ಗೃಹ ಸಚಿವ
ಹೊನ್ನಾವರದಲ್ಲಿ ನಡೆದ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಹಾಗೂ ಸಿಬಿಐ ಮೂಲಕ ನಡೆಸುವ ಕುರಿತು
ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ.
– ಅನಂತಕುಮಾರ ಹೆಗಡೆ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