ಅಕಾಡೆಮಿಗಳು ಅಕಾಡಮ್ಮಿಗಳಾಗಿವೆ: ಕದಂಬ ಸೈನ್ಯ ಆರೋಪ
Team Udayavani, Oct 9, 2021, 4:05 PM IST
ಶಿರಸಿ: ಅಕಾಡೆಮಿಗಳನ್ನು ಅಕಾಡೆಮ್ಮಿಗಳಾಗಿವೆ. ಕನ್ನಡಿಗರಿಗೆ ಮುಟ್ಟುವಂತಹ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಕದಂಬ ಸೈನ್ಯದ ರಾಜ್ಯ ಅಧ್ಯಕ್ಷ ರಮೇಶ ಬೇಕ್ರೀ ಹೇಳಿದರು.
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕನ್ನಡ ನೆಲದ ಸರ್ಕಾರಿ ಅಕಾಡೆಮಿಗಳು ಕನ್ನಡ, ಸಂಸ್ಕೃತಿ ಬೆಳಿಸಿಲ್ಲ ಎಂದರು.
ಸಂವಿಧಾನದಲ್ಲಿರುವ ಭಾಷಾ ವಿಧಿಗಳು ಕಲಂ 343-351 ರವರೆಗೆ ತಿದ್ದುಪಡಿಯಾಗಲೇಬೇಕು. ಅದೇ ಭಾಷೆ ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಕದಂಬ ಸೈನ್ಯ ತೀವ್ರವಾಗಿ ವಿರೋಧಿಸುತ್ತದೆ ಎಂದ ಅವರು, ಅಸಮಾನತೆಗೆ ಮದ್ದು, ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ತೀವ್ರ ಒತ್ತಡ ತರಬೇಕು. ಕನ್ನಡ ನಾಡಿನಲ್ಲಿ ನಾಮಫಲಕಗಳು ಮತ್ತು ಜಾಹೀರಾತುಗಳು ದಪ್ಪ ಅಕ್ಷರಗಳಲ್ಲಿ ಪ್ರಕಟವಾಗಲೇಬೇಕು ಎಂದರು.
ನಾವು ಕನ್ನಡಿಗರು ಎಂದು ಸ್ವಾಭಿಮಾನದಿಂದ ಹೇಳಬೇಕು, ಆಮೇಲೆ ನಿಮ್ಮ ಜನಾಂಗದ ಹೆಸರು ಹೇಳಿಕೊಳ್ಳಿ ನಾವು ಮೊದಲು ಕನ್ನಡಿಗರು ನಂತರ ಭಾರತೀಯರು. ಕನ್ನಡ ನೆಲದಲ್ಲಿ ಬದುಕು ಸಾಗಿಸುತ್ತಿರುವ ಹಿಂದಿ, ತಮಿಳು, ಉರ್ದು, ತೆಲುಗು, ಇಂಗ್ಲಿಷ್, ರಾಜಸ್ತಾನಿ, ಮರಾಠಿ ಮತ್ತಿತರ ಭಾಷಿಕರು ಸಾರ್ವತ್ರಿಕವಾಗಿ ಕನ್ನಡ ಮಾತನಾಡಬೇಕು ಹಾಗೂ ವ್ಯವಹರಿಸಬೇಕು. ನಿಮ್ಮ ಭಾಷೆ ಪ್ರೀತಿಸಿ, ನಿಮ್ಮ ಜೀವ ಭಾಷೆ ಕನ್ನಡ ಬಳಸಿ, ಕನ್ನಡ ಬೇಡವೇ? ಎಂದೂ ಹೇಳಿದರು.
ಕನ್ನಡ ನಾಡಿನ ನಿರಾಭಿಮಾನಿ ಕನ್ನಡಿಗರು, ಕನ್ನಡ ರಾಜಕೀಯ ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳು, ಕನ್ನಡ, ಕನ್ನಡ ಮಾತನಾಡದೇ ಇರುವ ಪರಭಾಷಿಕರು, ಕನ್ನಡ ವಿರೋಧಿಸುವವರು ಕೌರವರು. ಸ್ವಾಭಿಮಾನಿ ಕನ್ನಡಿಗರು, ಕನ್ನಡಕ್ಕಾಗಿ ಹೋರಾಟ ಮಾಡುವವರು, ಕನ್ನಡ ರಾಜಕೀಯ ಇಚ್ಛಾಶಕ್ತಿ ಇರುವ ಕನ್ನಡಿಗರು, ಕನ್ನಡವನ್ನು ಪ್ರೀತಿಸುವ ಪರಭಾಷಿಕರು, ಪಾಂಡವರು. ಅಧರ್ಮದ ವಿರುದ್ಧ ಧರ್ಮದ ಹೋರಾಟ.
