ಸ್ಪೀಕರ್ ಕಾಗೇರಿ ಹೇಳಿದ ತಟ್ಟಿಕೈ ಲಿಂಬು ಸೆಟ್ ಸ್ವಾದ ಕಥೆ!
Team Udayavani, Sep 7, 2022, 9:36 PM IST
ಶಿರಸಿ: ಮೂರು ವರ್ಷಗಳ ಹಿಂದೆ ಸಿದ್ದಾಪುರದ ತಟ್ಟಿಕೈನ ಲಿಂಬು ಸೆಟ್ ಒಯ್ದಿದ್ದೆ. ತಿಂದರೆ ಸ್ವಾದ. ಆರೋಗ್ಯಕ್ಕೂ ಹಿತಕರ. ಪಕ್ಕಾ ಲೋಕಲ್ ಮೇಡ್. ವಿಧಾನ ಸೌಧದಲ್ಲೂ ಅದು ಜನಪ್ರಿಯ ಹೀಗೆಂದು ಹೇಳಿದವರು ಇನ್ಯಾರೂ ಅಲ್ಲ, ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
ಸ್ವರ್ಣವಲ್ಲೀ ಮಠದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಗ್ರಾಮಾಭ್ಯುದಯದ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಬುಧವಾರ ಪಾಲ್ಗೊಂಡ ಸ್ಪೀಕರ್ ಸ್ವದೇಶಿ ಉತ್ಪನ್ನ, ಅವಕಾಶ, ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಕನಸು ಎಲ್ಲ ಪ್ರಸ್ತಾಪಿಸಿ ಲೋಕಲ್ ತಿಂಡಿ ಜನಪ್ರಿಯತೆಯನ್ನು ಕೂಡ ಪ್ರಸ್ತಾಪಿಸಿದರು.
ಸ್ವ ಸಹಾಯ ಸಂಘಗಳ ಉತ್ಪನ್ನಕ್ಕೆ ಯಾವ ಮಟ್ಟದ ಬೇಡಿಕೆ ಇದೆ ಎಂಬುದನ್ನು ನಾನೇ ಕಂಡಿದ್ದೇನೆ. ಯಾವಾಗಲೋ ಹಳ್ಳಿಕಡೆ ಹೋದಾಗ ಸ್ಥಳೀಯ ಸಂಘಗಳು ಸಿದ್ದಪಡಿಸಿದ್ದ ಲಿಂಬು ಮೌತ್ ಪ್ರೆಶ್ನರ್ ಖರೀದಿಸಿದ್ದೆ. ವಿಧಾನ ಸೌಧದ ಆವರಣದಲ್ಲಿ ನಾನು ಲಿಂಬು ಫ್ರೆಶ್ನರ್ ತಿಂದಿದ್ದು ನೋಡಿ ಉಳಿದ ಶಾಸಕರು, ಸಚಿವರೂ ನನ್ನಿಂದ ಪಡೆದು ತಿಂದಿದ್ದರು. ಆ ಬಳಿಕ ಎಲ್ಲರೂ ನನ್ನಲ್ಲಿ ಲಿಂಬು ಪ್ರೆಶ್ನರ್ ಕೇಳಲಾರಂಭಿಸಿದ್ದಾರೆ. ಸಿಎಂ ಕೂಡ ರುಚಿ ನೋಡಿದ್ದಾರೆ. ಅದಾದ ಬಳಿಕ ಕೆಜಿ ಯಷ್ಟು ಇಟ್ಟುಕೊಳ್ಳುತ್ತೇನೆ ಎಂದರು.
ತೊಡದೇವು, ಹರಿಗಡಲೆ, ಚಿಪ್ಸ, ಹಪ್ಪಳ ಸೇರಿದಂತೆ ಅನೇಕ ವಸ್ತುಗಳಿಗೆ ಬೇಡಿಕೆ ಇವೆ. ಮಕ್ಕಳಿಗೆ ಲೇಸು ಕುರಕುರಿ ಬದಲಿಗೆ ಇದನ್ನು ತಿನ್ನಿಸುವದು ಕಲಿಸಬೇಕು ಎಂದೂ ಮನವಿ ಮಾಡಿದರು. ಈ ವೇಳೆ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಇತರರು ಇದ್ದರು.