ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
Team Udayavani, Apr 17, 2019, 3:24 PM IST
ಭಟ್ಕಳ: ಏ.23ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅಂಗವಾಗಿ 11 ತಾಲೂಕುಗಳ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ನಗರದ ಆನಂದ ಆಶ್ರಮ ಕಾನ್ವೆಂಟ್ ಶಾಲಾ ಆವರಣದಲ್ಲಿ ನಡೆಯಿತು.
ಮಂಗಳವಾರ ಬೆಳಗ್ಗೆ ಬೇರೆ ಬೇರೆ ಕಡೆಯಿಂದ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿದ್ದು ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗದ ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರ ನೇತೃತ್ವದಲ್ಲಿ, ತಹಶೀಲ್ದಾರ್ ಎನ್.ಬಿ. ಪಾಟೀಲ್, ಸೆಕ್ಟರ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ತರಬೇತಿ ನೀಡಿದರು.
ತರಬೇತಿಯಲ್ಲಿ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಯಲ್ಲಾಪುರ, ಹಳಿಯಾಳ ತಾಲೂಕುಗಳಿಂದ ಒಟ್ಟು 1096 ಪೋಲಿಂಗ್ ಅಧಿಕಾರಿಗಳು ಪಾಲ್ಗೊಂಡಿದ್ದು 274 ತಂಡ ರಚಿಸಿ ಒಂದು ಕೊಠಡಿಯಲ್ಲಿ 4 ಸೆಕ್ಟರ್ ಆಫೀಸರಗಳು ತರಬೇತಿ ನೀಡಿದರು. 1 ಬ್ಲಾಕ್ನಲ್ಲಿ 11 ಕೊಠಡಿಯಂತೆ 32 ಜನ, 2 ಬ್ಲಾಕ್ನಲ್ಲಿ 11 ಕೊಠಡಿಯಂತೆ 52 ಹಾಗೂ 3 ಬ್ಲಾಕ್ನಲ್ಲಿ 3 ಕೊಠಡಿಯಂತೆ 182 ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ತಹಶೀಲ್ದಾರ್ ಎನ್.ಬಿ. ಪಾಟೀಲ್, ಹೊನ್ನಾವರ ತಹಶೀಲ್ದಾರ್ ಮಂಜುಳಾ ಭಜಂತ್ರಿ, ಚುನಾವಣಾ ಶಿರಸ್ತೇದಾರ್ ಸಂತೋಷ ಭಂಡಾರಿ, ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಎಲ್.ಎ. ಭಟ್ಟ ಹೊನ್ನಾವರ ಕಚೇರಿ ಸಿಬ್ಬಂದಿ, ತಾಲೂಕು ಕಚೇರಿ ಸಿಬ್ಬಂದಿ ಭಟ್ಕಳ- ಹೊನ್ನಾವರ ಭೂ ಮಾಪನಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಹಾಗೂ ಅಂಬ್ಯುಲೆನ್ಸ್ ಸೇವೆ ಕಲ್ಪಿಸಲಾಗಿತ್ತು.