ಶಂಭು ಹೆಗಡೆ ಯಕ್ಷರಂಗದ ರಾಜ
Team Udayavani, Feb 6, 2019, 10:52 AM IST
ಹೊನ್ನಾವರ: ಶಂಭು ಹೆಗಡೆಯವರು ಯಕ್ಷಗಾನದ ಡಾ| ರಾಜಕುಮಾರ್ ಎಂದರು. ಶಂಭು ಹೆಗಡೆಯವರೆಂದರೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಅವರ ಮೇಲೆ ಪಿಎಚ್ಡಿ ಮಾಡಬಹುದು. ಗುಣವಂತೆಯನ್ನು ಸಿರಿವಂತೆ ಮಾಡಿದವರು ಕೆರೆಮನೆ ಶಂಭು ಹೆಗಡೆಯವರು. ನಾನು ಕೂಡ ಕೆರೆಮನೆ ಕುಟುಂಬದ ಅಭಿಮಾನಿಗಳಲ್ಲಿ ಒಬ್ಬ ಎಂದು ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಶಂಕರ ಭಟ್ ನುಡಿದರು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಅತಿಥಿಗಳಾಗಿ ಮಾತನಾಡಿದರು. ಜಯರಾಮ ಪಾಟೀಲ್, ಬೆಂಗಳೂರು ಮಾತನಾಡಿ ಕಲೆ ಎಂದರೆ ಬೆಳಕಿದ್ದಂತೆ. ಅದು ಎಲ್ಲರನ್ನು ಬೆಳಗುತ್ತದೆ. ರಂಗಭೂಮಿಯ ಸೇವೆ ಹೀಗೆ ಮುಂದುವರೆಯಬೇಕಿದೆ ಎಂದರು.
ಶೇಷಗಿರಿ ಭಟ್ ಗುಂಜಗೋಡು, ಸಿದ್ಧಾಪುರ ಮಾತನಾಡಿ ಶಿವಾನಂದರು ಯಕ್ಷಗಾನಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ದೇಹಕ್ಕೆ ಆಹಾರ ಮುಖ್ಯವಾದರೆ ಮನಸ್ಸಿಗೆ ಕಲೆ ಅಷ್ಟೇ ಮುಖ್ಯ ಎಂದರು.
ಶಂಭು ಗೌಡ ಅಡಿಮನೆ ಮಾತನಾಡಿ ಈ ಕಾರ್ಯಕ್ರಮ ಶಿವಾನಂದರ ಪ್ರಯತ್ನದ ಫಲ ಎಂದರು. ನಾಟ್ಯೋತ್ಸವ ಶಾಶ್ವತವಾಗಿ ನಡೆಯಬೇಕಿದೆ. ಈ ಪರಂಪರೆ ಯಕ್ಷಗಾನದ ಕೇಂದ್ರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ, ಇಂದು ಅರ್ಹರಿಗೆ ಗಜಾನನ ಹೆಗಡೆ ಪ್ರಶಸ್ತಿ ಹಾಗೂ ಕಲಾಪೋಷಕ ಪ್ರಶಸ್ತಿ ನೀಡಿದ್ದಾರೆ. ನಾಟ್ಯೋತ್ಸವಕ್ಕೆ ಸರ್ಕಾರದ ಸಹಾಯದ ನಿರೀಕ್ಷೆ ಇದೆ. ಆದರೆ ಈವರೆಗೆ ಯಾವುದೇ ಸಹಕಾರ ದೊರೆತಿಲ್ಲ ಎಂದರು.
ಪುಷ್ಪಾರ್ಚನೆ ಮತ್ತು ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ಸಭಾಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ನಾರಾಯಣ ಯಾಜಿ ಸಾಲೇಬೈಲು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪುರಸ್ಕೃತ ತಿಮ್ಮಣ್ಣ ಯಾಜಿಯವರಿಗೆ ಅಭಿನಂದನಾ ನುಡಿ ಸಲ್ಲಿಸಿದರು. ಹಿರಿಯ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ, ಮಣ್ಣಿಗೆಯವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2018 ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ತಿಮ್ಮಣ್ಣ ಯಾಜಿ, ಯಕ್ಷಗಾನ ಕನ್ನಡದ ಕಲೆ. ಇದು ಕಲಾವಿದನೂ ಸಂತಸಪಟ್ಟು, ನೋಡುವವರಿಗೂ ಸಂತಸ ಕೊಡುವ ಕಲೆಯಾಗಿದೆ ಎಂದರು.
ನಾರಾಯಣ ಭಟ್ ಮೇಲಿನಗಂಟಿಗೆ ಮತ್ತು ಕೆ.ಜಿ. ಹೆಗಡೆ ಅಣ್ಣುಹಿತ್ತಲು ಅವರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ ನೀಡಲಾಯಿತು.
ನಾರಾಯಣ ಭಟ್ಟರು ಮಾತನಾಡಿ ಕಲೆಗೆ ಬೆಲೆ ತಂದುಕೊಟ್ಟವರು ಕೆರೆಮನೆ ಮನೆತನದ ಹಿರಿಯರು. ಕೆರೆಮನೆ ಕುಟುಂಬ ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು. ಶಂಭು ಹೆಗಡೆಯವರು ಸೋತುಗೆದ್ದವರು. ಸತ್ತು ಬದುಕಿದವರು ಎಂದು ಸ್ಮರಿಸಿದರು.
ಕೆ.ಜಿ. ಹೆಗಡೆ ಅಣ್ಣುಹಿತ್ತಲು ಮಾತನಾಡಿ ಯಕ್ಷಗಾನದಿಂದ ನಾನು ತೃಪ್ತಿ ಪಡೆದಿದ್ದೇನೆ. ಯಕ್ಷಗಾನ ನನಗೆ ಸಂತಸ ತಂದಿದೆ. ಅದಕ್ಕಾಗಿ ಯಕ್ಷಗಾನಕ್ಕೆ ನಾನು ನನ್ನ ಕೈಲಾದಷ್ಟು ನಾನು ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ ಎಂದರು. ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಶಿವಾನಂದ ಹೆಗಡೆ ವಂದಿಸಿದರು.