ಜೆಡಿಎಸ್-ಬಿಜೆಪಿಯಿಂದ ರ್ಯಾಲಿ-ಶಕ್ತಿ ಪ್ರದರ್ಶನ
Team Udayavani, Apr 22, 2019, 4:21 PM IST
ಕಾರವಾರ: ಕೆನರಾ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ರವಿವಾರ ಕಾರವಾರದ ರಾಜಕಾರಣದಲ್ಲಿ ಕೆಲ ದಿಢೀರ್ ಬೆಳವಣಿಗೆಗಳು ನಡೆದವು. ಎರಡೂ ಪಕ್ಷಗಳು ಬಹಿರಂಗ ರ್ಯಾಲಿ ನಡೆಸಿದವು. ಬೆಳಗ್ಗೆ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಜೆಡಿಎಸ್ ಕಾರ್ಯಕರ್ತರ ಜೊತೆ ನಗರದಲ್ಲಿ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.
ಎಬಿವಿಪಿಯ ಕೆಲ ವಿದ್ಯಾರ್ಥಿಗಳನ್ನು ಜೆಡಿಎಸ್ಗೆ ಸೇರ್ಪಡೆ ಮಾಡಿಕೊಂಡರು. ಅಲ್ಲದೇ ನಗರದ ಮುಖ್ಯ ರಸ್ತೆಯಲ್ಲಿ ಜೆಡಿಎಸ್ ಮೆರವಣಿಗೆ ಮಾಡಿತು. ರ್ಯಾಲಿಯಲ್ಲಿ ಜೆಡಿಎಸ್ ಧ್ವಜಗಳ ಧ್ವಜದ ಜೊತೆ ಕೇಸರಿ ಧ್ವಜವೂ ಇದ್ದದ್ದು ಕಂಡು ಬಂತು. ಜೆಡಿಎಸ್ ಅಭ್ಯರ್ಥಿ ಕಾರವಾರದಲ್ಲಿ ರ್ಯಾಲಿ ಮಾಡಿ, ಅಂಕೋಲಾದಲ್ಲಿ ಸಹ ರ್ಯಾಲಿ ಮಾಡಿದರು. ನಂತರ ಭಟ್ಕಳಕ್ಕೆ ತೆರಳಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೇರಿಕೊಂಡರು. ಅಲ್ಲಿ ಸಹ ಜೆಡಿಎಸ್ ಕೊನೆಯ ಬಹಿರಂಗ ಪ್ರಚಾರ ಸಭೆ ಮಾಡಿತು. ಪ್ರಚಾರದ ಕೊನೆಯ ದಿನ ಇನ್ನಿಲ್ಲದ ಪ್ರಯತ್ನ ಮಾಡಿ ಜನರನ್ನು ತಲುಪಲು ಯತ್ನಿಸಿತು.
ಸಂಜೆ ಬಿಜೆಪಿ ರ್ಯಾಲಿ-ಎನ್ಎಸ್ಯುಐ ಜಂಪಿಂಗ್: ಸಂಜೆ ಹೊತ್ತಿಗೆ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ರ್ಯಾಲಿ ಮಾಡಿ ಶಕ್ತಿ ಪ್ರದರ್ಶನ ಮಾಡಿದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿ, ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಬಿಜೆಪಿಗೆ ಜಯಘೋಷ ಹಾಕಿದರು. ಶಾಸಕಿ ಅತ್ಯಂತ ಉತ್ಸಾಹದಿಂದ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಅಲ್ಲದೇ ಎನ್ಎಸ್ಯುಐ ಸಂಚಾಲಕ ಸಿದ್ಧಾರ್ಥ ನಾಯ್ಕನನ್ನು ಬಿಜೆಪಿಗೆ ಬರಮಾಡಿಕೊಂಡರು. ಅಷ್ಟೇ ಅಲ್ಲದೇ ನಗರಸಭೆಯ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮೀನಾಕ್ಷಿ ಕೋಲ್ವೇಕರ್ ಹಾಗೂ ಸುಜಾತಾ ಥಾಮ್ಸೆ ಬಿಜೆಪಿಗೆ ಸೇರ್ಪಡೆಯಾದರು. ಇದರಿಂದ ಬಿಜೆಪಿ ಶಕ್ತಿ ಮತ್ತಷ್ಟು ಹೆಚ್ಚಿತು ಎಂದು ಬಿಜೆಪಿ ಕಾರ್ಯಕರ್ತರು ಮಾತನಾಡಿಕೊಂಡರು.
ಜೊತೆಗೆ ಕಾರವಾರ ರ್ಯಾಲಿಯಲ್ಲಿ ಭಾರೀ ಪ್ರಮಾಣದ ಜನರನ್ನು ಸೇರಿಸಿ ತನ್ನ ಶಕ್ತಿಯನ್ನು ತೋರಿಸಿತು. ಜಿಲ್ಲೆಯ ನಗರ, ಪಟ್ಟಣಗಳಲ್ಲಿ ನಿನ್ನೆ ಸಹ ರ್ಯಾಲಿ, ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸಲಾಯಿತು. ಅಂತೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಭಾರೀ ಪೈಪೋಟಿ ಇದ್ದು, ಕಾಂಗ್ರೆಸ್ ಹಾಗೂ ಹೀಗೂ ಜೆಡಿಎಸ್ ಅಭ್ಯರ್ಥಿ ಜೊತೆ ಕೈಜೋಡಿಸಿದೆ.