ಶಿರಸಿ ಐದು ರಸ್ತೆ ಅಗಲೀಕರಣ; ಫೆ.15 ರೊಳಗೆ ಪೂರ್ಣದ ವಿಶ್ವಾಸ
Team Udayavani, Jan 9, 2022, 3:09 PM IST
ಶಿರಸಿ: ನಗರದ ಹೃದಯ ಭಾಗವಾದ ಐದು ರಸ್ತೆ ಅಗಲೀಕರಣ ಕಾಮಗಾರಿಗೆ ವೇಗ ಸಿಕ್ಕಿದ್ದು, ಫೆಬ್ರುವರಿ 15 ರೊಳಗೆ ಪೂರ್ಣವಾಗುವ ನಿರೀಕ್ಷೆ ಇದೆ.
ಈಗಾಗಲೇ ಯಲ್ಲಾಪುರ ನಾಕಾದಿಂದ ಐದು ರಸ್ತೆ ತನಕದ ಸುಮಾರು 4.4 ಕಿಮಿ ರಸ್ತೆಯ ಅಗಲೀಕರಣಕ್ಕೆ ತೆರವಿನ ಕಾರ್ಯ ಕೂಡ ಬಹುತೇಕ ಪೂರ್ಣಹೊಂಡು ಎರಡು ಹಂತದಲ್ಲೂ ಕಾಮಗಾರಿ ನಡೆಯುತ್ತಿದೆ. ಐದು ರಸ್ತೆ ಅಗಲೀಕರಣ, ವೃತ್ತ ವಿಸ್ತಾರ ಕಾರ್ಯವನ್ಬು ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾರ್ಗದರ್ಶನದಲ್ಲಿ ಲೊಕೋಪಯೋಗಿ ಇಲಾಖೆ ಕಾಮಗಾರಿ ನಡೆಸುತ್ತಿದೆ. ಸ್ವತಃ ಜಾಗದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್.ಉಮೇಶ ಸಹದ್ಯೋಗಿಗಳ ಜೊತೆ ನಿಂತು ಕಾಮಗಾರಿ ನಡೆಸುತ್ತಿದ್ದಾರೆ.
ಈ ಮಧ್ಯೆ ದಕ್ಷಿಣ ಭಾರತದ ದೊಡ್ಡ ಜಾತ್ರೆ ಮಾರಿಕಾಂಬಾ ದೇವಿ ಮಹೋತ್ಸವ ಮಾರ್ಚ್ 15 ರಿಂದ 23ರ ತನಕ ನಡೆಯಲಿದೆ. ಈ ಐದು ರಸ್ತರ ಮಾರ್ಗ ಕರಾವಳಿಗೂ, ಮಲೆನಾಡಿಗೂ, ಉತ್ತರ ಕರ್ನಾಟಕಕ್ಕೂ ಜೋಡಿಸುವ ವೃತ್ತ. ಜಾತ್ರೆಗೆ ಲಕ್ಷಾಂತರ ಜನರು ಬರುವ ಕಾರಣ ವಾಹನ ದಟ್ಟನೆ ಕೂಡ ಏರಿ ಕಿಲೋಮೀಟರ್ ತನಕ ಕ್ಯೂ ಇರುತ್ತಿತ್ತು. ಟ್ರಾಫಿಕ್ ಜಾಂ ಕೂಡ ಆಗುತ್ತಿತ್ತು. ಇದನ್ನು ತಪ್ಪಿಸಲು ಶಿರಸಿ ಐದು ರಸ್ತೆಯಿಂದ ಅಗಲೀಕರಣ ಮಾಡಲಾಗುತ್ತಿದೆ. ವೃತ್ತ ಕೂಡ ದೊಡ್ಡದಾಗುತ್ತಿದೆ. ಈ ವೃತ ಹಾಗೂ ಅಗಲೀಕರಣವನ್ನು ಶೀಘ್ರ ಪೂರ್ಣ ಗೊಳಿಸುವಂತೆ ಸ್ಪೀಕರ್ ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಅಧಿಕಾರಿ ಉಮೇಶ ಅವರು ಕಂದಾಯ, ಪೊಲೀಸ್, ನಗರಸಭೆ ಹಾಗೂ ಇತರ ಇಲಾಖೆಗಳ ನೆರವು ಪಡೆದು ಕೆಲಸ ಮಾಡುತ್ತಿದ್ದಾರೆ.