ಕನ್ನಡ ನೆಲದ ನಟ-ನಟಿಯರು, ಕಿರುತೆರೆಯ ನಟ-ನಟಿಯರು, ನಿರೂಪಕರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡಲೇಬೇಕು ಎಂದರು. ಕನ್ನಡ ನೆಲದ ಉನ್ನತ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಕನ್ನಡ ಮಾತನಾಡಿ, ವ್ಯವಹರಿಸಬೇಕು. ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಕಾಯಿದೆ ಕಡ್ಡಾಯವಾಗಿ ಜಾರಿಗೆ ತರಬೇಕು. ಸಚಿವಾಲಯ ಅಧಿಕಾರಿಗಳಿಂದ ಕನ್ನಡಕ್ಕೆ ಕುತ್ತು ಬರುತ್ತಿದೆ ರಾಜ್ಯ ಸರ್ಕಾರ ಜಾಗೃತಿ ವಹಿಸಬೇಕು ಎಂದರು.
ಕನ್ನಡ ನೆಲದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಪರಭಾಷಿಕರಿಗಲ್ಲ. ಕನ್ನಡ ಬಳಸಬೇಕು ಹಾಗೂ ವ್ಯವಹರಿಸಬೇಕು. ಸರ್ಕಾರಿ ವಾಹನಗಳಿಗೆ ಮಾತ್ರ ಕನ್ನಡ ಮತ್ತು ಆಂಗ್ಲ ಭಾಷೆಯ ಅಂಕಿಗಳಿವೆ. ಖಾಸಗಿ ವಾಹನಗಳಿಗೂ ಕೂಡ ಕಡ್ಡಾಯವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯ ಅಂಕಿಗಳನ್ನು ಬಳಸುವಂತೆ ನಿಯಮ ಜಾರಿಗೆ ತರಬೇಕು ಎಂದರು.
ಕರ್ನಾಟಕದ ಕನ್ನಡಿಗರ ಅಭಿಮಾನವೇ ಅದರ ಅಸ್ಥಿತ್ವದ ದಾರಿದೀಪ. ಎರಡು ಶತಮಾನ ಬ್ರಿಟೀಷರ ಆಡಳಿತದಲ್ಲೂ ಕನ್ನಡ ಅಳಿಯಲಿಲ್ಲ. ಆದರೆ ಕನ್ನಡಿಗರ ಸರ್ಕಾರಗಳಲ್ಲೇ ಸಂಪೂರ್ಣವಾಗಿ ಕಡೆಗಣನೆಯಾಗಿದೆ. ದುರಾದೃಷ್ಟಕರವೆಂದರೆ ಬಹುತೇಕ ಕನ್ನಡಿಗರಷ್ಟು ಪರಭಾಷೆ ವ್ಯಾಮೋಹಿಗಳು. ಯಾವ ಭಾಷೆಯವರು ಇಲ್ಲ. ಕನ್ನಡಿಗರು ಸಾರ್ವತ್ರಿಕವಾಗಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು ಹಾಗೂ ವ್ಯವಹರಿಸಬೇಕು, ಕನ್ನಡವು ಅನ್ಯ ಭಾಷೆಗಳಿಗೆ ಆಹಾರವಾಗದಂತೆ ನೋಡಿಕೊಳ್ಳಬೇಕಾದ್ದು ಕನ್ನಡಿಗರ ಕರ್ತವ್ಯ ಎಂದರು.
ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು-ವ್ಯವಹರಿಸಬೇಕು. ಸರ್ಕಾರಿ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯು ವಿಸ್ತಾರವಾಗುವಂತೆ ಮಾಡಬೇಕು ಎಂದ ಅವರು,
ಕನ್ನಡಿಗರ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಕಾಯಿದೆಯಾಗಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸದೆ ಮಹಿಷಿ ವರದಿ ಬಗ್ಗೆ ತಾತ್ಸಾರ ಮೊದಲು ಬಿಡಬೇಕು ಎಂದರು.
ಕನ್ನಡ ಕನ್ನಡಿಗರ ಬಗ್ಗೆ ಸರ್ಕಾರಗಳು ತಾತ್ಸಾರ ಮನೋಭಾವ ತೋರುತ್ತಿರುವುದರಿಂದ ಸಮಸ್ತ ಕನ್ನಡಿಗರು ಅಂಥ ಸರ್ಕಾರಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇಬೇಕಿದೆ ಎಂದೂ ಹೇಳಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ , ಮೈಸೂರು ಜಿಲ್ಲಾಧ್ಯಕ್ಷ ಎ.ನಾಗೇಂದ್ರ, ಜಾತ್ಯಾತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಕನ್ನಡ ರತ್ನ ರಾಜ್ಯ ಸಂಚಾಲಕಿ ಶಾಂತಮ್ಮ ಮತ್ತು ಕದಂಬ ಸೈನ್ಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.