ಗಂಡನ ಬುದ್ಧಿಮಾತಿಗೆ ರೊಚ್ಚಿಗೆದ್ದ ಪತ್ನಿಯಿಂದ ಸುಪಾರಿ ಕೊಟ್ಟು ಹತ್ಯೆಗೆ ಪ್ಲ್ಯಾನ್.!
Team Udayavani, Jun 13, 2021, 9:37 AM IST
ದಾಂಡೇಲಿ: ಬುದ್ಧಿ ಮಾತು ಹೇಳಿದ್ದಕ್ಕೆ ತನ್ನ ಸ್ನೇಹಿತೆಗೆ ಕರೆ ಮಾಡಿ ಪತಿಯ ಕೊಲೆಗೆ ಸುಪಾರಿ ನೀಡಲು ಯತ್ನಿಸಿದ ಪತ್ನಿ ಹಾಗೂ ಸುಪಾರಿ ಹಂತಕನನ್ನು ಶನಿವಾರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಕ್ಕಳಾಗದ ಬಗ್ಗೆ ಹಾಗೂ ಪ್ರತಿದಿನ ಮೊಬೈಲ್ನಲ್ಲಿ ನಿರತಳಾಗಿರುವುದಕ್ಕೆ ಪತ್ನಿ ತೇಜಸ್ವಿನಿ ಸುತಾರಗೆ ಗಾಂವಠಾಣ ನಿವಾಸಿ ಪತಿ ಅಂಕುಷ ರಾಮಾ ಸುತಾರ್ ಬುದ್ಧಿ ಮಾತು ಹೇಳಿದ್ದ. ಪತ್ನಿ ತೇಜಸ್ವಿನಿ ತನ್ನ ಪತಿಗೆ ಗತಿ ಕಾಣಿಸಬೇಕೆಂದು ತೀರ್ಮಾನಿಸಿ, ಬೆಳಗಾವಿ ಗಣೇಶಪುರ ನಿವಾಸಿಯಾಗಿರುವ ಗೆಳತಿ ವನಿತಾ ಚೌವ್ಹಾಣ್ಗೆ ಕರೆ ಮಾಡಿ ತನ್ನ ಪತಿ ಅಂಕುಷನನ್ನು ಕೊಲೆ ಮಾಡಬೇಕು. 30 ಸಾವಿರ ರೂ. ಕೆಲಸ ಆದ ಮೇಲೆ ಕೊಡುವುದಾಗಿ ಸುಪಾರಿ ಕೊಟ್ಟಿದ್ದಳು.
ಅದರಂತೆ ಬೆಳಗಾವಿ ಜಿಲ್ಲೆಯ ನಂದಗಡ ತಾಲೂಕಿನ ನಿವಾಸಿ ಶಾಂತಾರಾಮ ಪಾಟೀಲ ಹಾಗೂ ಅಪ್ರಾಪ್ತ ಬಾಲಕ ದಾಂಡೇಲಿಗೆ ಬಂದು ಶುಕ್ರವಾರ ರಾತ್ರಿ 11ರ ಸುಮಾರಿಗೆ ಅಂಕುಷನ ಮನೆಗೆ ಭೇಟಿ ನೀಡಿ, ಅಂಕುಷನ ಪತ್ನಿ ತೇಜಸ್ವಿನಿ ಜತೆ ಕೂಡಿ ಅಂಕುಷನ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದಾಗ ಅಂಕುಷ ಬೊಬ್ಬೆ ಹಾಕಿದಾಗ ಪಕ್ಕದಲ್ಲಿದ್ದ ಸಹೋದರರು ಬಂದಾಗ ಇವರು ಪರಾರಿಯಾಗಿದ್ದರು.
ಎಸ್ಪಿ ಶಿವಪ್ರಕಾಶ ದೇವರಾಜು, ಎಎಸ್ಪಿ ಎಸ್. ಬದ್ರಿನಾಥ್ ಅವರ ನಿರ್ದೇಶನದಂತೆ, ಡಿವೈಎಸ್ಪಿ ಗಣೇಶ ಕೆ.ಎಲ್, ಸಿಪಿಐ ಪ್ರಭು ಗಂಗನಹಳ್ಳಿ ಮಾರ್ಗದರ್ಶನದಲ್ಲಿ ದಾಂಡೇಲಿ ಗ್ರಾಮೀಣ ಠಾಣೆ ಪಿಎಸೈ ಐ.ಆರ್. ಗಡ್ಡೇಕರ ನೇತೃತ್ವದ ಎಎಸೈ ವೆಂಕಟೇಶ ತೆಗ್ಗಿನ, ಸಿಬ್ಬಂದಿಗಳಾದ ರೇವಪ್ಪಾ ಬಂಕಾಪುರ, ಲಕ್ಷ್ಮೀಬಾಯಿ ಕಂಬಾರ, ರೂಪಾ ಗುನಗಾ, ದಯಾನಂದ ಲೋಂಡಿ ಹಾಗೂಗ್ರಾಮೀಣ ಠಾಣೆ ಅಧಿಕಾರಿಗಳ ಮತ್ತು ಸಿಬ್ಬಂದಿ ತಂಡ ಆರೋಪಿಗಳಾದ ತೇಜಸ್ವಿನಿ ಅಂಕುಷ ಸುತಾರ, ಗಣೇಶ ಶಾಂತಾರಾಮ ಪಾಟೀಲನನ್ನು ಬರ್ಚಿ ರಸ್ತೆ ಕೆಇಬಿ ಗ್ರೀಡ್ ಹತ್ತಿರ ಪತ್ತೆ ಮಾಡಿ ಬಂಧಿಸಿದೆ. ವನಿತಾ ಚೌವ್ಹಾಣ ಹಾಗೂ ಬಾಲಕ ತಲೆಮರೆಸಿಕೊಂಡಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.