ಉ.ಕ.ದಲ್ಲಿ ಕೆಎಫ್ಡಿ ರಿಸರ್ಚ್ ಸೆಂಟರ್
Team Udayavani, Feb 10, 2021, 5:45 PM IST
ಕಾರವಾರ: ಮಂಗನ ಕಾಯಿಲೆಯ ಸಮಗ್ರ ಶೋಧನೆಗಾಗಿ ಜಿಲ್ಲೆಯಲ್ಲಿ ರಿಸರ್ಚ್ ಸೆಂಟರ್ ತೆರೆದು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ತುಂಬಬೇಕಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೇಳಿದರು.
ಡಿಸಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2019ರ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಭಾವ ಹೆಚ್ಚಿತ್ತು. ಆದರೆ 2020ರಲ್ಲಿ ಆ ಪ್ರಭಾವವಿಲ್ಲ. ಆದರೂ ಈ ಬಾರಿ ಕಾಯಿಲೆ ನಿಯಂತ್ರಣದ ಕುರಿತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹೆಚ್ಚುಗಮನಹರಿಸಬೇಕಿದೆ. ಮಂಗನ ಕಾಯಿಲೆ ದೃಢತೆಗಾಗಿ ಸಂಬಂಧಿಸಿದ ವ್ಯಕ್ತಿಯ ರಕ್ತದ ಮಾದರಿ ತಪಾಸಣೆಗಾಗಿ ಪಕ್ಕದ ಶಿವಮೊಗ್ಗಜಿಲ್ಲೆ ಅಥವಾ ಬೆಂಗಳೂರಿಗೆ ತೆರಳಬೇಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಗನ ಕಾಯಿಲೆ ಕುರಿತು ಜಿಲ್ಲೆಯಲ್ಲಿಯೇಒಂದು ರಿಸರ್ಚ್ ಸೆಂಟರ್ ತೆರೆದು ರಕ್ತದ ಮಾದರಿ ಪರಿಶೀಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹೊನ್ನಾವರದ ಕೆಎಫ್ಡಿ ವೈದ್ಯಾಧಿಕಾರಿ ಡಾ| ಸತೀಶ ಮಾತನಾಡಿ, ಜಿಲ್ಲೆಯಲ್ಲಿ2020 ರಲ್ಲಿ 91 ಪಾಸಿಟಿವ್ ಕೇಸ್ಗಳುಬಂದಿದ್ದು, ಒಂದು ಸಾವು ಸಂಭವಿಸಿದೆ. ಕಾಯಿಲೆ ನಿವಾರಣೆಗಾಗಿ ಮೂರು ಹಂತದಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ಜನರು ಮೊದಲ ಹಂತದ ವ್ಯಾಕ್ಸಿನ್ತೆಗೆದುಕೊಂಡು ನಂತರ ಎರಡನೇ ಹಂತದ ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕಎಸ್. ಬದ್ರಿನಾಥ, ಜಿಲ್ಲಾ ತಂಬಾಕುನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರೇಮಕುಮಾರ್ ನಾಯ್ಕ, ಜಿಲ್ಲಾ ಆರ್ ಎಚ್ಸಿ ಅಧಿಕಾರಿ ಡಾ| ರಮೇಶರಾವ್,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಿನೋದಭೂತೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತಗೋರೆಸಾಬ ನದಾಫ ಸೇರಿದಂತೆ ವಿವಿಧಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.