ಶಿರಸಿ: ಪೂರ್ಣಗೊಂಡ ಶ್ರೀ ರಾಮೇಶ್ವರ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ
Team Udayavani, Dec 20, 2021, 4:37 PM IST
ಶಿರಸಿ: ತಾಲೂಕಿನ ಬೆಂಗಳಿಯ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ ಸಕಲರ ಸಹಕಾರದಲ್ಲಿ ಪೂರ್ಣಗೊಂಡಿದೆ.
ಕದಂಬರ ಆಳ್ವಿಕೆಗೊಳಪಟ್ಟಿದ್ದ ಈ ಪ್ರದೇಶದಲ್ಲಿ ಯಾವುದೋ ಕಾಲದಲ್ಲಿ ಆಗಮ ರೀತ್ಯಾ ನಿರ್ಮಿಸಿದ್ದ ಶ್ರೀ ರಾಮೇಶ್ವರ ದೇವಸ್ಥಾನ ಊರ ಹೊರಗಿತ್ತು. ಐವತ್ತು ವರ್ಷಗಳ ಹಿಂದೆ ಊರವರು ಊರ ನಡುವೆ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಿದ್ದರು. ಹೊಸದಾಗಿ ಲಿಂಗ ಮತ್ತು ಪಾಣಿಪೀಠ ನಿರ್ಮಿಸಲಾಗಿತ್ತು. ಕಟ್ಟಡ ಜೀರ್ಣಗೊಂಡಿದ್ದಕ್ಕೆ ಹೊಸದಾಗಿ ಶಾಸ್ತ್ರ ರೀತ್ಯಾ ನಿರ್ಮಾಣ ಮಾಡಿ ಸಣ್ಣಪುಟ್ಟ ಧಾರ್ಮಿಕ ಕಾರ್ಯಕ್ರಮಗಳಿಗೂ ಅನುಕೂಲವಾಗುವಂತೆ ಪಡಸಾಲೆ ವಿಸ್ತರಿಸಲಾಗಿದೆ. ಗೋಪುರಕ್ಕೆ ಕಲಶ ಸ್ಥಾಪನೆ ಮಾಡಲಾಗಿದೆ. ಊರವರ, ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ಕೆಲಸ ಸಾಂಗವಾಗಿದೆ.
ವಾಸ್ತುಹೋಮ, ರಾಕ್ಷೋಘ್ನ ಹವನ, ಅಷ್ಟಾವಧಾನ ಸೇವೆ, ಶಿಖರಪ್ರತಿಷ್ಠೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಡಿಸೆಂಬರ್ 21 ಮತ್ತು22 ರಂದು ನಡೆಯುತ್ತವೆ. 22 ರಂದು ಮಧ್ಯಾಹ್ನ 4ಕ್ಕೆ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಪಾದಪೂಜೆ ಮತ್ತು ಆಶೀರ್ವಚನ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಮೊಕ್ತೇಸರ ಲಕ್ಷ್ಮೀಶ ಹೆಗಡೆ ತಿಳಿಸಿದ್ದಾರೆ.