ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಹಾಸ್ಯಗಾರ ವಿಧಿವಶ
Team Udayavani, Jun 22, 2020, 7:11 PM IST
ಹೊನ್ನಾವರ: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಿದ್ಧ ಕರ್ಕಿ ಪರಂಪರೆಯ ಹಿರಿಯ ಕೊಂಡಿ ನಾರಾಯಣ ಹಾಸ್ಯಗಾರ, ಕರ್ಕಿ (89) ಅವರು ಇಂದು ನಿಧನ ಹೊಂದಿದ್ದಾರೆ.
ನಾಣಿ ಹಾಸ್ಯಗಾರರೆಂದೇ ಯಕ್ಷ ವಲಯದಲ್ಲಿ ಪರಿಚಿತರಾಗಿದ್ದ ರಂಗಸ್ಥಳದ ಮೇಲೆ ಕೃಷ್ಣನ ಪಾತ್ರಕ್ಕೆ ಪರಮಾದ್ಭುತವಾಗಿ ಜೀವ ತುಂಬುತ್ತಿದ್ದ ನಾರಾಯಣ ಹಾಸ್ಯಗಾರ ಅವರು ತಮ್ಮದೇ ವಿಶಿಷ್ಟ ಶೈಲಿಯ ಪಾತ್ರ ನಿರ್ವಹಣೆಯಿಂದ ಮನೆಮಾತಾಗಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗೀಣ ಸೇವೆ ಸಲ್ಲಿಸಿದ್ದ ನಾರಾಯಣ ಹಾಸ್ಯಗಾರರು ‘ಕರ್ಕಿ ಹಾಸ್ಯಗಾರ ಮೇಳ’ದ ಪ್ರಸಿದ್ಧ ಕಲಾವಿದರಾಗಿದ್ದರು.
ಇವರು ಶೃಂಗಾರ ಹಾಗೂ ಲಾಲಿತ್ಯ ಪಾತ್ರ ನಿರ್ವಹಣೆಯಲ್ಲಿ ಯಕ್ಷಾಭಿಮಾನಿಗಳ ಮನಸ್ಸನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದ್ದ ಕಲಾವಿದರಲ್ಲಿ ಒಬ್ಬರಾಗಿದ್ದರು. ಕಲಾತ್ಮಕ ಕುಣಿತ, ಸೊಗಸಾದ ಅಭಿನಯ ಸಹಿತವಾಗಿದ್ದ ಹಾಸ್ಯಗಾರರ ಯಕ್ಷ ಪ್ರತಿಭೆ ಯಕ್ಷಗಾನ ವಲಯದಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿತ್ತು.
1931 ಫೆಬ್ರವರಿ 2ರಂದು ಜನಿಸಿದ್ದ ನಾರಾಯಣ ಹಾಸ್ಯಗಾರ ಅವರು ಎಳವೆಯಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಅವರ ಮನೆಯಲ್ಲೇ ಯಕ್ಷಗಾನದ ವಾತಾರವಣ ಇದ್ದುದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.
ಆ ಕಾಲದಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣವನ್ನು ಪಡೆದುಕೊಂಡಿದ್ದ ನಾರಾಯಣ ಹಾಸ್ಯಗಾರರು ಒಂದು ವರ್ಷಗಳ ಕಾಲ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಬಳಿಕ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಶಿವರಾಮ ಕಾರಂತರಲ್ಲಿ ಎರಡು ವರ್ಷ ಹಾಗೂ ಕುಷ್ಟ ಗಾಣಿಗರ ಬಳಿಯಲ್ಲಿ ಎರಡು ವರ್ಷ ಬಡಗುತಿಟ್ಟಿನ ಯಕ್ಷಗಾನ ಅಭ್ಯಾಸವನ್ನು ನಡೆಸಿದರು.
ಬಳಿಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿದ್ದ ತಮ್ಮದೇ ಆದ ಕರ್ಕಿ ಹಾಸ್ಯಗಾರರ ಮೇಳದಲ್ಲಿ ತಂದೆ ಪರಮಯ್ಯ ಹಾಸ್ಯಗಾರ ಹಾಗೂ ಸಹೋದರರು ಮತ್ತು ಅಣ್ಣನ ಮಗನಾದ ಪಿ.ವಿ. ಹಾಸ್ಯಗಾರ ಜೊತೆ ಸೇರಿ ಸುಪ್ರಸಿದ್ಧ ಕಲಾವಿದರಾಗಿ ಹೊರಹೊಮ್ಮಿದರು.
ಬಭ್ರುವಾಹನ, ಅಭಿಮನ್ಯ, ಅರ್ಜುನ, ಸುಧನ್ವ, ಕೀಚಕ. ಶಿವ, ರಾಮ, ಕೃಷ್ಣ, ಲಕ್ಷ್ಮಣ, ವಾಲಿ, ಶಲ್ಯ, ಶಬರ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆ ಅದ್ಭುತವಾಗಿತ್ತು. ಅಪರೂಪದ ಸನ್ನಿವೇಶಗಳಲ್ಲಿ ನಾರಾಯಣ ಹಾಸ್ಯಗಾರರು ಸ್ತ್ರೀ ಪಾತ್ರಗಳನ್ನು ಹಾಗೂ ಬಣ್ಣದ ವೇಷಗಳನ್ನು ಮಾಡಿರುವ ಉದಾಹರಣೆಯೂ ಇದೆ.
ಆದರೆ, ರಂಗದಲ್ಲಿ ನಾರಾಯಣ ಹಾಸ್ಯಗಾರರನ್ನು ಕಲಾವಿದನನ್ನಾಗಿ ಮೆರೆಯಿಸಿದ ಪಾತ್ರವೆಂದರೆ ಅದು ಕೃಷ್ಣನ ಪಾತ್ರ. ಕೃಷ್ಣಾರ್ಜುನ, ಚಂದ್ರಾವಳಿ ವಿಳಾಸ, ಸ್ಯಮಂತಕ ರತ್ನ, ಶ್ರೀ ಕೃಷ್ಣ ಪಾರಿಜಾತ ಮುಂತಾದ ಪ್ರಸಂಗಗಳಲ್ಲಿ ಕೃಷ್ಣನ ಪಾತ್ರಕ್ಕೆ ನಾಣಿ ಹಾಸ್ಯಗಾರರು ಅದ್ಭುತವಾಗ ಜೀವ ತುಂಬುತ್ತಿದ್ದರು ಎಂಬುದನ್ನು ಹಳೆಯ ತಲೆಮಾರಿನ ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