ಜಾನುವಾರು ಜಾತ್ರೆ ಸಕಲ ಸಿದ್ಧತೆಗೆ ಶಾಸಕ ಯತ್ನಾಳ ಸೂಚನೆ
Team Udayavani, Jan 2, 2020, 1:46 PM IST
ವಿಜಯಪುರ: ಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುವ ಉತ್ತರ ಕರ್ನಾಟಕದ ಬೃಹತ್ ಜಾನುವಾರು ಜಾತ್ರೆ ಸಂದರ್ಭದಲ್ಲಿ ರಾಸುಗಳ ಆರೋಗ್ಯಕ್ಕೆ ಸಂಪೂರ್ಣ ಕಾಳಜಿ ವಹಿಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧಿ ಕಾರಿಗಳಿಗೆ ಸೂಚಿಸಿದರು.
ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಭವನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಕರ ಸಂಕ್ರಮಣ ಹಬ್ಬದ ಹಿನ್ನೆಲೆಯಲ್ಲಿ ತೊರವಿಯಲ್ಲಿ ನಡೆಯುವ ಜಾನುವಾರು ಜಾತ್ರೆ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ರಾಸುಗಳು ಆಗಮಿಸುತ್ತವೆ, ಹೀಗಾಗಿ ರಾಸುಗಳಿಗೆ ಸಂಪೂರ್ಣ ಆರೋಗ್ಯ ಸೇವೆ ಒದಗಿಸಬೇಕು. ಯಾವುದೇ
ಕಾರಣಕ್ಕೂ ರಾಸುಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜನವರಿ 10ರಿಂದ 8 ದಿನ ಸಿದ್ದೇಶ್ವರ ಜಾನುವಾರು ಜಾತ್ರೆ ನಡೆಯಲಿದ್ದು, ಜಾನುವಾರು ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳಿಗೆ, ಜಾನುವಾರು ಮಾಲೀಕರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ವಿಶೇಷವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು, ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗಕ್ಕೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಜಾತ್ರೆಯಲ್ಲಿ ಜಾನುವಾರುಗಳಿಗೆ ತ್ವರಿತ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ವಿಶೇಷ ಆಂಬ್ಯುಲೆನ್ಸ್ ನಿಯೋಜನೆ ಮಾಡುವುದು, ಜಾನುವಾರುಗಳಿಗಾಗಿ ರಾತ್ರಿ ಸಂದರ್ಭದಲ್ಲೂ ಪಶು ವೈದ್ಯರ ಸೇವೆ ಹಾಗೂ ರೈತರ ಆರೋಗ್ಯ ರಕ್ಷಣೆಗಾಗಿ 24ಗಿ7 ಆರೋಗ್ಯ ಸೇವೆ ಒದಗಿಸುವ ಕಾರ್ಯ ನಡೆಯಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯಿಂದ ಪ್ರದಾನ ಮಳಿಗೆಗಳನ್ನು ತೆರೆಯಲಾಗುವುದು, ರೈತರಿಗೆ ಇಲಾಖೆ ಯೋಜನೆಗಳನ್ನು ಪರಿಚಯಿಸುವ ಕರ ಪತ್ರಗಳು ಮತ್ತು ಹೊಸ ತಂತ್ರಜ್ಞಾನ ಪರಿಚಯ ಮಾಡಿ. ವ್ಯವಸ್ಥಿತವಾದ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿ, ಹೆಸ್ಕಾಂ ನಿಂದ ನಿರಂತರ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಸಂಚಾರ ವ್ಯವಸ್ಥೆ ಮತ್ತು ರೈತರಿಗೆ ರಾತ್ರಿ ಹೊತ್ತು ಹೆಚ್ಚಿನ ಭದ್ರತೆ ಒದಗಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜನರು ಅಧಿಕವಾಗಿ ಭೇಟಿ ನೀಡುವುದರಿಂದ ಸರ್ಕಾರದ ಎಲ್ಲ ಯೋಜನೆಗಳನ್ನು ಪ್ರಚಾರ ಮಾಡಲು ಮಳಿಗೆಗಳ ವ್ಯವಸ್ಥೆ ಮಾಡಲು ಸೂಚಿಸಿದರು.
ಮಹಾನಗರ ಪಾಲಿಕೆಯಿಂದ ನಗರದ ಸ್ವಚ್ಛತೆಗೆ, ನಗರ ನೀರು ಸರಬರಾಜು ಮಂಡಳಿಯಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದಾಗ, ಪಾಲಿಕೆ ಆಯುಕ್ತ ಹರ್ಷ ಶಟ್ಟಿ ಪ್ರತಿಕ್ರಿಯಿಸಿ, ತೊರವಿಯಲ್ಲಿ ನಡೆಯುವ ಜಾನುವಾರು ಜಾತ್ರೆ ಹಿನ್ನೆಲೆಯಲ್ಲಿ 12,000 ಲೀ. ನೀರಿನ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಎಪಿಎಂಸಿ ಜಂಟಿ ನಿರ್ದೇಶಕ ಆರ್.ಎಂ.ಕುಮಾರಸ್ವಾಮಿ, ಎಪಿಎಂಸಿ ಅಧ್ಯಕ್ಷ ಸುರೇಶ ಬಿರಾದಾರ, ಉಪಾಧ್ಯಕ್ಷ ಸುರೇಶ ತಳವಾರ, ದ್ರಾಕ್ಷಿ ಬೆಳೆಗಾರ ಎಂ.ಎಸ್. ರುದ್ರಗೌಡ, ಎಚ್.ಆರ್.ಉಟಗಿ, ಸದಾಶಿವ ಗುಡ್ಡೋಡಗಿ, ಎಪಿಎಂಸಿ ಪೊಲೀಸ್ ಠಾಣೆ ಪಿಎಸ್ಐ ಸೋಮೇಶ ಗೆಜ್ಜೆ ಪಾಲ್ಗೊಂಡಿದ್ದರು.