ಜನಜಾತ್ರೆ ನಿಯಂತ್ರಿಸಲು ಅಧಿಕಾರಿಗಳಿಂದ ಪರಿಶೀಲನೆ
Team Udayavani, Jul 20, 2020, 11:28 AM IST
ಅಂಕೋಲಾ: ಪಟ್ಟಣದಲ್ಲಿ ಶನಿವಾರ ಕಂಡ ಜನಜಾತ್ರೆ ನಿಯಂತ್ರಿಸಲು ಅಧಿಕಾರಿಗಳ ತಂಡ ಭಾನುವಾರ ಲಾಕ್ ಡೌನ್ ವೇಳೆ ಇಲ್ಲಿನ ತರಕಾರಿ ಮತ್ತು ಬೀದಿ ವ್ಯಾಪಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಪಟ್ಟಣದ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಜನಸಾಗರ ಹರಿದು ಬರುತ್ತಿದೆ. ಕೋವಿಡ್ ಬಯವಿಲ್ಲದೆ ಜನರು ಸಾಮಾಜಿಕ ಅಂತರ ಮರೆತು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನಿರತರಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ತಹಶೀಲ್ದಾರ್ ಉದಯ ಕುಂಭಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ ಮತ್ತು ಪಿಎಸ್ಐ ಸಂಪತಕುಮಾರ ಸೋಮವಾರದಿಂದಲೇ ಪಟ್ಟಣದಲ್ಲಿ ಜನರ ನಿಯಂತ್ರಣ ಮಾಡಲು ಭಾನುವಾರ ಪಟ್ಟಣದ ಎಲ್ಲ ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರೆ. ಕಳೆದ ಹಲವು ದಿನಗಳಿಂದ ಬೀದಿ ಬೀದಿಗಳಲ್ಲಿ ತರಕಾರಿ ಅಂಗಡಿ ತೆರೆದುಕೊಂಡಿರುವುದನ್ನು ಸೋಮವಾರ ತೆರವು ಮಾಡಲು ನಿರ್ದರಿಸಿದ್ದಾರೆ. ಅಂಗಡಿ ಬಿಟ್ಟು ರಸ್ತೆ ಮೇಲೆ ಅಂಗಡಿ ಬೆಳೆಸಿದರೆ ಅವುಗಳನ್ನು ತೆರವು ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ ತಿಳಿಸಿದ್ದಾರೆ.
ಸಾರ್ವಜನಿಕರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೆ ಒಡಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಸಂಪತಕುಮಾರ ತಿಳಿಸಿದ್ದಾರೆ.