ಐದು ರಸ್ತೆ 23 ಅಡಿ ಅಗಲ, 550 ಮೀಟರ್ ಉದ್ದ, ಹಾಸ್ಪಿಟಲ ಭಾಗದಿಂದ ಡೆವಲಪ್ಮೆಂಟ್ ಪೆಟ್ರೋಲ್ ಬಂಕ್ ತನಕ, ಅಲ್ಲಿಂದ ಮಹಾಸತಿ ಹಾಗೂ ಯಲ್ಲಾಪುರನಾಕಾ ತನಕ ಅಭಿವೃದ್ದಿ ಆಗಬೇಕಿದೆ.ಒಟ್ಟೂ ಸುಮಾರು 32 ಕೋ.ರೂ.ಬೇಕಾಗಿದೆ. ವಿದ್ಯುತ್ ಕಂಬ ಬದಲಾಯಿಸೋದು, ಕೇಬಲ್ ಸರಿಮಾಡಿಸೋದು, ನೀರಿನ ಪೈಪ್ ಜೋಡಿಸೋದು ಕೆಲಸಗಳೂ ಜೊತೆಯಾಗಿವೆ! ಅಷ್ಟು ಮೇಲೆಮೇಲೆ ಇರೋದೇ ಸಮಸ್ಯೆಗಳಿಗೆ ಕಾರಣವಾಗಿದೆ.
ಈ ಕಾಮಗಾರಿ ವೇಗಗೊಳಿಸಲು ನಿತ್ಯ ೨೦೦ಕ್ಕೂ ಅಧಿಕ ಶ್ರಮಿಕರು ಕಾರ್ಯ ಮಾಡುತ್ತಿದ್ದಾರೆ. ಮೂವರು ಗುತ್ತಿಗೆದಾರರು ಟೆಂಡರ್ ಪಡೆದಿದ್ದಾರೆ. ಒಟ್ಟೂ 50 ವಾಹನಗಳು ಕೆಲಸ ಮಾಡುತ್ತಿವೆ.
ಈ ಮಧ್ಯೆ ಶಿರಸಿಯ ಡಿವೈಎಸ್ಪಿ ರವಿ ನಾಯಕ, ಸಿಪಿಐ ರಾಮಚಂದ್ರ ನಾಯಕ ಸ್ಥಳ ಭೇಟಿ ಮಾಡಿದ್ದಾರೆ. ಆಸ್ಪತ್ರೆ ಏರಿನಲ್ಲಿ 2 ಅಡಿ ಎತ್ತರ ತಗ್ಗಿದೆ. ಒಂದು ಭಾಗದ ಕಾಮಗಾರಿ ಪೂರ್ಣ ಆಗುತ್ತಿದೆ. ಇನ್ನೊಂದು ಪಕ್ಕದ ರಸ್ತೆಯನ್ನೂ ಹೊಸ ರಸ್ತೆಯ ತಗ್ಗಿಗೆ ರವಿವಾರ ರಾತ್ರಿ ತೆಗೆಸುತ್ತಾರೆ. ಫೆ. 15ರೊಳಗೆ ಐದು ರಸ್ತೆ ಅಗಲೀಕರಣ ಮುಗಿಸುವ ಪಣ ಇಲಾಖೆ ಹೊತ್ತಿದೆ. ಗುಣಮಟ್ಟದ ಕಾಮಗಾರಿ ಆಗಲಿ, ವೈಜ್ಞಾನಿಕ ತಳಹದಿ ಇರಲಿ ಎಂಬುದು ನಾಗರೀಕರ ಆಶಯವಾಗಿದೆ.