ಸಮಗ್ರ ಅಭಿವೃದ್ಧಿಗೆ ಕಾದಿದೆ ಕರಸುಳ್ಳಿ ‘ಕೊಪ್ಪಳಗದ್ದೆ’ದೊಡ್ಡ ಕೆರೆ
Team Udayavani, Jul 11, 2021, 9:46 AM IST
ಶಿರಸಿ: ತಾಲೂಕಿನ ಪಶ್ಚಿಮ ಭಾಗದಲ್ಲಿ ಪ್ರಮುಖ ಜೀವಜಲದ ತಾಣಗಳಲ್ಲಿ ಒಂದಾದ ಯಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಸುಳ್ಳಿ ಕೊಪ್ಪಳಗದ್ದೆ ಕೆರೆಯು ಅಭಿವೃದ್ಧಿಗೆ ಕಾದಿದೆ.
ಪೂರ್ವಜರು ನಿರ್ಮಾಣ ಮಾಡಿದ್ದ ಈ ಕೆರೆ ಸಹಜ ಜೀವ ಜಲದ ಸಂಪತ್ತುಗಳ ರಾಶಿಯಾಗಿಗೆ ಆಸರೆಯಾಗಿದೆ. ಕರಸುಳ್ಳಿ ಊರಿನ ಸುಮಾರು 25 ಎಕರೆ ಅಡಿಕೆ ತೋಟ, 25-30 ಎಕರೆ ಕೆರೆ ಭತ್ತದ ಗದ್ದೆಗೆ ಆಶ್ರಯವಾಗಿದೆ. ಆದರೆ, ಈಗ ಹೂಳು ತುಂಬಿದ್ದು, ಹೂಳು ತೆಗೆಯುವ ಜೊತೆಗೆ ಕೆರೆಯ ಏರಿ ಹಾಗೂ ಕೋಡಿಯು ದುರಸ್ತಿಗೆ ಕಾದಿದೆ. ಕೆರೆಯ ನೀರಿನ ಮೇಲೆ ನೀರ ಹುಲ್ಲೂ ಬೆಳೆದಿದೆ. ಒಂದು ಕಾಲಕ್ಕೆ ಬಾತುಕೋಳಿಗಳೂ ಓಡಾಡಿಕೊಂಡಿದ್ದವು ಈಗ ಪುನಶ್ಚೇತನಕ್ಕೆ ಹಾತೊರೆಯುತ್ತಿದೆ.
ತಾಲೂಕಿನ ಪೂರ್ವ ಭಾಗದಲ್ಲಿ ದೊಡ್ಡ ಕೆರೆಗಳು ಇವೆ. ಆದರೆ, ಪಶ್ಚಿಮ ಭಾಗದಲ್ಲಿ ದೊಡ್ಡ ಕೆರೆಗಳು ಅಪರೂಪ. 15-20 ಗುಂಟೆ ಕೆರೆ ಇದ್ದರೆ ಅದೇ ದೊಡ್ಡದು ಎಂಬ ಮಾತುಗಳೇ ಇವೆ. ಆದರೆ, ಕರಸುಳ್ಳಿ ಕೊಪ್ಪಳ ಗದ್ದೆ ಕೆರೆ ಎರಡು ಎಕರೆ ಮೂರು ಗುಂಟೆ ಕ್ಷೇತ್ರದ್ದಾಗಿದೆ.
ಈ ಕೆರೆಗೆ ಮೇಲೊಂದು 15 ಗುಂಟೆ ಕೆರೆ ಕೂಡ ಇದೆ. ಇದು ಒಂದು ಸರಪಳಿ ಮಾದರಿಯಲ್ಲಿ ಜೋಡಿಸಿ ಕೊಂಡಿದೆ. ಇಲ್ಲಿಂದ ಹೊರಗೆ ಬರುವ ನೀರು ಕೋಡಿಯ ಮೂಲಕ ಭತ್ತದ ಗದ್ದೆಗಳಿಗೆ ಮಳೆಗಾಲ ಮುಗಿಯುತ್ತಿದ್ದಂತೇ ಆಸರೆಯಾಗಿದ್ದವು. ಆದರೆ, ಈಗ ಕೋಡಿ ಹಾಗೂ ಕೆರೆ ಅಭಿವೃದ್ಧಿ ಆಗಬೇಕಿದೆ.
