ಪ್ರಕೃತಿ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ ರೈತ: ಶಿವಕುಮಾರ
ಪ್ರಕೃತಿ ಸಮತೋಲನ ಕಾಯುವಲ್ಲಿ ಮಹಿಳೆಯರ ಪಾತ್ರ ಮಹತ್ತರ
Team Udayavani, Aug 19, 2019, 3:09 PM IST
ವಿಜಯಪುರ: ಆತ್ಮಾ ಯೋಜನೆಯಲ್ಲಿ ಹಮ್ಮಿಕೊಂಡಿದ್ದ ರೈತ ವಿಜ್ಞಾನಿಗಳ ಚರ್ಚಾಗೋಷ್ಠಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ| ಶಿವಕುಮಾರ ಚಾಲನೆ ನೀಡಿದರು.
ವಿಜಯಪುರ: ಜಿಲ್ಲೆಯಲ್ಲಿ ಒಂದೆಡೆ ಪ್ರವಾಹ ಪರಿಸ್ಥಿತಿ, ಮತ್ತೂಂದೆಡೆ ಮಳೆ ಇಲ್ಲದೇ ಅನಾವೃಷ್ಟಿ, ಪ್ರಕೃತಿ ಹವಾಮಾನ ವೈಪರಿತ್ಯದ ವಿಪರೀತತೆ ಮಧ್ಯೆ ಸಿಲುಕಿರುವ ರೈತರು ದುಸ್ತರ ಬದುಕು ಸಾಗಿಸುವಂತಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ| ಶಿವಕುಮಾರ ಆತಂಕ ವ್ಯಕ್ತಪಡಿಸಿದರು.
ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಇಲಾಖೆಯ ಆತ್ಮಾ ಯೋಜನೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಅಭಿಯಾನ ಹಾಗೂ ಪರ್ಯಾಯ ಬೆಳೆ ಪದ್ಧತಿ ಕುರಿತು ಜರುಗಿದ ರೈತ ವಿಜ್ಞಾನಿಗಳ ಚರ್ಚಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಶೇ. 30 ಮಳೆ ಕೊರತೆಯಾಗಿದ್ದು, ಶೇ. 60 ಪ್ರದೇಶದಲ್ಲಿ ಕೇವಲ 15 ದಿನಗಳಲ್ಲಿ ಶೇ. 40 ಬಿತ್ತನೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಇಂತಹ ಬದಲಾವಣೆ ಎದುರಾಗಲಿವೆ ಎಂದರು.
ಅಗತ್ಯ ಇಲ್ಲದ ಎಲ್ಲೋ ಸುರಿದ ಮಳೆ ಇನ್ನೆಲ್ಲೋ ಹರಿದು ತನ್ನ ಗಂಭೀರ ಪ್ರಭಾವ ಬೀರುತ್ತದೆ. ಪ್ರಕೃತಿಯ ಇಂತಹ ಬೆಳವಣಿಗೆ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂದರು.
