ಮನೆ ಬಿಟ್ಟು ಬಂದ ಅಪ್ರಾಪ್ತೆ
Team Udayavani, Jun 12, 2021, 6:38 PM IST
ಮುಂಡಗೋಡ: ಪಟ್ಟಣಕ್ಕೆ ಅಪ್ರಾಪ್ತೆಯೊಬ್ಬಳು ಬಟ್ಟೆ ಸಮೇತ ಮನೆ ಬಿಟ್ಟು ಬಂದವಳನ್ನು ಇಲ್ಲಿನ ಪೊಲೀಸರು ಮನವೊಲಿಸಿ ಬುದ್ಧಿವಾದ ಹೇಳಿ ಪೋಷಕರ ಜತೆ ಕಳುಹಿಸಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಕೈಯಲ್ಲಿ ಚೀಲ ಹಿಡಿದುಕೊಂಡು ಈ ಅಪ್ರಾಪ್ತೆ ಕುಳಿತ್ತಿದ್ದಳು. ಸೊಸೈಟಿ ಸಿಬ್ಬಂದಿ ಈಕೆಯನ್ನು ವಿಚಾರಿಸಿದಾಗ, ನಾನೊಬ್ಬಳು ಅನಾಥೆ ನಮ್ಮ ಸಂಬಂಧಿಗಳ ಮನೆಯಲ್ಲಿ ವಾಸವಿದ್ದೆ ಅವರು ಹೊಡಿದು, ಬಡಿದು ಮಾಡುತ್ತಾರೆ. ಆದ ಕಾರಣ ಮನೆ ಬಿಟ್ಟು ಬಂದಿದ್ದೇನೆ. ನನಗೊಂದು ಬಾಡಿಗೆ ಕೊಡಿಸಿ. ನಾನು ಅಲ್ಲಿಯೇ ಇದ್ದು ಜೀವನ ನಡೆಸುತ್ತೇನೆ ಎಂದು ಹೇಳುತ್ತಿದ್ದಳು.
ಇದನ್ನು ಕೇಳಿದ ಸೊಸೈಟಿ ಸಿಬ್ಬಂದಿ ಮತ್ತು ಜನರು ಮರುಗುತ್ತಾ ಮತ್ತೆ ಹೆಚ್ಚಿನ ವಿಚಾರಣೆ ಮಾಡಿದಾಗ ಬಾಲಕಿ ಹೆಚ್ಚು ಮಾತನಾಡದೇ ನಾನು ಹುಬ್ಬಳ್ಳಿ ಹತ್ತಿರದ ಗ್ರಾಮದವಳು ನಮ್ಮೂರಿನ ಹೆಸರು ಗೊತ್ತಿಲ್ಲ. ನನ್ನನ್ನು ಅಪರಿಚಿತನೊಬ್ಬ ಈ ಊರಿಗೆ ಬೈಕ್ನಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳಿದಾಗ. ಕೊನೆಗೆ ಅಲ್ಲಿದ್ದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪಿಎಸೈ ಬಸವರಾಜ ಮಬನೂರ, ಪ್ರಭಾರೆ ಪಿಎಸ್ಐ ಕಸ್ತೂರಿ ಕುಕನೂರ ಹಾಗೂ ಸಿಬ್ಬಂದಿ ಬಾಲಕಿಯನ್ನು ಕರೆದುಕೊಂಡು ಹೋದರು.
ಇಲ್ಲಿನ ಸಿಪಿಐ ಪ್ರಭುಗೌಡ ಡಿ.ಕೆ ಬಾಲಕಿಯನ್ನು ಸಮಾಧಾನದಿಂದ ವಿಚಾರಿಸಿದ ನಂತರ ತಾನು ಇಂದೂರ ಗ್ರಾಮದವಳು. ತಂದೆ-ತಾಯಿ ಇರುವ ಬಗ್ಗೆ ಹಾಗೂ ತಾನು ಏಕೆ ಮನೆ ಬಿಟ್ಟು ಬಂದೆ ಎಂಬುದರ ಬಗ್ಗೆ ತಿಳಿಸಿದ್ದಾಳೆ. ತದನಂತರ ಈಕೆಯ ಪೋಷಕರನ್ನು ಕರೆದು ಬಾಲಕಿಗೆ ಮತ್ತು ಪೋಷಕರಿಗೆ ಬುದ್ಧಿವಾದ ಹೇಳಿ ಹೆತ್ತವರ ಜೊತೆ ಕಳುಹಿಸುವ ಮೂಲಕ ಪ್ರಕರಣ ಸುಖ್ಯಾಂತ ಕಂಡಿದೆ.