ಇದನ್ನೂ ಓದಿ: ಮೇಕೆ ಕದ್ದನೆಂದು ದಲಿತ ಯುವಕನ ಮೇಲೆ ಹಲ್ಲೆ: ವಿಡಿಯೋ ವೈರಲ್ ಆದ ಬೆನ್ನಲ್ಲೇ 15 ಮಂದಿಯ ಬಂಧನ
ಈ ಕೆರೆ ಸರಿಯಾಗಿದ್ದರೆ ಊರಿನ ಜಲ ಮಟ್ಟ ಕೂಡ ಏರುತ್ತದೆ. ದೊಡ್ಡ ಕೆರೆ ಆಗಿದ್ದರಿಂದ ಕೇವಲ ಗ್ರಾಮಸ್ಥರಿಂದ ಅಭಿವೃದ್ಧಿ ಕಷ್ಟ. ಅಂದಾಜು 25-30 ಲಕ್ಷ ರೂಪಾಯಿ ಬೇಕಾಗಬಹುದು. ಆದರೆ, ಗ್ರಾಮದ ಸರ್ವ ಹಿತದ ಕಾರಣದಿಂದ ಆಗಲೇಬೇಕಾದ ಅಭಿವೃದ್ಧಿ ಕಾರ್ಯವಾಗಿದೆ. ಈ ಜಲ ಪಾತ್ರೆ ಉಳಿಸಿಕೊಡಿ ಎಂದು ಜಲ ಕೈಂಕರ್ಯ ನಡೆಸುವವರಲ್ಲಿ ಕೇಳಿಕೊಳ್ಳುವದೇ ಆಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಅನಂತ ಭಟ್ಟ ಕರಸುಳ್ಳಿ ಹಾಗೂ ಪ್ರಶಾಂತ ಭಟ್ಟ, ಯೋಗೀಶ ಭಟ್ಟ.
ಇದಕ್ಕೆ ಒರತೆ ನೀರು ಇದೆ. ಕುಡಿಯುವ ನೀರಿಗೂ ಇದೇ ಮೂಲ. ಸರ್ವೆ ನಂಬರ್ 229 ನಲ್ಲಿದೆ ನಮ್ಮ ಜಲಪಾತ್ರೆ. ಜನಪ್ರತಿನಿಧಿಗಳ ಹಾಗೂ ಆಸಕ್ತರ ಮೂಲಕ ಈ ಕೆರೆ ಅಭಿವೃದ್ಧಿ ಮಾಡಿಕೊಡಿಸಲು ಮನವಿ ಮಾಡಿಕೊಳ್ಳುತ್ತೇವೆ. ಈಗ ಮಳೆಗಾಲ ಆಗಿದ್ದರಿಂದ ಹೂಳೆತ್ತಲು ಆಗದು. ಎಪ್ರೀಲ್ ಮೇ ತಿಂಗಳು ಸಕಾಲ ಆದರೂ ಈಗ ಪ್ರಸ್ತಾವನೆ ಸಲ್ಲಿಸಿದರೆ ಮುಂದಿನ ಮೇ ಹೊತ್ತಿಗೆ ಅಭಿವೃದ್ಧಿ ಕಾಣಬಹುದು ಎಂಬುದು ನಿರೀಕ್ಷೆ ಎನ್ನುತ್ತಾರೆ ಗ್ರಾಮದ ಗಿರೀಶ ಭಟ್ಟ ಹಾಗೂ ನಾಗರಾಜ್ ಜೋಶಿ.
ಶತಮಾನಗಳಿಂದ ಹೂಳೆತ್ತಿಸಿಕೊಳ್ಳದ, ಹೂಳು, ಕೆಸರಿನಿಂದ ತುಂಬಿದ ಕರಸುಳ್ಳಿಯ ದೊಡ್ಡ ಕೆರೆ ಸಮಗ್ರ ಅಭಿವೃದ್ಧಿಗೆ ಕಾದಿದೆ. ಸರಕಾರ ಹಾಗೂ ಸಹಕಾರಿಗಳಿಂದ ಜಲ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸುವ ಕಾರ್ಯ ಆಗಬೇಕಿದೆ.