ರಾಷ್ಟ್ರಮಟ್ಟದ ಇನ್ ಸ್ಪೈರ್ ಪುರಸ್ಕಾರ: ಶಿರಸಿಯ 3 ವಿದ್ಯಾರ್ಥಿಗಳು ಆಯ್ಕೆ
Team Udayavani, Dec 25, 2021, 5:01 PM IST
ಶಿರಸಿ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಂಟಿಯಾಗಿ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನಕ್ಕೆ ಪ್ರೋತ್ಸಾಹ ನೀಡಲು ನಡೆಸುತ್ತಿರುವ ರಾಷ್ಟ್ರಮಟ್ಟದ ಇನಸ್ಪೈರ್ ಪುರಸ್ಕಾರದ 2021-22ರ ಸ್ಪರ್ಧೆಗಳಲ್ಲಿ ನಗರದ ಲಯನ್ಸ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿಯ ವಿದ್ಯಾರ್ಥಿ ಕುಮಾರ್ ಕೃಷ್ಣ ಜಿ. ಭಟ್ ಮತ್ತು 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸುವಿಧಾ ಹೆಗಡೆ ತಾವು ತಯಾರಿಸಿದ ನಾವಿನ್ಯಪೂರ್ಣ ವೈಜ್ಞಾನಿಕ ಮಾದರಿಗಳಿಗೆ ಈ ಪುರಸ್ಕಾರ ಪಡೆದಿದ್ದಾರೆ.
ವಿಜ್ಞಾನ ವಿಭಾಗದ ನವೀನ ಸಂಶೋಧನೆಗಳಿಗೆ ಮೀಸಲಾದ ಈ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೂ ಅವರ ಪಾಲಕರಿಗೂ ಹಾಗೂ ಮಾರ್ಗದರ್ಶಕ ಶಿಕ್ಷಕ ಸಚಿನ್ ಕೊಡಿಯಾ ಹಾಗೂ ಗುರುಪ್ರಸಾದ ನಾಯಕ್ ಇವರಿಗೆ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಬಳಗ, ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಾಲೆಯ ಶಿಕ್ಷಕ ವೃಂದವು ಹಾರ್ದಿಕವಾಗಿ ಅಭಿವಂದಿಸಿ ಶುಭ ಹಾರೈಸಿದೆ.
ಚಂದನ ಆಂಗ್ಲ ಮಾಧ್ಯಮ ಶಾಲೆಯ 9ನೇ ವರ್ಗದ ಸುಪ್ರಿತ್ ಹೆಗಡೆ ಆಯ್ಕೆಯಾಗಿದ್ದಾನೆ. ಆಧುನಿಕ ತಂತ್ರಜ್ಞಾನದ ಯಂತ್ರದ ಮಾದರಿಗೆ ಈ ಪುರಸ್ಕಾರ ಪಡೆದಿದ್ದಾನೆ. ಈತನ ಸಾಧನೆಗೆ ಹಾಗೂ ಮಾರ್ಗದರ್ಶಿ ಶಕ್ಷಕ ದೇವರಾಜ ಬಿ ಇವರಿಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.