ಕೆರೆಗದ್ದೆ ಪೋರ ಇನ್ನು ಕಿಶೋರ ಕನ್ನಡಿಗ
Team Udayavani, Feb 8, 2021, 8:09 PM IST
ಶಿರಸಿ: ಯಲ್ಲಾಪುರ ತಾಲೂಕಿನ ಇಡಗುಂದಿ ಕೆರೆಗದ್ದೆಯ ಪೋರ, ಇಲ್ಲಿನ ಲಯನ್ಸ್ ಶಾಲೆ ವಿದ್ಯಾರ್ಥಿ ಚಿನ್ಮಯ ಕೆರೆಗದ್ದೆ ನಾನು ಅ ಕ್ರಿಯೇಷನ್ಸ್ ಹಾಗೂ ಟಿಎಸ್ಎಸ್ ಸಹಕಾರಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಿಶೋರ ಕನ್ನಡಿಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ.
ಕೊರೊನಾದಂತ ಕಠಿಣ ಸಮಯದಲ್ಲಿ ಮಕ್ಕಳನ್ನು ಜಾಗೃತವಾಗಿಡಲು ಮತ್ತು ಕನ್ನಡ ಪ್ರೀತಿ ಬೆಳೆಸಲು ಕಿಶೋರ ಕನ್ನಡಿಗ ಸ್ಪರ್ಧೆ ಆಯೋಜಿಸಲಾಗಿತ್ತು. ಕನ್ನಡ ಭಾಷಣ, ಕಥೆ, ಹಾಡು, ರಸಪ್ರಶ್ನೆ ಹೀಗೆ ವಿವಿಧ ಸುತ್ತುಗಳ ಮೂಲಕ ಸ್ಪರ್ಧೆ ನಡೆಸಲಾಗಿತ್ತು. ರಾಜ್ಯ ಹೊರ ರಾಜ್ಯದಿಂದಲೂ ಅನೇಕ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮ ಸುತ್ತಿಗೆ ಆಯ್ಕೆಯಾದ ಐವರಲ್ಲಿ ಕೆರೆಗದ್ದೆಯ ಪತ್ರಕರ್ತ ಕೃಷ್ಣಮೂರ್ತಿ ಹೆಗಡೆ ಹಾಗೂ ಬರಹಗಾರ್ತಿ ಆಶಾ ಕೆರೆಗದ್ದೆಯ ಪುತ್ರ ಚಿನ್ಮಯ್ ವಿಜೇತನಾಗಿದ್ದಾನೆ. ಟಿಎಸ್ಎಸ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ವಿಜೇತರಿಗೆ ಫಲಕ, ಪ್ರಶಸ್ತಿಪತ್ರ ಒಳಗೊಂಡ ಬಹುಮಾನ ವಿತರಿಸಿ ಶುಭಕೋರಿದರು. ಉತ್ತಮ ಪ್ರದರ್ಶನ ನೀಡಿದ ಸಾನ್ವಿ ಜೋಶಿ, ಅಭಿನವ ಭಟ್, ಮೋಹಿತ್ ಭಂಡಾರಿ ಅವರನ್ನೂ ಪುರಸ್ಕರಿಸಲಾಯಿತು.
ಇದನ್ನು ಓದಿ :ಕಸಾಪ ಜನಪರ ಮಾಡುವೆ: ಜೋಶಿ
ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಸಂಸ್ಥೆ ನಿರ್ದೇಶಕರು ಹಾಗೂ ನಾನು ಅ ಕ್ರಿಯೇಷನ್ಸ್ ಮುಖ್ಯಸ್ಥ ಅರವಿಂದ ಹೆಗಡೆ ಇದ್ದರು.