ಭಾರತೀಯ ಕೃಷಿ ಅನುಸಂದಾನ ಪರಿಷತ್ ಸಲಹಾ ಮಂಡಳಿ ಸದಸ್ಯ ಬಸವರಾಜ ಕುಂಬಾರ ಮಾತನಾಡಿ, ಪ್ರತಿ ಮನುಷ್ಯನ ಬದುಕಿಗೆ ನೀರು ಎಷ್ಟು ಅಮೂಲ್ಯವೋ ಬೆಳೆಗಳ ಬೆಳವಣಿಗೆಗೂ ಕೂಡ ನೀರು ಅಷ್ಟೇ ಮುಖ್ಯ. ಪ್ರಕೃತಿ ವಿಕೋಪದಿಂದ ಒಂದೆಡೆ ನೆರೆ ಹಾವಳಿ, ಮತ್ತೂಂದೆಡೆ ಮಳೆ ಇಲ್ಲದೇ ಭೀಕರ ಬರ. ಕಳೆದ 30 ವರ್ಷದಲ್ಲಿ ಜಿಲ್ಲೆಯಲ್ಲಿ ಮೂರು ವರ್ಷ ಮಾತ್ರ ವಾಡಿಕೆ ಮಳೆಯಾಗಿರುವ ಕಾರಣ ನಿಸರ್ಗದೊಂದಿಗೆ ಹೊರಾಡುವ ಸಂಕಷ್ಟವನ್ನು ಕಣ್ಣಿಗೆ ಕಟ್ಟುತ್ತದೆ. ವ್ಯರ್ಥವಾಗಿ ಹರಿಯುವ ನೀರು ತಡೆಯಲು ಜಲಾಶಯಗಳನ್ನು ನಿರ್ಮಿಸಿದರೂ ಅನ್ನದಾತರ ಪಾಲಿಗೆ ಇಲ್ಲದಂತ ದುಸ್ಥಿತಿ. ಹೀಗಾಗಿ ಮನುಷ್ಯನಿಂದ ಸೃಷ್ಟಿಸಲು ಸಾಧ್ಯವಿಲ್ಲದ ನೀರು ಹಾಗೂ ಮಣ್ಣು ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯ ವಿದ್ಯಾಧಿಕಾರಿ ಡಾ| ಎಸ್.ಎಂ. ಮುಂದಿನಮನಿ, ರೈತರು ವಿಜ್ಞಾನಿಗಳ ಸಂಪರ್ಕಕ್ಕೆ ಬರುವ ರೈತ ವಿಜ್ಞಾನಿಗಳ ಚರ್ಚಾಗೋಷ್ಠಿ ಅನುಕೂಲವಾಗಿದೆ. ಇಂಥ ನಿರಂತರ ಇಂತಹ ಪ್ರಯತ್ನಗಳಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ನೆರವಾಗಲಿದೆ ಎಂದರು.
ಆತ್ಮಾ ಯೋಜನೆ ರಾಜ ಸಮಿತಿ ಸದಸ್ಯೆ ಮಹಾದೇವಿ ಗೋಕಾಕ ಮಾತನಾಡಿ, ಮಣ್ಣು ಮತ್ತು ನೀರು ಸಂರಕ್ಷಣೆ ಮೂಲಕ ಪ್ರಕೃತಿ ಸಮತೋಲನ ಕಾಯುವಲ್ಲಿ ಮಹಿಳೆಯ ಪಾತ್ರವೇ ಹಿರಿದಾಗಿದೆ. ಹೀಗಾಗಿ ಮಹಿಳೆಯರು ಪರಿಸರ ಸ್ನೇಹಿತ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಸುರೇಶ ಗೊಣಸಗಿ, ಸಹ ಸಂಶೋಧನಾ ನಿರ್ದೇಶಕ ಡಾ| ಎಸ್.ಬಿ. ಕಲಘಟಗಿ ಮಾತನಾಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ| ಎಚ್.ಬಿ. ಬಬಲಾದ, ಆತ್ಮಾ ಯೋಜನೆ ಜಿಲ್ಲಾ ಉಪ ನಿರ್ದೇಶಕ ಡಾ| ಎಂ.ಬಿ. ಪಟ್ಟಣಶೇಟ್ಟಿ, ಕೃಷಿ ವಿಸ್ತರಣಾ ಮುಂದಾಳು ಡಾ| ಆರ್.ಬಿ. ಬೆಳ್ಳಿ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ| ಎಸ್.ಎ. ಬಿರಾದಾರ, ಪಶು ವಿಭಾಗದ ಡಾ| ಸಂಗೀತಾ ಜಾಧವ ರೈತರೊಂದಿಗೆ ಸಂವಾದ ನಡೆಸಿ ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಕೃಷಿಯಲ್ಲಿ ಪರಿಸರ ಸ್ನೇಹಿ ಕೆಲಸ ಮಾಡುವ ಕುರಿತು ವಿವರಿಸಿದರು.