ವಿವಿಧೆಡೆ ವಾದಿರಾಜ ಸ್ವಾಮಿಗಳ ಆರಾಧನೆ
Team Udayavani, Mar 25, 2019, 6:30 AM IST
ಉಡುಪಿ: ಶ್ರೀ ವಾದಿರಾಜ ಗುರುಸಾರ್ವ ಭೌಮರ (1480-1600) ಆರಾಧನೋತ್ಸವ ಉಡುಪಿ ಶ್ರೀಕೃಷ್ಣ ಮಠದಲ್ಲಿ ಮತ್ತು ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ಶನಿವಾರ ನಡೆಯಿತು.
ಶ್ರೀಕೃಷ್ಣ ಮಠದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾ ಧೀಶತೀರ್ಥ ಶ್ರೀಪಾದರು ಮತ್ತು ಸೋಂದಾ ಕ್ಷೇತ್ರದಲ್ಲಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೇತೃತ್ವ ವಹಿಸಿದ್ದರು. ಉಡುಪಿಯಲ್ಲಿ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಸೋಂದಾವಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಕೃಷ್ಣಮಠದಲ್ಲಿ ವಾದಿರಾಜರ ಭಾವಚಿತ್ರ, ಅವರ ಕೃತಿಗಳ ಮೆರವಣಿಗೆ ನಡೆದ ಬಳಿಕ ರಾಜಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಾದಿರಾಜರ ಆಧ್ಯಾತ್ಮಿಕ ಸಾಧನೆಗಳ ಕೊಡುಗೆಗಳನ್ನು ಸ್ಮರಿಸಲಾಯಿತು. ಸೋಂದಾ ಕ್ಷೇತ್ರದಲ್ಲಿ ವಾದಿರಾಜರ ಪಾದುಕಾಪೂಜೆ ನಡೆ ಯಿತು. ಇದಕ್ಕೂ ಮುನ್ನ ವಾದಿರಾಜರ ಮೂಲ ವೃಂದಾವನಕ್ಕೆ ಶ್ರೀ ಸೋದೆ ಮಠಾಧೀಶರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪಾದುಕೆ, ವಾದಿರಾಜರು ಕೊನೆಯ ಕ್ಷಣದಲ್ಲಿ ಬಿಟ್ಟು ಹೋದ ಕಾವಿಶಾಟಿ, ಅವರಿಗೆ ಅರಸಪ್ಪ ನಾಯಕ ನೀಡಿದ ಛತ್ರಚಾಮರ, ಮುತ್ತಿನ ಕಿರೀಟ, ರತ್ನಗಂಬಳಿ, ಶ್ವೇತಛತ್ರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಬುಧವಾರ ಸೋಂದಾವಲ್ಲಿ ಭೂತರಾಜರ ದಂಡೆಬಲಿ, ಶುಕ್ರವಾರ ಸೋಂದೆಯ ರಮಾ ತ್ರಿವಿಕ್ರಮ ದೇವರ ರಥೋತ್ಸವ ಜರಗಿತು.
ಉದ್ಯಾವರದ ವರಾಹತೀರ್ಥ ಸಂಸ್ಥಾನದಲ್ಲಿ ಪರ್ಯಾಯ ಅರ್ಚಕ ಅನಂತ ಆಚಾರ್ಯರ ನೇತೃತ್ವದಲ್ಲಿ ಮತ್ತು ಸವಣೂರು, ಹಾವನೂರು, ಸಿರಗುಪ್ಪ, ಬಳ್ಳಾರಿ, ಹರಪನಹಳ್ಳಿ, ಬೆಳಗಾವಿ, ಹಳೆಹುಬ್ಬಳ್ಳಿ, ಬೆಂಗಳೂರು ಚಾಮರಾಜಪೇಟೆ, ತಮಿಳುನಾಡಿನ ಶ್ರೀಮುಷ್ಣಂ ಮೊದಲಾದೆಡೆ ಶ್ರೀ ವಾದಿ ರಾಜರ ಮೃತ್ತಿಕಾ ವೃಂದಾವನವಿರುವ ಸ್ಥಳಗಳಲ್ಲಿ ಆರಾಧನೆ ನಡೆಯಿತು.