ಗೃಹೋದ್ಯಮಿಗಳಿಗೆ ಮಾರುಕಟ್ಟೆ
Team Udayavani, Mar 22, 2019, 11:07 AM IST
ಹಳಿಯಾಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯವರು ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಉದ್ಯೋಗ ವಾಹಿನಿ ಸಂಚಾರಿ ವಾಹನ ನೂತನ ಯೋಜನೆ ಜಾರಿಗೊಳಿಸಿದ್ದು ಈ ವಾಹನಕ್ಕೆ ಸಂಸ್ಥೆಯ ಕಾರ್ಯಕಾರಣಿ ಮಂಡಳಿ ಅಧ್ಯಕ್ಷ ಪ್ರಸಾದ್ ದೇಶಪಾಂಡೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ರುಡಸೆಟ್ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗ ವಾಹಿನಿ ಸಂಚಾರಿ ಮಾರಾಟ ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ಪ್ರಸಾದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಗ್ರಾಮಿಣ ಭಾಗದ ಯುವಕ ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ಆಯೋಜಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕರಿಸುತ್ತಿದೆ. ಅಲ್ಲದೇ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತರಬೇತಿ ಪಡೆದ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಉದ್ಯೋಗ ವಾಹಿನಿ ಎಂಬ ವಿನೂತನ ಯೋಜನೆ ರೂಪಿಸಿ ಮಹಿಳೆಯರ ಆರ್ಥಿಕ ಸಬಲತೆಗೆ ಹೆಜ್ಜೆ ಇಟ್ಟಿದೆ. ಈ ಉದ್ಯೋಗ ವಾಹಿನಿ- ಸಂಚಾರಿ ವಾಹನವಾಗಿದ್ದು, ಮಹಿಳಾ ಉದ್ಯಮಿಗಳ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆ ನಿರ್ದೇಶಕ ನಿತ್ಯಾನಂದ ವೈದ್ಯ ಹಾಗೂ ಹಿರಿಯ ಮಾರ್ಗದರ್ಶಿ ಅನಂತಯ್ಯ ಆಚಾರ ಮಾತನಾಡಿ, ಸಮೃದ್ಧಿ ಮಹಿಳಾ ಮಹಾ ಒಕ್ಕೂಟದ ಮೂಲಕ ಸಂಸ್ಥೆ ಈ ಕಾರ್ಯಚಟುವಟಿಕೆ ಹಮ್ಮಿಕೊಂಡಿದ್ದು, ಯೋಜನೆಯ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು. ಸಂಸ್ಥೆಯ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಶ್ಯಾಮ ಕಾಮತ್, ವಿಆರ್ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಸಮೃದ್ಧಿ ಮಹಿಳಾ ಮಹಾ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಉದ್ಯಮಿಗಳು, ಡಿಪಿಐಟಿಐ, ಸಿಬಿಎಸ್ಸಿ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಸಿಬ್ಬಂದಿ ಇದ್ದರು.