ತುಂಬೇಬೀಳು: ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ
Team Udayavani, Dec 25, 2019, 3:18 PM IST
ಹೊನ್ನಾವರ: ಕಳೆದ ಕೆಲವಾರು ವರ್ಷಗಳಿಂದ ಮಂಕಿ ಗ್ರಾಮದ ತುಂಬೆಬೀಳು ಗ್ರಾಮದಲ್ಲಿ ಜನಸಂಚಾರವಿರುವ ಮುಖ್ಯ ರಸ್ತೆ ಮೇಲೆ ಅಡ್ಡ ಹಾದು ಹೋಗುವ ರೇಲ್ವೆ ಹಳಿಗೆ ಒಂದು ಸಣ್ಣ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿಯೇ ಇರುವ ಗ್ರಾಮದ ರಸ್ತೆಗೆ ಅಡ್ಡವಾಗಿ ರೇಲ್ವೆ ಹಳಿ ಹಾದು ಹೋಗಿದೆ. ಈ ರಸ್ತೆಯ ಆಸುಪಾಸು ನಾಲ್ಕು ಹಳ್ಳಿಗಳಿದ್ದು ಸುಮಾರು ಎರಡು ಸಾವಿರ ಜನರ ವಾಸ್ತವ್ಯವಿದೆ. ಗ್ರಾಮಸ್ಥರು ಸಂಚರಿಸುವ ಈ ರಸ್ತೆಗೆ ಅಡ್ಡವಾಗಿ ರೇಲ್ವೇ ಹಳಿ ಇದ್ದರಿಂದ ರೈಲು ಬರುವಾಗೆಲ್ಲ ಸಹಜವಾಗಿಯೇ ಗೇಟ್ ಹಾಕಲಾಗುತ್ತದೆ. ಪದೇ ಪದೇ ರೇಲ್ವೇ ಗೇಟ್ ಹಾಕುವುದರಿಂದ ಪಾದಚಾರಿಗಳಿಗೆ ಸುಮಾರು ಒಂದು ತಾಸು ವ್ಯರ್ಥವಾಗುತ್ತದೆ.
ಇದರಿಂದಾಗಿ ಕಳೆದ 20 ವರ್ಷಗಳಿಂದ ಜನರು ಇದೇ ಬವಣೆ ಅನುಭವಿಸುತ್ತಿದ್ದು ಸಣ್ಣ ಮೇಲ್ಸೇತುವೆಗಾಗಿ ಹಿರಿಯ ಅಧಿಕಾರಿಗಳಿಗೆ ಮಾಡಿಕೊಂಡ ಮನವಿಗಳೆಲ್ಲ ವ್ಯರ್ಥವಾಗಿವೆ. ಕೆಲವಾರು ವರ್ಷಗಳಿಂದ ರೇಲ್ವೆ ಇಲಾಖೆ ಇಲ್ಲಿ ಸಣ್ಣ ಮೇಲ್ಸೇತುವೆ ನಿರ್ಮಿಸಲು ಸರ್ವೇ ಪ್ರಕ್ರಿಯೆ ನಡೆಸಿತ್ತಾದರೂ ಅನಂತರ ಅದು ನನೆಗುದಿಗೆ ಬಿತ್ತು. ಈ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರಾದ ಗಜಾನನ ನಾಯ್ಕ, ನಾಗಮ್ಮ ಸುಬ್ಬಯ್ಯ ನಾಯ್ಕ, ಗಣಪತಿ ನಾಯ್ಕ ಕೋಟಾ, ಕೇಶವ ನಾಯ್ಕ ತುಂಬೆಬೀಳು, ಸುಬ್ರಹ್ಮಣ್ಯ ಜಟ್ಟ ಗೌಡ, ಗುರುರಾಜ ವೆಂಕಟೇಶ ಗೌಡ, ಸತೀಶ ಕೃಷ್ಣ ನಾಯ್ಕ, ದುರ್ಗು ಕುಪ್ಪು ನಾಯ್ಕ, ಭಾಸ್ಕರ ನಾರಾಯಣ ಗೌಡ, ದಿನೇಶ ನಾರಾಯಣ ನಾಯ್ಕ, ಸುಶೀಲ ಕೃಷ್ಣ ಮೊಗೇರ, ವಿದ್ಯಾ ಶಂಕರ ದೇವಾಡಿಗ, ಪದ್ಮಾವತಿ ಮೋಹನ ಜಾಯ್ಕ, ದೇವಕಿ ನಾಯ್ಕ ಮನವಿ ಸಲ್ಲಿಸಿದ್ದಾರೆ.