ರಾಜಕೀಯ ಉದ್ಯಮ ಹೋಗಲಾಡಿಸಲು ಪ್ರಜಾಕೀಯ ಬರಲಿ
Team Udayavani, Apr 13, 2019, 5:16 PM IST
ವಿಜಯಪುರ: ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಜಾಕೀಯ ವರಿಷ್ಠ-ನಟ ಉಪೇಂದ್ರ ಮಾತನಾಡಿದರು.
ವಿಜಯಪುರ: ರಾಜಪ್ರಭುತ್ವ ಅಂತ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದ್ದರೂ ಪ್ರಜಾಕೀಯ ಎನ್ನುವ ಬದಲು ರಾಜಕೀಯ ಎಂದು ಕರೆದುಕೊಳ್ಳುತ್ತಾರೆ. ರಾಜಕಾರಣ ಉದ್ಯಮವಾಗಿದೆ. ಹೀಗಾಗಿ ಪ್ರಜಾಕೀಯ
ಆಗದ ಹೊರತು ಪ್ರಜಾಪ್ರಭುತ್ವದಲ್ಲಿ ರಾಜಕೀಯದಿಂದ ಪರಿವರ್ತನೆ
ಅಸಾಧ್ಯ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ
ಅಭಿಪ್ರಾಯಪಟ್ಟರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜಪ್ರಭುತ್ವ ಹೋದ ಮೇಲೆ ಪ್ರಜಾಪ್ರಭುತ್ವ ಬಂದಿದೆ. ರಾಜಕೀಯ ಎಂದು ಯಾರು ಹೆಸರಿಸಿದರೋ ಗೊತ್ತಿಲ್ಲ. ಈ ವರೆಗೆ ಈ ಹೆಸರು ಹಾಗೂ ವ್ಯವಸ್ಥೆ ಬದಲಾಗದ ಕಾರಣ ಪ್ರಜಾಕೀಯ ಮೂಲಕ ಹೊಸ ಅಲೆ ಸೃಷ್ಠಿಸಲು ಮುಂದಾಗಿದ್ದೇವೆ ಎಂದರು.
ರಾಜ್ಯದ ವಿಧಾನಸೌಧದಲ್ಲಿ ಹಳ್ಳಿಯಿಂದ ಬರುವ ಅಮಾಯಕ ಜನ
ಒಳಹೋಗಲಾಗದೇ ಪ್ರಜಾಪ್ರಭುತ್ವದ ಮಾಲೀಕರು ಹೊರಗೆ ಕೈಕಟ್ಟಿ ನಿಂತಿರುತ್ತಾರೆ. ಜನತೆಯ ಕೆಲಸ ಮಾಡಬೇಕಾದ ಕೆಲಸಗಾರ ಒಳಗೆ ಆರಾಮವಾಗಿ ಓಡಾಡುತ್ತಿದ್ದಾರೆ. ರಾಜಕೀಯ ಸೇವೆ ಬದಲು ಕೆಲಸ ಆಗಬೇಕು. ಆದರೆ ದುರ್ದೈವ ಇಲ್ಲಿ ಜನರೇ ರಾಜಕಾರಣಿಗಳ ಸೇವೆ ಮಾಡುವಂತಾಗಿದೆ.
ವಿಧಾನ ಸೌಧದ ಮುಂದೆ ಜನ ಕೆಲಸಕ್ಕಾಗಿ ಕೈ ಕಟ್ಟಿಕೊಂಡು ನಿಂತಾಗ ನನಗೆ ಖೇದವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಿರುವ ಕಾರಣ
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕು. ಜಾತಿ, ಹಣ
ಯಾವುದೇ ಕಾರಣಕ್ಕೂ ಬದುಕಿನ ಮಾನದಂಡ ಆಗಬಾರದು. ಪ್ರಜೆಗಳಿಗೆ
ಸರ್ವಶ್ರೇಷ್ಠ ಅಧಿಕಾರ ಸಿಗಬೇಕು. ಇಂದಿನ ರಾಜಕಾರಣ ಉದ್ಯಮವಾಗಿರುವ ಕಾರಣ, ಪ್ರಜಾಪ್ರಭುತ್ವದ ನೈಜತೆಗಾಗಿ ಪ್ರಜಾಕೀಯ ಮೂಲಕ ಹೊಸ ಪ್ರಯತ್ನವಾಗಿ ಉತ್ತಮ ಪ್ರಜಾಕೀಯ ಪಕ್ಷ ಹುಟ್ಟು ಹಾಕಿ, ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲಾಗಿದೆ. ಉತ್ತಮ ಪ್ರಜಾಕೀಯ ಪಕ್ಷದ ಉದ್ದೇಶ. ಇಲ್ಲಿ ಜನಪ್ರತಿನಿ ಧಿ ಕೆಲಸಗಾರನಾಗಿ ತನ್ನ ಜನಸೇವೆ ಮಾಡಬೇಕು. ಈ ತತ್ವಾದರ್ಶದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಪ್ರಸಕ್ತ ಸಂದರ್ಭದಲ್ಲಿ ಯುವಕರು ನಮ್ಮ ಪಕ್ಷದತ್ತ ಭಾರಿ ನಿರೀಕ್ಷೆ ಇರಿಸಿಕೊಂಡು ಸೇರ್ಪಡೆ ಆಗುತ್ತಿದ್ದಾರೆ. ಹೀಗಾಗಿ ಬರುವ ವಿಧಾನಸಭೆ ಚುನಾವಣೆವರೆಗೆ ಪಕ್ಷವನ್ನು ಸಂಘಟಿಸಲಾಗುತ್ತದೆ. ಇದಕ್ಕಾಗಿ ಪರಿಶ್ರಮ ಪಡುತ್ತಿದ್ದು, ನಾನು ಕೂಡ ಒಂದು ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತೇನೆ. ಇದೀಗ ರಾಜ್ಯದಲ್ಲಿ ಲೋಕಸಭೆಯ 28 ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.
ವಿಜಯಪುರ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಅಭ್ಯರ್ಥಿ ಗುರುಬಸ
ಪರಮೇಶ್ವರ ರಬಕವಿ ಮಾತನಾಡಿ, ಕ್ಷೇತ್ರದಲ್ಲಿ ತಮ್ಮ ಪರವಾಗಿ ಸಾಕಷ್ಟು ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಜನನಿಬಿಡ ಪ್ರದೇಶಗಳಲ್ಲಿ ಪಕ್ಷದ ಪರ ಪ್ರಚಾರ ಮಾತಾಡುತ್ತಿದ್ದೇವೆ. ವ್ಯವಸ್ಥೆ ಬದಲಾವಣೆ ವಿಷಯ ಮುಂದಿಟ್ಟುಕೊಂಡು ಮತ ಯಾಚಿಸುತ್ತಿರುವ ಕಾರಣ ಜನತೆ ನನ್ನ ಪರವಾಗಿ ಉತ್ತಮ ಸ್ಪಂದನೆ ತೋರುತ್ತಿದ್ದಾರೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.