ವೋಟ್ ಬ್ಯಾಂಕ್ಗೆ ಅಲ್ಪ ಸಂಖ್ಯಾತರ ಬಳಕೆ
ಮುಸ್ಲಿಮರ ಹಾದಿ ತಪ್ಪಿಸುತ್ತಿದ್ದಾರೆ ಕೆಲ ಬುದ್ಧಿವಂತ ನಾಯಕರು: ಆನಂದ್ ಸಿಂಗ್
Team Udayavani, Apr 21, 2022, 3:03 PM IST
ಹೊಸಪೇಟೆ: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಗ್ಧ ಮುಸ್ಲಿಮರನ್ನು ಕೆಲ ಬುದ್ಧಿವಂತ ನಾಯಕರು ಪ್ರಚೋದನೆ ಮಾಡಿ ಹಾದಿ ತಪ್ಪಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಹಂಪಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಎದುರು ಪ್ರವಾಸೋದ್ಯಮ ಇಲಾಖೆಯಿಂದ ತ್ರೀಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಎಎ ಹೋರಾಟ ಹಾಗೂ ಹಿಜಾಬ್ ಪ್ರಕರಣದಲ್ಲೂ ಮುಸ್ಲಿಮರನ್ನು ಹಾದಿ ತಪ್ಪಿಸಲಾಗಿದೆ. ದೇಶದ ಸಂವಿಧಾನದಂತೆ ಎಲ್ಲರೂ ನಡೆದುಕೊಳ್ಳಬೇಕು. ಸಂವಿಧಾನಕ್ಕೆ ಎಲ್ಲರೂ ಗೌರವ ನೀಡಬೇಕು. ಹುಬ್ಬಳ್ಳಿ ಕಲ್ಲು ತೂರಾಟ ಪ್ರಕರಣದಲ್ಲೂ ಕೆಲ ಬುದ್ಧಿವಂತ ನಾಯಕರು ಪ್ರಚೋದನೆ ನೀಡಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣವನ್ನು ಕಾಂಗ್ರೆಸ್ನವರು ಮಾಡಬಾರದು ಎಂದರು.
ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರ ಅಭಿವೃದ್ಧಿ ಕಾರ್ಯಕ್ಕೆ ವಿರೋಧ ಪಕ್ಷಗಳು ಹೆದರಿವೆ. ಅಲ್ಪಸಂಖ್ಯಾತರ ಮತಬ್ಯಾಂಕ್ ತಪ್ಪಲಿದೆ ಎಂದು ವೋಟ್ ಬ್ಯಾಂಕ್ಗಾಗಿ ಮುಸ್ಲಿಮರನ್ನು ಪ್ರಚೋದನೆ ಮಾಡಲಾಗುತ್ತಿದೆ ಎಂದರು.
ಉತ್ತರಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಲಿದೆ. ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಈಗಾಗಲೇ ಮೂರು ತಂಡಗಳು ರಾಜ್ಯ ಪ್ರವಾಸ ಕೈಗೊಂಡಿವೆ. ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸಲು ಕ್ರಮವಹಿಸಲಾಗಿದೆ. ಕಾರ್ಯಕರ್ತರ ಕಷ್ಟ ಸುಖಕ್ಕೂ ಸ್ಪಂದಿಸಲಾಗುತ್ತಿದೆ. ಹಾಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ರಾಜ್ಯ ಕಾರ್ಯಕಾರಿಣಿ ವೇಳೆ ಕೋರ್ ಕಮಿಟಿಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆಯಾಗಿರುತ್ತದೆ. ಬೇರೆ ಏನೂ ಚರ್ಚೆಯಾಗಿರುವುದಿಲ್ಲ. ನಾನು ಕೋರ್ ಕಮಿಟಿ ಸದಸ್ಯನಲ್ಲ. ನಾನು ಕೋರ್ ಕಮಿಟಿ ಸದಸ್ಯನಾಗಿದ್ದರೂ ಅಲ್ಲಿ ನಡೆದ ಚರ್ಚೆ ಕುರಿತು ಬಹಿರಂಗಪಡಿಸುತ್ತಿರಲಿಲ್ಲ ಎಂದರು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ವರಿಷ್ಠರು ಕೂಡ ಈ ಬಗ್ಗೆ ಕರ್ನಾಟಕದಲ್ಲಿ ನಿಗಾವಹಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ಗಿಂತಲೂ ರಾಜ್ಯದಲ್ಲಿ ಸಂಘಟನೆಯಲ್ಲಿ ಬಿಜೆಪಿ ಮುಂದಿದೆ ಎಂದರು.
ವಿಜಯನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್. ಆರ್. ಗವಿಯಪ್ಪನವರು ಪಕ್ಷ ಬಿಡುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಆದರೆ ಅವರು ನನಗೆ ನೇರವಾಗಿ ಹೇಳಿಲ್ಲ. ಉಪ ಚುನಾವಣೆ ವೇಳೆ ಅವರು ಟಿಕೆಟ್ ಕೇಳಿದ್ದರೂ ಮುಂದೆ ಕೊಡುತ್ತೇವೆ ಎಂದು ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮಾತು ಕೊಟ್ಟಿದ್ದರು. ಈಗ ಅವರು ಪಕ್ಷ ಬಿಡುತ್ತಿದ್ದಾರೆ. ಆದರೆ ನಾನು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ನಾಲ್ಕು ಬಾರಿ ಕ್ಷೇತ್ರದ ಜನ ನನಗೆ ಮತ ನೀಡಿ ಗೆಲ್ಲಿಸಿದ್ದಾರೆ. ಶಾಸಕರನ್ನಾಗಿ ಮಾಡಿದ್ದಾರೆ ಎಂದರು.
ವಿಜಯನಗರದ ಜನ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ದಶಕಗಳ ಕೂಗಿಗೆ ಧ್ವನಿಗೂಡಿಸಿ ವಿಜಯನಗರ ಜಿಲ್ಲೆ ಮಾಡಿಸಿರುವೆ. ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಜನ ಮುಂದೆಯೂ ನನ್ನ ಜತೆಗಿರಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಹಂಪಿ ಪ್ರದೇಶದ ಆನೆಗೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇನ್ನೂ 20 ದಿನದೊಳಗೆ ಆಗಮಿಸಲಿದ್ದಾರೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಾಗಾಗಿ ಶೀಘ್ರವೇ ಆನೆಗೊಂದಿಗೆ ತೆರಳಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸುವೆ ಎಂದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ 10 ಸಾವಿರ ಜನಕ್ಕೆ ನಿವೇಶನದ ಪಟ್ಟಾ ನೀಡಲಾಗುವುದು. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಪಟ್ಟಾ ವಿತರಣೆ ಮಾಡಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪಟ್ಟಾ ವಿತರಣೆ ಮಾಡಲಿದ್ದಾರೆ. ವಿಜಯನಗರ ಭಾಗದಲ್ಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ಕಮಲಾಪುರ ಪಪಂ ಅಧ್ಯಕ್ಷ ಸಯ್ಯದ್ ಅಮಾನುಲ್ಲಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ
BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ
Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!
Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ
Ayodhya: ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ: ಶ್ರೀರಾಮುಲು ಆಕ್ರೋಶ