ಮಾರುಕಟ್ಟೆಯಲ್ಲಿ ಕಾಣದ ಸಾಮಾಜಿಕ ಅಂತರ
Team Udayavani, May 3, 2021, 9:03 PM IST
ಕಾರವಾರ: ನಗರದಲ್ಲಿ ಬೆಳಗ್ಗೆ 6ರಿಂದ 10ರ ವರೆಗೆ ಹಣ್ಣು-ತರಕಾರಿ ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಣದ ಕಾರಣ ಕೊನೆಗೆ ಪೊಲೀಸರು ಲಘು ಲಾಟಿ ಪ್ರಹಾರ ಮಾಡಿದರು.
ಸಾರ್ವಜನಿಕರು ಮಾಸ್ಕ್ ಧರಿಸಿದ್ದರು. ಆದರೆ ಸಮಾಜಿಕ ಅಂತರ ರವಿವಾರ ಬೆಳಗ್ಗೆ 9ರಿಂದ 10ರ ಸುಮಾರಿಗೆ ಕಾಣಲಿಲ್ಲ. ಸಮಯ ಮೀರುತ್ತಾ ಬಂದ ಕಾರಣ ಜನರು ವ್ಯಾಪಾರಕ್ಕೆ ಮುಗಿ ಬಿದ್ದರು. ಹಣ್ಣು ತರಕಾರಿ ಕೊಳ್ಳುವಲ್ಲಿ ನಿರತರಾದರು. ಕೊನೆಗೆ ನಗರಸಭೆ ಸಿಬ್ಬಂದಿ ಪೊಲೀಸರ ನೆರವು ಪಡೆದು ವ್ಯಾಪಾರ ಬಂದ್ ಮಾಡಿಸಲು ಮುಂದಾದರು.
ಸಮಯ ಮೀರಿದರೂ ವ್ಯಾಪಾರ ಮುಗಿಯದ ಕಾರಣ ಪೊಲೀಸರು ಲಘು ಲಾಟಿ ಪ್ರಹಾರಕ್ಕೆ ಮುಂದಾದರು. ಯುವಕರಿಗೆ ಲಘುವಾಗಿ ಲಾಟಿ ಬೀಸಿದರು. ಆಗ ಮಾರುಕಟ್ಟೆಯಲ್ಲಿ ಜನ ಕರಗುತ್ತಾ ಬಂದರು.
ಮಾಸ್ಕ್ ಧರಿಸಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ತರಕಾರಿ, ಹಣ್ಣು ವ್ಯಾಪಾರ ಪೂರ್ಣವಾಗಿಲ್ಲ ಎಂದು ಕೊರಗಿದರು. ಸಾರ್ವಜನಿಕರು ಅಲ್ಪಸ್ವಲ್ಪ ತರಕಾರಿ, ಹಣ್ಣು ಹೂ ಖರೀದಿಸಿ ಮನೆಗಳತ್ತ ಧಾವಿಸಿದರು.
ನಗರಸಭೆ ಘೋಷಣೆ: ಇನ್ನು ಮುಂದೆ ಬೆಳಗ್ಗೆ 6ರಿಂದ 10ರವರೆಗೆ ರಸ್ತೆ ಬದಿ ಕುಳಿತು ಹೂ, ಹಣ್ಣು, ಮೀನು ಮಾರಾಟಕ್ಕೆ ಮೇ 3ರಿಂದ ಬ್ರೇಕ್ ಹಾಕಿದೆ. ಹಣ್ಣು, ಹೂ ಹಾಗೂ ಮೀನು ಮಾರಾಟವನ್ನು ಮನೆ ಮನೆಗೆ ತೆರಳಿ ಅಥವಾ ತಳ್ಳುಗಾಡಿಯಲ್ಲಿಟ್ಟು ಬೆಳಗ್ಗೆ 6ರಿಂದ ಸಂಜೆ 6ರ ತನಕ ಮಾಡಬಹುದಾಗಿದೆ. ತರಕಾರಿ ಮತ್ತು ದಿನಸಿ ಅಂಗಡಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ತನಕ ತೆಗೆಯಬಹುದು ಎಂದು ಮೈಕ್ನಲ್ಲಿ ಘೋಷಣೆ ಮಾಡಲಾಯಿತು.
ನಗರಸಭೆಯಿಂದ ನೆರವು: ನಗರದ ಪಿಂಗೆ ರಸ್ತೆಯ ಮನೆಯೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದ ಅಜಯ್ ಶಿಂಧೆ ಎಂಬುವವರು ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ನಗರಸಭೆ ಅಧಿಕಾರಿಗಳನ್ನು ತಲುಪಿತು. ತಕ್ಷಣ ನಗರಸಭೆ ಪೌರಾಯುಕ್ತರು ಅಂಬುಲೆನ್ಸ್ ವ್ಯವಸ್ಥೆ ಮಾಡಿ ಅಜಯ್ ಅವರನ್ನು ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿ ದಾಖಲಿಸಿದರು.
ಈ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು. ಇಲ್ಲಿನ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೊರೊನಾ ರೋಗಿಗಳ ಸೇವೆಗೆ ಬಳಸಿಕೊಳ್ಳಲು ರವಿವಾರ ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಕಾಡುತ್ತಿದ್ದ ನಸ್ ìಗಳ ಸೇವೆಯ ಜಾಗವನ್ನು ಎಂಬಿಬಿಎಸ್ ಮುಗಿಸುತ್ತಿರುವ ವಿದ್ಯಾರ್ಥಿಗಳು ತುಂಬಿದಂತಾಗಿದೆ.