ದಾಖಲೆ ಇಲ್ಲದೇ ಮಾತನಾಡುವುದಿಲ್ಲ: ಮಾಧವ ನಾಯ್ಕ
Team Udayavani, Jul 11, 2021, 9:59 PM IST
ಕಾರವಾರ: ತಾಲೂಕಿನ ಲೋಕೋಪಯೋಗಿ ಕಾಮಗಾರಿಗಳಲ್ಲಿ ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಶಾಸಕಿ ಪ್ಯಾಕೇಜ್ ಪದ್ಧತಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ. ಇದು ಸ್ಥಳೀಯ ಗುತ್ತಿಗೆದಾರರಿಗೆ ಮಾಡುವ ಅನ್ಯಾಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಜೂ.15 ರಂದು ಶಾಸಕಿ ರೂಪಾಲಿ ನಾಯ್ಕ ಲೋಕೋಪಯೋಗಿ ಇಲಾಖೆಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದ ಅವರು, ಕಾರವಾರದಲ್ಲಿ ಸರ್ಕ್ನೂಟ್ ಹೌಸ್ ನಿರ್ಮಾಣ, ಮಾಲಾದೇವಿ ಮೈದಾನದಲ್ಲಿ ಸ್ಟೇಡಿಯಂ ಸುಧಾರಣೆ ಹಾಗೂ ಕಾರವಾರದಲ್ಲಿ ಲೋಕೋಪಯೋಗಿ ಇಲಾಖೆ ವಿಭಾಗದ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣದ ಒಟ್ಟು 18.80 ಕೋಟಿ ರೂ. ಕಾಮಗಾರಿಗಳನ್ನು ಒಂದೇ ಪ್ಯಾಕೇಜ್ನಲ್ಲಿ ಕರೆಯುವಂತೆ ಪತ್ರ ಬರೆದಿದ್ದಾರೆ. ಇದಕ್ಕೆ ಸಾರ್ವಜನಿಕ ಹಿತಾಸಕ್ತಿ ಕಾರಣ ನೀಡಿದ್ದಾರೆ. ಹತ್ತಿರ ಹತ್ತಿರ 19 ಕೋಟಿ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡಿದರೆ ಯಾವ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯಾಗುತ್ತದೆ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ಪರ್ಸಂಟೇಜ್ ವ್ಯವಹಾರ ಬಿಟ್ಟು ಬೇರೇನೂ ಇಲ್ಲ. ಈ ಮೂರು ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಪ್ರತ್ಯೇಕ ಟೆಂಡರ್ ಕರೆಯಲು ಅನುಮತಿ ಪಡೆದು, ಕಾರ್ಯಕ್ಕೆ ಚಾಲನೆ ನೀಡಿತ್ತು. ಇದಕ್ಕೆ ಎಂಜಿನಿಯರಿಂಗ್ ಸರ್ಕಲ್ ಅವರು ಅನುಮತಿ ಸಹ ನೀಡಿದ್ದರು. ಇದರಿಂದ ಮೂವರು ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿತ್ತು. ಈಗ 19 ಕೋಟಿ ರೂ. ಕಾಮಗಾರಿಯನ್ನು ಒಂದೇ ಪ್ಯಾಕೇಜ್ನಲ್ಲಿ ಕರೆಯುವಂತೆ ಶಾಸಕಿ ರೂಪಾಲಿ ನಾಯ್ಕ ಪತ್ರ ಬರೆದಿದ್ದಾರೆ.
ಎಂಜಿನಿಯರ್ಗಳ ಮೇಲೆ ಒತ್ತಡ ಹೇರಿದ್ದಾರೆ. ಸರ್ಕಾರದ ಮಟ್ಟದಲ್ಲಿ ಒತ್ತಡ ತರಲು ಯತ್ನಿಸಿದ್ದಾರೆ. ಇದರಲ್ಲಿ ಯಾರ ಹಿತಾಸಕ್ತಿ ಅಡಗಿದೆ ಎಂದು ಸಾರ್ವಜನಿಕರು ನಿರ್ಧರಿಸಲಿ ಎಂದರು. ಯಾವುದೇ ದಾಖಲೆಗಳಿಲ್ಲದೆ ನಾನು ಮಾತನಾಡಲ್ಲ. ನನ್ನ ಕುರಿತು ಆರೋಪ ಮಾಡಿದವರ ಮೇಲೆ, ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಮಾಧವ ನಾಯ್ಕ ಎಚ್ಚರಿಸಿದರು. ಜನರ ಕೆಲಸವನ್ನು ಶಾಸಕರು ಮಾಡಬೇಕು. ಜನರ ಹಿತ ಕಾಯಬೇಕು. ಸ್ವ ಹಿತವನಲ್ಲ. ಶಾಸಕರ ಹಿಂಬಾಲಕರು ಕಾನೂನು ಬಾಹಿರವಾಗಿ ಏನೇನು ಮಾಡುತ್ತಿದ್ದಾರೆಂದು ಹೊರಗೆ ಎಳೆಯುವೆ. ಈ ಕಾಲದಲ್ಲಿ ಏನಾದರೂ ಮಾಡಿ ದಕ್ಕಿಸಿಕೊಳ್ಳುವೆ ಎಂದು ಯಾರೂ ಭಾವಿಸುವುದು ಬೇಡ ಎಂದು ಮಾಧವ ನಾಯ್ಕ ಹೇಳಿದರು.
ಸ್ಥಳೀಯ ಗುತ್ತಿಗೆದಾರರ ಹಿತ ಕಾಯಲು ಸಂಘ ಹೋರಾಡಲಿದೆ. ಪ್ಯಾಕೇಜ್ ಪದ್ಧತಿ ವಿರುದ್ಧ ಸಣ್ಣ ಸಣ್ಣ, ಮಧ್ಯಮ ಗುತ್ತಿಗೆದಾರರ ಹೋರಾಟ ಮುಂದುವರಿಯಲಿದೆ ಎಂದರು. ಉದಯ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.