25 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲುವು: ಹೆಬ್ಬಾರ್
Team Udayavani, Oct 24, 2021, 1:31 PM IST
ಶಿರಸಿ: ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಹಾನಗಲ್ ನಲ್ಲಿ ಕಜಿಷ್ಠ ೨೫ ಸಹಸ್ರ ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಹಾನಗಲ್ ಸಿ.ಎಂ.ಉದಾಸಿ ಅವರ ಕ್ಷೇತ್ರ. ಅವರ ಅಗಲಿಕೆಯ ನೋವು, ಅನುಕಂಪ ಕೂಡ ಬಿಜೆಪಿ ಗೆಲುವಿಗೆ ಕಾರಣ ಆಗಲಿದೆ. ಕೇಂದ್ರ, ರಾಜ್ಯ ಸರಕಾರ ಕೂಡ ಬಿಜೆಪಿಯದೇ. ಕರೆಯುವ ಎಮ್ಮೆಗೆ ಮಹತ್ವ ಸಹಜವಾಗಿ ಇರುತ್ತದೆ ಎಂದರು.
ಸಿದ್ದರಾಮಯ್ಯ ಅವರು ಇನ್ನೂ ಹತಾಶರಾಗಿ ಮಾತನಾಡುತ್ತಾರೆ. ನೋಡುತ್ತಲಿರಿ ಎಂದು ವ್ಯಂಗ್ಯವಾಡಿದ ಹೆಬ್ಬಾರ್, ಶೀಘ್ರ ರೈತರು ಕಳೆದ ವರ್ಷ ಕಟ್ಟಿದ ಬೆಳೆ ವಿಮಾ ಪರಿಹಾರದ ಹಣ ಬಿಡುಗಡೆ ಆಗಲಿದೆ. ಡಯಾಲಿಸಸ್ ಘಟಕ ವ್ಯವಸ್ಥಿತ ನಿರ್ವಹಣೆ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಹನಿ ನೀರಾವರಿ ಅನುಷ್ಠಾನದಲ್ಲಿ ತೊಡಕು ಆಗಿದ್ದು ಗಮನಕ್ಕೆ ಬಂದಿದೆ. ಈ ಕುರಿತು ಸಮಸ್ಯೆ ಬಗೆಹರಿಸಲು ಸಚಿವರ ಜೊತೆ ಮಾತನಾಡಿದ್ದೇನೆ. ಮೊದಲಿನಂತೆ ನೆರವು ಸಿಗಲಿದೆ.-ಶಿವರಾಮ ಹೆಬ್ಬಾರ್, ಸಚಿವ